ಸೌದಿಯಲ್ಲಿ ಬಲವಂತಕ್ಕೆ ಸಿಕ್ಕು ಬಚ್ಚಲು ತೊಳೆದ ಸಾಫ್ಟ್ ವೇರ್ ಎಂಜಿನಿಯರ್
ಕೋಲ್ಕತ್ತ, ಜೂನ್ 13: ಸಾಫ್ಟ್ ವೇರ್ ಎಜಿನಿಯರ್ ನಿಂದ ಬಚ್ಚಲು ತೊಳೆಯುವ ಕೆಲಸ ಮಾಡಿಸಿದರೆ ಆತನಿಗೆ ಹೇಗಾಗಿರಬೇಕು? ಅದರಲ್ಲೂ ಕಾಣದ ದೇಶದಲ್ಲಿ ಪಾಸ್ ಪೋರ್ಟ್, ವೀಸಾ ಕಸಿದುಕೊಂಡು ಈ ಕೆಲಸ ಮಾಡಲೇಬೇಕು ಎಂದು ಧಮಕಿ ಹಾಕಿದರೆ ಆ ವ್ಯಕ್ತಿಯ ಮಾನಸಿಕ ಸ್ಥಿತಿ ಹೇಗಾಗಿರಬೇಕು?
ಅಂಥ ಸಂಕಷ್ಟವನ್ನು ಸೌದಿ ಅರೇಬಿಯಾದಲ್ಲಿ ಅನುಭವಿಸಿದ ಅಸ್ರಫುಲ್ ಹಲ್ಕ್ ಎಂಬ ಬಿಎಸ್ ಸಿ (ಐಟಿ) ಓದಿಕೊಂಡಿದ್ದ ವ್ಯಕ್ತಿಯನ್ನು ಪಶ್ಚಿಮ ಬಂಗಾಲದ ಸಿಐಡಿ ಪೊಲೀಸರು ಸೋಮವಾರ ವಾಪಸ್ ಕರೆತಂದಿದ್ದಾರೆ. ಆತ ಬುರ್ದ್ ವಾನ್ ಜಿಲ್ಲೆ ಮಂಗಲ್ ಕೋಟೆಯ ನಿವಾಸಿ.

ಇಮೇಲ್ ಮೂಲಕ ತಾನು ಅನುಭವಿಸುತ್ತಿರುವ ಕಷ್ಟ ಹೇಳಿಕೊಂಡ ಅಸ್ರಫುಲ್ ನನ್ನು ರಕ್ಷಿಸಲಾಗಿದೆ. ಮುಂಬೈ ಮೂಲದ ಏಜೆನ್ಸಿ ಮೂಲಕ ಆತ ಸೌದಿ ಅರೇಬಿಯಾಗೆ ತೆರಳಿದ್ದ. ಆತನಿಗೆ ಹೇಳಿದ್ದು ಬ್ಯಾಂಕ್ ವೊಂದರಲ್ಲಿ ಐಟಿ ಸಹಾಯಕ ಹುದ್ದೆ. ಆದರೆ ಅಲ್ಲಿ ನೀಡಿದ್ದುಹೌಸ್ ಕೀಪಿಂಗ್ ಉದ್ಯೋಗ.
ರಿಯಾದ್ ತಲುಪುತ್ತಿದ್ದಂತೆಯೇ ಆತನಿಂದ ಬಲವಂತವಾಗಿ ಪಾಸ್ ಪೋರ್ಟ್, ವೀಸಾ ಎಲ್ಲ ಕಸಿದುಕೊಳ್ಳಲಾಗಿದೆ. ಅಷ್ಟೇ ಅಲ್ಲ, ಈ ಕೆಲಸ ಮಾಡಲ್ಲ ಎಂದಿದ್ದಕ್ಕೆ ಹಿಂಸೆ ಕೂಡ ಕೊಡಲಾಗಿದೆ. ಆತನ ಇಮೇಲ್ ಸಿಕ್ಕ ಮೇಲೆ ಒಂದಿಷ್ಟು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕೆ ಸಮಯ ಹಿಡಿಸಿದ್ದು, ಅಂತೂ ವಾಪಸ್ ಕರೆತರಲಾಗಿದೆ.
ನನಗೆ ಪುನರ್ಜನ್ಮ ನೀಡಿದ ಪಶ್ಚಿಮ ಬಂಗಾಲದ ಮುಖ್ಯಮಂತ್ರಿಗೆ ಋಣಿಯಾಗಿರುತ್ತೇನೆ ಎಂದು ಅಸ್ರಫುಲ್ ಹೇಳಿದ್ದಾರೆ.












Click it and Unblock the Notifications