ಅಂತೂ ಉಕ್ಕಿನ ಮಹಿಳೆ ಶರ್ಮಿಳಾಗೆ ಸಿಕ್ಕಿತು ಜಯ
ಬೆಂಗಳೂರು, ಆ, 20: ಮಣಿಪುರದ ಉಕ್ಕಿನ ಮಹಿಳೆ ಎಂದೇ ಕರೆಸಿಕೊಳ್ಳುವ ಐರೋಮ್ ಶರ್ಮಿಳಾ ಸುಮಾರು 13 ವರ್ಷಗಳ ನಂತರ ಗೃಹ ಬಂಧನದಿಂದ ಬಿಡುಗಡೆಯಾಗಿದ್ದಾರೆ.
ಮಣಿಪುರ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ 'ಸಶಸ್ತ್ರ ಪಡೆಗಳಿಗೆ ವಿಶೇಷಾಧಿಕಾರ ಕಾಯ್ದೆ ವಿರೋಧಿಸಿ' 13 ವರ್ಷಗಳಿಂದ ಉಪವಾಸ ನಡೆಸುತ್ತಿದ್ದ ಶರ್ಮಿಳಾ ಅವರನ್ನು ಗೃಹ ಬಂಧನದಿಂದ ಮುಕ್ತ ಮಾಡಲಾಗಿದೆ.

43 ವರ್ಷದ ಶರ್ಮಿಳಾ ಅವರಿಗೆ ಮೂಗಿನ ಮೂಲಕ ಆಹಾರ ನೀಡಲಾಗುತ್ತಿದೆ. ಶರ್ಮಿಳಾ ಮೇಲಿರುವ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸ್ಥಳೀಯ ನ್ಯಾಯಾಲಯ ತೀರ್ಮಾನ ನೀಡಿ ಅವರನ್ನು ಬಿಡುಗಡೆ ಮಾಡಿದೆ.
2000 ನೇ ಇಸವಿ ನವೆಂಬರ್ 4 ರಂದು ಮಣಿಪುರದ ರಾಜಧಾನಿ ಇಂಪಾಲದಲ್ಲಿ ಅಸ್ಸಾಂ ಸೇನಾ ಪಡೆ ಒಂಬತ್ತು ಜನರನ್ನು ಹತ್ಯೆ ಮಾಡಿತ್ತು. ಈ ವೇಳೆ ನಾಗರಿಕರ ಹಕ್ಕು ಕಾಪಾಡಲು ಹೋರಾಟಕ್ಕಿಳಿದ ಶರ್ಮಿಳಾ ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರ ಖಂಡಿಸಿ ಉಪವಾಸ ಸತ್ಯಾಗ್ರಹ ಶುರುಮಾಡಿದ್ದರು. ಮೂರು ದಿನದ ನಂತರ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿ ಶರ್ಮಿಳಾ ಅವರನ್ನು ಪೊಲೀಸರು ಬಂಧಿಸಿದ್ದರು.
ಇದಾದ ಮೇಲೆ ಶರ್ಮಿಳಾ ಅವರನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಪಟ್ಟು ಸಡಿಲಿಸದ ಉಕ್ಕಿನ ಮಹಿಳೆ ಮತ್ತ ಉಪವಾಸ ಆರಂಭಿಸಿದರು. ಅವರು ಉಪವಾಸ ಆರಂಭಿಸಿದ ತಕ್ಷಣ ಪೊಲೀಸರು ಬಂಧಿಸುತ್ತಿದ್ದರು. ಈ ಬೆಳವಣಿಗೆ ಪ್ರತಿ ವರ್ಷವೂ ಪುನರಾವರ್ತನೆಯಾಗುತ್ತಿತ್ತು.
ಸಾಮಾನ್ಯ ಮಹಿಳೆ ಉಪವಾಸಕ್ಕೆ ಸವಾಲು ಹಾಕಿದ ಕತೆ
* 2000 ನೇ ಇಸವಿ ನವೆಂಬರ್ 4 ರಂದು ಅಸ್ಸಾಂ ಸಶಸ್ತ್ರ ಪಡೆ 9 ಜನ ನಾಗರಕರನ್ನು ಹತ್ಯೆ ಮಾಡಿದ ದಿನದಿಂದ ಶರ್ಮಿಳಾ ಉಪವಾಸ ಆರಂಭಿಸಿದ್ದರು.
* 43 ವರ್ಷದ ಶರ್ಮಿಳಾ ಯಾವ ಒತ್ತಡ ಬಂದರೂ ಉಪವಾಸ ಮತ್ತು ತನ್ನ ಬೇಡಿಕೆಯಿಂದ ಹಿಂದೆ ಸರಿಯಲಿಲ್ಲ.
* ಮಾನವ ಹಕ್ಕುಗಳ ಪರ ಹೋರಾಟ ಮಾಡಲು ಅಕ್ಟೋಬರ್ 2006ರಲ್ಲಿ ಶರ್ಮಿಳಾ ದೆಹಲಿಯ ಜಂತರ್ ಮಂತರ್ಗೆ ಆಗಮಿಸಿದ್ದರು.
* 2014ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಕಾಂಗ್ರೆಸ್ ಮತ್ತು ಆಮ್ಆದ್ಮಿ ಪಕ್ಷಗಳು ಶರ್ಮಿಳಾ ಬಳಿ ವಿನಂತಿಸಿಕೊಂಡಿದ್ದವು. ಆದರೆ ಶರ್ಮಿಳಾ ಈ ಬೇಡಿಕೆ ತಿರಸ್ಕರಿಸಿದ್ದು 'ನಾನು ರಾಜಕಾರಣಿಯಲ್ಲ, ಸಾಮಾಜಿಕ ಹೋರಾಟಗಾರ್ತಿ, ಇದನ್ನು ಮೊದಲು ಅರ್ಥ ಮಾಡಿಕೊಳ್ಳಿ' ಎಂದು ಹೇಳಿದ್ದರು.
* ಮಾನವ ಹಕ್ಕುಗಳ ಹೋರಾಟಕ್ಕೆ ಸಂಬಂಧಿಸಿ ಶರ್ಮಿಳಾ ಅವರಿಗೆ ಗ್ವಾನ್ಗು, ಮಲೆಯಾಳಂ ಫೌಂಡೇಶನ್ನಿಂದ 'ಮೈಲಮ್ಮಾ', ಮತ್ತು ರವೀಂದ್ರನಾಥ ಠಾಗೋರ್ ಶಾಂತಿ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಲಾಗಿದೆ.
ಯಾವುದಕ್ಕಾಗಿ ಹೋರಾಟ?
* ಮಣಿಪುರ ಸೇರದಂತೆ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿಸಶಸ್ತ್ರ ಪಡೆಗಳಿಗೆ ವಿಶೇಷಾಧಿಕಾರ ನೀಡಿರುವುದನ್ನು ವಿರೋಧಿಸಿ ಹೋರಾಟ ಆರಂಭ.
* ಸಶಸ್ತ್ರ ಪಡೆಗಳಿಗೆ ವಿಶೇಷಾಧಿಕಾರ ಕಾಯ್ದೆ ಸಪ್ಟೆಂಬರ್ 11, 1958ರಲ್ಲಿ ಜಾರಿಯಾಯಿತು.
* ಉಗ್ರಗಾಮಿಗಳ ಹಾವಳಿ ನಿಯಂತ್ರಣಕ್ಕೆ ಈ ಕಾಯ್ದೆ ರೂಪಿಸಲಾಯಿತು.
* ಈಶಾನ್ಯ ರಾಜ್ಯಗಳು ಮತ್ತು ಜಮ್ಮು-ಕಾಶ್ಮೀರಕ್ಕೆ ಈ ಕಾನೂನು ಅನ್ವಯಿಸುತ್ತದೆ.
* ಸಶಸ್ತ್ರ ಪಡೆಗಳಿಗೆ ಈ ಕಾಯ್ದೆ ವಿಶೇಷಾಧಿಕಾರ ನೀಡುತ್ತದೆ. ಅನುಮಾನ ಬಂದವರನ್ನು ಬಂಧಿಸುವ ಮತ್ತು ಹತ್ಯೆ ಮಾಡುವ ಅಧಿಕಾರ ಪೊಲೀಸರಿಗೆ ದೊರೆಯುತ್ತದೆ.












Click it and Unblock the Notifications