'ಕಾಂಗ್ರೆಸ್ ಗೂಂಡಾಗಿರಿ ಅನುಮೋದಿಸ್ತೀರಾ?' ರಾಹುಲ್ಗೆ ಮಧುರ್ ಪ್ರಶ್ನೆ
ಮುಂಬೈ, ಜುಲೈ 16: ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಗಲಭೆ ಸೃಷ್ಟಿಸಿದ್ದರಿಂದ ಶನಿವಾರ ಪುಣೆಯಲ್ಲಿ ನಡೆಯಬೇಕಿದ್ದ 'ಇಂದು ಸರ್ಕಾರ್' ಸಿನಿಮಾದ ಪ್ರಚಾರ ಕಾರ್ಯಕ್ರಮ ರದ್ದಾಗಿದೆ. ಇದೀಗ ನಾಗ್ಪುರದಲ್ಲಿ ನಡೆಯಬೇಕಿದ್ದ ಪತ್ರಿಕಾಗೋಷ್ಠಿಯೂ ಇದೇ ಕಾರಣಕ್ಕೆ ರದ್ದಾಗಿದೆ.
ಇದೇ ವೇಳೆ ಚಿತ್ರದ ನಿರ್ದೇಶಕ ಮಧುರ್ ಭಂಡಾರ್ಕರ್ ಕಾಂಗ್ರೆಸ್ ಕಾರ್ಯಕರ್ತರ ಗೂಂಡಾ ನಡವಳಿಕೆಯನ್ನು ಸಹಿಸಿಕೊಳ್ಳುತ್ತೀರಾ ಎಂದು ರಾಹುಲ್ ಗಾಂಧಿಗೆ ನೇರ ಪ್ರಶ್ನೆ ಎಸೆದಿದ್ದಾರೆ.
ಇಂದಿರಾಗಿತ್ತೆ ನೆಹರೂ ಸೆಕ್ರೆಟರಿ ಜೊತೆ ಸೀಕ್ರೆಟ್ ಸಂಬಂಧ?
ಈ ಕುರಿತು ಟ್ವೀಟ್ ಮಾಡಿರುವ ಅವರು, "ಡಿಯರ್ ರಾಹುಲ್ ಗಾಂಧಿ ಪುಣೆಯ ನಂತರ ಇದೀಗ ನಾಗ್ಪುರದ ಪತ್ರಿಕಾಗೋಷ್ಠಿಯನ್ನೂ ನಾನು ರದ್ದುಪಡಿಸಬೇಕಾಗಿ ಬಂದಿದೆ. ಕಾಂಗ್ರೆಸ್ ಕಾರ್ಯಕರ್ತರ ಈ ಗೂಂಡಾಗಿರಿಯನ್ನು ನೀವು ಒಪ್ಪಿಕೊಳ್ಳುತ್ತೀರಾ? ನನಗೆ ಅಭಿವ್ಯಕ್ತಿ ಸ್ವಾತಂತ್ರ್ಯವೇ ಇಲ್ವಾ?" ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಶನಿವಾರ ಪುಣೆಯಲ್ಲಿ ಮಧುರ್ ಭಂಡಾರ್ಕರ್ ಹಾಗೂ ಚಿತ್ರ ತಂಡದವರು ಉಳಿದುಕೊಂಡಿದ್ದ ಹೊಟೇಲಿಗೆ ನುಗ್ಗಿ ಕಾಂಗ್ರೆಸ್ ಕಾರ್ಯಕರ್ತರು ದಾಂಧಲೆ ನಡೆಸಿದ್ದರು. ಇದೀಗ ನಾಗ್ಪುರದಲ್ಲಿಯೂ ಕಾಂಗ್ರೆಸ್ ಕಾರ್ಯಕರ್ತರಿಗೆ ಬೆದರಿ ಮಧುರ್ ಪತ್ರಿಕಾಗೋಷ್ಠಿಯನ್ನೇ ರದ್ದು ಪಡಿಸಿದ್ದಾರೆ.
'ಇಂದು ಸರ್ಕಾರ್' ತುರ್ತು ಪರಿಸ್ಥಿತಿ, ಇಂದಿರಾ ಗಾಂಧಿ ಮತ್ತು ಆಕೆಯ ಪುತ್ರ ಸಂಜಯ್ ಗಾಂಧಿಯ ಕಥಾನಕವನ್ನು ಹೊಂದಿದೆ. ಇದು ಕಾಂಗ್ರೆಸ್ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ.
Dear @OfficeOfRG after Pune I have 2 cancel today's PressCon at Nagpur.Do you approve this hooliganism? Can I have my Freedom of Expression? pic.twitter.com/y44DXiOOgp
— Madhur Bhandarkar (@imbhandarkar) July 16, 2017
ಈ ಕುರಿತು ಎನ್ಡಿಟಿವಿಗೆ ಪ್ರತಿಕ್ರಿಯೆ ನೀಡಿರುವ ಮಧುರ್ ಬಂಡಾರ್ಕರ್, "ಘಟನೆ ನಿಜಕ್ಕೂ ಅಘಾತಕಾರಿ. ನಾನು ತುರ್ತುಪರಿಸ್ಥಿತಿಯ ಬಗ್ಗೆ ಸಿನಿಮಾ ಮಾಡಿದರೆ ಏನು ಸಮಸ್ಯೆ?" ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಕಾಂಗ್ರೆಸ್ ನ ಪವನ್ ಖೇರಾ, ಪ್ರತಿಭಟನೆಗೂ ನಮಗೂ ಸಂಬಂಧವಿಲ್ಲ. ನಾವು ಈ ಘಟನೆಗಳಿಂದ ದೂರ ಇದ್ದೇವೆ. ಈ ರೀತಿಯ ಘಟನೆಗಳನ್ನು ಟೀಕಿಸುತ್ತೇವೆ ಮತ್ತು ಖಂಡಿಸುತ್ತೇವೆ," ಎಂದು ಹೇಳಿದ್ದಾರೆ.
ಇನ್ನು ಸೆನ್ಸಾರ್ ಮಂಡಳಿ ಸಿನಿಮಾದಲ್ಲಿ 12 ಕಡೆ ಕತ್ತರಿ ಪ್ರಯೋಗಕ್ಕೆ ಸೂಚನೆ ನೀಡಿದ್ದರೆ ಎರಡು ಶಬ್ದಗಳನ್ನು ತೆಗೆಯುವಂತೆ ಹೇಳಿದೆ. ಆರ್.ಎಸ್.ಎಸ್ ಮತ್ತು ಅಕಾಲಿ ಶಬ್ದಗಳನ್ನು ತೆಗೆಯುವಂತೆ ಮಧುರ್ ಭಂಡಾರ್ಕರ್ ಗೆ ಸೂಚನೆ ನೀಡಿದೆ.