ಬಜೆಟ್ 2021: ಭವಿಷ್ಯ ನಿಧಿ ಬಡ್ಡಿದರದ ಮೇಲೆ ತೆರಿಗೆ ಹೊರೆ
ನವದೆಹಲಿ, ಫೆಬ್ರವರಿ 02: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೊರೊನಾ ಸಂಕಷ್ಟ ಕಾಲದಲ್ಲಿ ಮಿನಿ ಬಜೆಟ್ ಮಂಡಿಸಿ ಕೇಂದ್ರ ಸರ್ಕಾರವು ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ ಹಲವು ಸೌಲಭ್ಯಗಳನ್ನು ಕಾರ್ಮಿಕರು, ರೈತರು, ಮಹಿಳೆಯರಿಗೆ ಘೋಷಿಸಿದ್ದರು. ಆದರೆ, ಭವಿಷ್ಯನಿಧಿ ಬಡ್ಡಿದರದಲ್ಲಿ ಯಾವುದೇ ಬದಲಾವಣೆಯಲ್ಲಿ ಕೇಂದ್ರ ಬಜೆಟ್ ಭಾಷಣದಲ್ಲಿ ನಿರ್ಮಲಾ ಅವರು ಮಂಡಿಸಿಲ್ಲ, ಬದಲಿಗೆ ಬಡ್ಡಿದರದ ಮೇಲೆ ತೆರಿಗೆ ವಿಧಿಸಿದ್ದಾರೆ.
ನೌಕರರ ಭವಿಷ್ಯ ನಿಧಿ(ಇಪಿಎಫ್)ಯ ಮೊತ್ತದ ಬಡ್ಡಿ ಮೇಲೆ ತೆರಿಗೆ ವಿಧಿಸಲಾಗಿದೆ. ವಾರ್ಷಿಕ 2.5 ಲಕ್ಷ ರು ಅಥವಾ ಅದಕ್ಕಿಂತ ಅಧಿಕ ಮೊತ್ತದ ಪಿಎಫ್ ದೇಣಿಗೆ ಮೊತ್ತಕ್ಕೆ ಬರುವ ಬಡ್ಡಿ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ಏಪ್ರಿಲ್ 1, 2021ರಿಂದ ಈ ನಿಯಮ ಜಾರಿಯಾಗುತ್ತಿದೆ ಎಂದು ಬಜೆಟ್ 2021ರ ಭಾಷಣದಲ್ಲಿ ನಿರ್ಮಲಾ ಅವರು ಪ್ರಸ್ತಾಪಿಸಿದರು.
ವಾರ್ಷಿಕವಾಗಿ 2 ಲಕ್ಷಕ್ಕಿಂತ ಕಡಿಮೆ ಮೊತ್ತದ ಆದಾಯ ಹೊಂದಿರುವ ನೌಕರರಿಗೆ ಈ ನಿಯಮ ಅನ್ವಯವಾಗುವುದಿಲ್ಲ. ವಾರ್ಷಿಕ 2.5 ಲಕ್ಷ ರುಗು ಅಧಿಕ ಮೊತ್ತದ ದೇಣಿಗೆ ನೀಡುವ ಉದ್ಯೋಗಿಯ ದೇಣಿಗೆ ಬಡ್ಡಿ ಮೇಲೆ ಮಾತ್ರ ತೆರಿಗೆ ಬೀಳಲಿದ್ದು, ಉದ್ಯೋಗದಾತರ ಕೊಡುಗೆಗೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಸ್ವಯಂ ಪ್ರೇರಿತ ಪಿಎಫ್(ವಿಪಿಎಫ್) ಮಾರ್ಗ ಬಳಸಿ ಹೆಚ್ಚು ವರಮಾನವುಳ್ಳ ಉದ್ಯೋಗಿಗಳು ತೆರಿಗೆ ಉಳಿಸುತ್ತಿದ್ದರು. ಇನ್ಮುಂದೆ ತೆರಿಗೆ ಪಾವತಿ ಅನಿವಾರ್ಯವಾಗಲಿದೆ.
ಆದರೆ, ಇಪಿಎಫ್ ಗೆ ಒಟ್ಟಾರೆ ಕೊಡುಗೆ ನೀಡುವವರನ್ನು ಲೆಕ್ಕಕ್ಕೆ ತೆಗೆದುಕೊಂಡರೆ 2.5 ಲಕ್ಷಕ್ಕೂ ಅಧಿಕ ಮೊತ್ತದ ದೇಣಿಗೆ ನೀಡುವವರ ಸಂಖ್ಯೆ ಶೇ 1ಕ್ಕಿಂತ ಕಡಿಮೆಯಿದೆ ಎಂದು ಆಯವ್ಯಯ ಕಾರ್ಯದರ್ಶಿ ಟಿವಿ ಸೋಮನಾಥನ್ ಹೇಳಿದ್ದಾರೆ.
ಬಜೆಟ್ ನಂತರ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ, ಹೆಚ್ಚು ವರಮಾನವುಳ್ಳ ಉದ್ಯೋಗಿಗಳು ಖಾತೆಗೆ 1 ಕೋಟಿ ರು ಹಾಕಿ ಶೇ 8ರಷ್ಟು ಬಡ್ಡಿ ಗಳಿಸುತ್ತಿದ್ದರೆ, ಕಡಿಮೆ ವರಮಾನದವರ ಕತೆಯೇನು, ಸಮತೋಲನ ಕಾಯ್ದುಕೊಳ್ಳಲು ಹೆಚ್ಚು ವರಮಾನವುಳ್ಳರ ದೇಣಿಗೆಯ ಬಡ್ಡಿ ಮೇಲೆ ತೆರಿಗೆ ವಿಧಿಸಲು ಪ್ರಸ್ತಾಪಿಸಲಾಗಿದೆ ಎಂದರು.












Click it and Unblock the Notifications