ಶ್ರೀನಗರ: 3 ಉಗ್ರರ ಬಲಿ, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
ಶ್ರೀನಗರ, ಜು.12: ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಯ ಕೆರಾನ್ ಸೆಕ್ಟರ್ ನಿಂದ ಭಾರತದ ಗಡಿಯೊಳಕ್ಕೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನಿ ಉಗ್ರರನ್ನು ಗಡಿಭದ್ರತಾ ಪಡೆ (ಬಿಎಸ್ಎಫ್) ಯೋಧರು ಹೊಡೆದುರಳಿಸಿದ್ದಾರೆ. ಶಸ್ತ್ರ ಸಜ್ಜಿತ ಉಗ್ರರ ತಂಡದ ಯೋಜನೆಯನ್ನು ಭಾರತೀಯ ಸೇನೆ ಆರಂಭದಲ್ಲೇ ಹತ್ತಿಕ್ಕಿದೆ.
ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಮಧ್ಯರಾತ್ರಿಯಿಂದ ಭಾನುವಾರ ಮುಂಜಾನೆ ತನಕ ಗುಂಡಿನ ಚಕಮಕಿ ನಡೆಯಿತು. ಶಸ್ತ್ರ ಸಜ್ಜಿತ ಉಗ್ರರ ತಂಡದ ಚಟುವಟಿಕೆಯ ಸುಳಿವು ಪಡೆದುಕೊಂಡ ಬಿಎಸ್ಎಫ್ ಯೋಧರು, ಒಳ ನುಸುಳಲು ಪ್ರಯತ್ನಿಸುತ್ತಿದ್ದ ಮೂವರು ಸಶಸ್ತ್ರ ಉಗ್ರರನ್ನು ಕೊಂದು ಹಾಕಿದ್ದಾರೆ ಎಂದು ಸಢೇನಾ ವಕ್ತಾರರೊಬ್ಬರು ತಿಳಿಸಿದ್ದಾರೆ.

ಉಗ್ರರ ಬಳಿ ಇದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ, ಮದ್ದು-ಗುಂಡುಗಳು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಕೆ ರೈಫಲ್ ಗಳು, 12 ಮ್ಯಾಗಜೀನ್ 300 ರೌಂಡ್ಸ್ ಹಾಗೂ ಎರಡು ಯುಬಿಜಿಎಲ್ ಗ್ರೇನೇಡ್ ಹಾಗೂ ಇನ್ನಿತರ ಶಸ್ತ್ರಾಸ್ತ್ರಗಳು ಸಿಕ್ಕಿವೆ.
ಗುಂಡಿನ ಸದ್ದು ಕೇಳಿ ಸಮೀಪದ ಹಳ್ಳಿಗಳ ಗ್ರಾಮಸ್ಥರು ಭೀತಿಗೊಳಗಾಗಿದ್ದರು. ಅದರೆ, ಈ ಪ್ರದೇಶದಲ್ಲಿ ಸೈನಿಕರು ಬಿಗಿ ಕಾವಲು ನಡೆಸಿದ್ದಾರೆ. ನೈಟ್ ವಿಷನ್ ಸಾಧನಗಳಿಂದ ಉಗ್ರರ ನುಸುಳುವಿಕೆಯ ಸ್ಪಷ್ಟ ಚಿತ್ರಣ ಸಿಕ್ಕಿತು. ಎಲ್ ಒಸಿ ಗಡಿಯ ಬೇಲಿಯನ್ನು ತುಂಡರಿಸಲು ಉಗ್ರರು ಯತ್ನಿಸುತ್ತಿದ್ದರು ಎಂದು ಸೇನಾಧಿಕಾರಿ ವಿವರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕ್ ಪ್ರಧಾನಿ ನವಾಜ್ ಷರೀಫ್ ಉಭಯ ದೇಶಗಳ ನಡುವೆ ಶಾಂತಿ ಮಾತುಕತೆಗೆ ಮುಂದಾಗಿರುವ ಸಂದರ್ಭದಲ್ಲೇ ಉಗ್ರರು ನುಸುಳುವಿಕೆಯ ಯತ್ನ ನಡೆಸಿದ್ದಾರೆ. (ಪಿಟಿಐ)












Click it and Unblock the Notifications