'ಮೋದಿ ಯಾರ ಮಗ' ಎಂದಿದ್ದ ಸಲ್ಮಾನ್, ರಾಹುಲ್ ಗಾಂಧಿಗೆ ಆಪ್ತನೇ?
Recommended Video

ಪ್ರತಿ ಮನೆಯಲ್ಲಿ ಅಫ್ಜಲ್ ಹುಟ್ಟುತ್ತಾನೆ ಎಂಬ ದುರಹಂಕಾರದ ಹೇಳಿಕೆ ನೀಡಿದ್ದ ಸಲ್ಮಾನ್ ನಿಜಾಮಿ, ರಾಹುಲ್ ಗಾಂಧಿಯವರಿಗೆ ಆಪ್ತ ಸ್ನೇಹಿತನೇ..?! ಅಂಥ ಅನುಮಾನಗಳಿಗೆ ಪುರಾವೆ ನೀಡುವಂಥ ಪೋಸ್ಟರ್ ಗಳೀಗ ಗುಜರಾತಿನ ಬೀದಿ ಬೀದಿಯಲ್ಲಿ ರಾರಾಜಿಸುತ್ತಿವೆ.
'ಪ್ರಧಾನಿ ನರೇಂದ್ರ ಮೋದಿ ಯಾರ ಮಗ?' ಎಂದು ಪ್ರಶ್ನಿಸಿ, ಮೋದಿ ಅಭಿಮಾನಿಗಳ ಮಾತ್ರವಲ್ಲ, ಸ್ವತಃ ಮೋದಿಯವರ ಕೆಂಗಣ್ಣಿಗೂ ಪಾತ್ರರಾದ ಯುವ ಕಾಂಗ್ರೆಸ್ ಮುಖಂಡ ಸಲ್ಮಾನ್ ನಿಜಾಮಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಸಲ್ಮಾನ್ ನಿಜಾಮಿಗೂ ನಮಗೂ ಸಂಬಂಧವೇ ಇಲ್ಲ, ಆತನ ಯಾರೆಂಬುದೇ ಗೊತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದೇನೋ ಸರಿ. ಆದರೆ ರಾಹುಲ್ ಗಾಂಧಿಯವರ ಜತೆ ಆಪ್ತ ನಗೆ ಚೆಲ್ಲುತ್ತ ನಿಂತಿರುವ ನಿಜಾಮಿ ಚಿತ್ರಗಳು ಸುಳ್ಳು ಹೇಳುತ್ತವೆಯೇ ಅನ್ನೋದು ಜನರ ಪ್ರಶ್ನೆ!
ಹೌದು, ಸಲ್ಮಾನ್ ಜೊತೆ ರಾಹುಲ್ ಗಾಂಧಿ ಆಪ್ತವಾಗಿ ನಿಂತಿರುವ ಹಲವು ಚಿತ್ರಗಳನ್ನು ಗುಜರಾತಿನ ಬೀದಿಗಳಲ್ಲಿ ಅಂಟಿಸಿ, ಕಾಂಗ್ರೆಸ್ಸಿನ ಮಾನ ಹರಾಜು ಹಾಕುವ ಕಾರ್ಯ ನಡೆಯುತ್ತಿದೆ! ಈ ಕೆಲಸ ಮಾಡುತ್ತಿರುವುದು ಯಾರು ಎಂಬ ಬಗ್ಗೆ ಮಾಹಿತಿ ಇಲ್ಲ.

ಸಲ್ಮಾನ್ ನಿಜಾಮಿ ಟ್ವೀಟ್ ನಲ್ಲೇನಿತ್ತು?
ಸಲ್ಮಾನ್ ನಿಜಾಮಿ, ತನ್ನ ಟ್ವಿಟ್ಟರ್ ನಲ್ಲಿ 'ರಾಹುಲ್ ಗಾಂಧಿಯವರು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ರಾಜೀವ್ ಗಾಂಧಿಯವರ ಪುತ್ರ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಇಂದಿರಾ ಗಾಂಧಿಯವರ ಮೊಮ್ಮಗ. ಅಷ್ಟೇ ಅಲ್ಲ, ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಜವಹರಲಾಲ್ ನೆಹರು ಅವರ ಮೊಮ್ಮಗ... ಆದರೆ ಮೋದಿ ಯಾರು? ಯಾರ ಮಗ? ಯಾರ ಮೊಮ್ಮಗ...?' ಎಂದು ಪ್ರಶ್ನಿಸಿದ್ದ. ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ನರೇಂದ್ರ ಮೋದಿಯವರನ್ನು ಇಂಥ ಹಗುರ ಪದಗಳಿಂದ ನಿಂದಿಸಿದ ಕಾರಣಕ್ಕೆ ಆಕ್ರೋಶ ವ್ಯಕ್ತವಾಗಿತ್ತು.
|
ನರೇಂದ್ರ ಮೋದಿ ಪ್ರತಿಕ್ರಿಯೆ
ಈ ಕುರಿತು ಸ್ವತಃ ಪ್ರತಿಕ್ರಿಯೆ ನೀಡಿದ್ದ ನರೇಂದ್ರ ಮೋದಿ, "ನನ್ನನ್ನು ಪದೇ ಪದೇ ಹಿಯಾಳಿಸುವ, ನನ್ನ ಬಡ ಕುಟುಂಬವನ್ನು ಅಣಕಿಸುವ, ನನ್ನ ಪಾಲಕರು ಯಾರೆಂದು ಕೇಳುವ ಎಲ್ಲ ಕಾಂಗ್ರೆಸ್ ನಾಯಕರಿಗೂ ನಾನೊಂದು ಮಾತನ್ನು ಹೇಳುತ್ತೇನೆ, ನನಗೆ ಈ ದೇಶವೇ ಎಲ್ಲ, ಅದೇ ನನ್ನ ಕುಟುಂಬ. ನನ್ನ ಬದುಕಿನ ಪ್ರತಿ ಘಳಿಗೆಯೂ ಈ ದೇಶಕ್ಕೆ ಮತ್ತು ದೇಶದ 125 ಕೋಟಿ ಜನರಿಗೆ ಸಮರ್ಪಣೆಯಾಗಿದೆ" ಎಂದಿದ್ದರು.

ಭಯೋತ್ಪಾದನೆಗೆ ಬೆಂಬಲ!
ಸಂಸತ್ ಮೇಲೆ ದಾಳಿ ನಡೆಸಿದ್ದ ಅಫ್ಜಲ್ ಗುರುವನ್ನು ನೇಣಿಗೇರಿಸಿದ ಕ್ರಮವನ್ನು ಖಂಡಿಸಿದ್ದ ಸಲ್ಮಾನ್, ಒಬ್ಬ ಅಫ್ಜಲ್ ನನ್ನು ಕೊಂದರೂ, ಪ್ರತಿ ಮನೆಯಲ್ಲೂ ಮತ್ತೆ ಅಫ್ಜಲ್ ಹುಟ್ಟುತ್ತಾನೆ ಎಂಬ ಹೇಳಿಕೆ ನೀಡುವ ಮೂಲಕ ತಾನೊಬ್ಬ ದೇಶದ್ರೋಹಿ ಎಂಬುದನ್ನು ಸಾಬೀತು ಪಡಸಿದ್ದ.

ರಾಹುಲ್-ಸಲ್ಮಾನ್ ಆಪ್ತರೇ?
ರಾಹುಲ್ ಗಾಂಧಿ ಮತ್ತು ಸಲ್ಮಾನ್ ಜೊತೆಯಾಗಿರುವ ಪೋಸ್ಟರ್ ಗಳನ್ನು ಅಹ್ಮದಾಬಾದಿನ ಬೀದಿ ಬೀದಿಗಳಲ್ಲೂ ಅಂಟಿಸಿದ್ದಲ್ಲದೆ, ಅದರ ಮೇಲೆ ಪ್ರತಿ ಮನೆಯಲ್ಲೂ ಅಫ್ಜಲ್ ಹುಟ್ಟಲಿ ಎಂಬ ಸಲ್ಮಾನ್ ಟ್ವೀಟ್ ಅನ್ನೂ ಹಾಕಲಾಗಿದೆ. ಗುಜರಾತಿನಲ್ಲಿ ಡಿ.14 ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, ಈ ಸಂದರ್ಭದಲ್ಲಿ ಇಂಥದೊಂದು ವಿವಾದ ಎದ್ದಿರುವುದು ಕಾಂಗ್ರೆಸ್ಸಿಗೆ ಇರಿಸುಮುರುಸುಂಟು ಮಾಡಿದೆ.












Click it and Unblock the Notifications