ಆಗಸ್ಟ್ ತಿಂಗಳವರೆಗೂ ರೈಲ್ವೆ ಸಂಚಾರ ಆರಂಭಿಸುವುದೇ ಅನುಮಾನ!
ನವದೆಹಲಿ, ಜೂನ್.24: ಭಾರತದಲ್ಲಿ ಕೊರೊನಾವೈರಸ್ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಟ್ಟುನಿಟ್ಟಿನ ಲಾಕ್ ಡೌನ್ ನಿಯಮಗಳ ನಡುವೆಯೂ ಆಂತರಿಕ ವಿಮಾನ ಹಾರಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ ರೈಲ್ವೆ ಸಂಚಾರ ಆರಂಭಿಸುವುದು ಅನುಮಾನವಾಗಿದೆ.
ಆಗಸ್ಟ್ ತಿಂಗಳ ಮಧ್ಯಭಾಗವರೆಗೂ ದೇಶದಲ್ಲಿ ರೈಲ್ವೆ ಸೇವೆ ಆರಂಭಿಸದಿರಲು ರೈಲ್ವೆ ಇಲಾಖೆಯು ತೀರ್ಮಾನಿಸಿದೆಯಾ ಎಂಬ ಅನುಮಾನ ಹುಟ್ಟು ಹಾಕಿದೆ. ಇದಕ್ಕೆ ಪೂರಕ ಎನ್ನುವಂತೆ ಏಪ್ರಿಲ್.14ಕ್ಕಿಂತ ಮೊದಲು ಕಾಯ್ದಿರಿಸಿದ ಎಲ್ಲ ಪ್ರಯಾಣಿಕರ ಟಿಕೆಟ್ ಗಳನ್ನು ರದ್ದುಪಡಿಸಲಾಗುತ್ತದೆ ಎಂದು ಭಾರತೀಯ ರೈಲ್ವೆ ಸಚಿವಾಲಯವು ತಿಳಿಸಿದೆ.
ಏಪ್ರಿಲ್.14ಕ್ಕಿಂತ ಮೊದಲು ರೈಲ್ವೆ ಟಿಕೆಟ್ ಕಾಯ್ದಿರಿಸಿದ ಎಲ್ಲ ಪ್ರಯಾಣಿಕರ ಟಿಕೆಟ್ ರದ್ದುಗೊಳಿಸಲಾಗುತ್ತದೆ. ಇದರ ಜೊತೆಗೆ ಟಿಕೆಟ್ ಗೆ ಪ್ರಯಾಣಿಕರು ನೀಡಿದ್ದ ಪೂರ್ತಿ ಹಣವನ್ನು ಮರುಪಾವತಿ ಮಾಡಲಾಗುತ್ತದೆ ಎಂದು ರೈಲ್ವೆ ಸಚಿವಾಲಯವು ಸ್ಪಷ್ಟಪಡಿಸಿದೆ.

ಮೊದಲಿನಂತೆ ವಿಶೇಷ ರೈಲುಗಳ ಸಂಚಾರ:
ದೇಶದಲ್ಲಿ ಅತಿಹೆಚ್ಚಿನ ಬೇಡಿಕೆಯುಳ್ಳ ಮಾರ್ಗಗಳಲ್ಲಿ ಸಂಚರಿಸುವ ಕೆಲವು ರೈಲುಗಳನ್ನು ವಿಶೇಷ ಎಂದು ಗುರುತಿಸಲಾಗಿದೆ. ಹೀಗೆ ವಿಶೇಷ ಎಂದು ಗುರುತಿಸಿರುವ 230 ರೈಲುಗಳ ಸಂಚಾರವು ಮೊದಲಿನಂತೆ ನಡೆಯಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಇದಕ್ಕೂ ಮೊದಲು ಜೂನ್.30ರವರೆಗೂ ಎಲ್ಲಾ ಭಾರತೀಯ ರೈಲುಗಳ ಸಂಚಾರವನ್ನು ನಿಷೇಧಿಸಿತ್ತು. ಆದರೆ ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆ ರೈಲ್ವೆ ಸಂಚಾರಕ್ಕೆ ವಿಧಿಸಿದ ನಿರ್ಬಂಧವನ್ನು ಮುಂದುವರಿಸಲಾಗಿದೆ.
ಭಾರತದಲ್ಲಿ ಬುಧವಾರದ ಅಂಕಿ-ಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲೇ 15,968 ಮಂದಿಗೆ ಕೊವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದೆ. ಒಂದೇ ದಿನ ನೊವೆಲ್ ಕೊರೊನಾವೈರಸ್ ಮಹಾಮಾರಿಗೆ 465 ಮಂದಿ ಪ್ರಾಣ ಬಿಟ್ಟಿದ್ದಾರೆ. ಇದರಿಂದ ದೇಶದಲ್ಲಿ ಮಹಾಮಾರಿಗೆ ಬಲಿಯಾದವರ ಸಂಖ್ಯೆ 14,476ಕ್ಕೆ ಏರಿಕೆಯಾಗಿದೆ. ಇನ್ನು, ಒಟ್ಟು ಸೋಂಕಿತರ ಸಂಖ್ಯೆಯು 4,56,183ಕ್ಕೆ ಹೆಚ್ಚಿದೆ.












Click it and Unblock the Notifications