Train ticket: ಹಿರಿಯ ನಾಗರಿಕರು-ಪತ್ರಕರ್ತರ ರಿಯಾಯಿತಿ ಬಗ್ಗೆ ರೈಲ್ವೆ ಸಚಿವರು ಹೇಳಿದ್ದೇನು?
ಬೆಂಗಳೂರು, ಜನವರಿ 14: ಹಿರಿಯ ನಾಗರಿಕರು ಮತ್ತು ಮಾಧ್ಯಮ ವ್ಯಕ್ತಿಗಳಿಗೆ ಕೋವಿಡ್ ಪೂರ್ವದ ರಿಯಾಯಿತಿಗಳನ್ನು ಮರು ಸ್ಥಾಪಿಸುವ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಕುರಿತು ಭಾರತೀಯ ರೈಲ್ವೆ ಇಲಾಖೆಗೆ ಹಿಂದೆಯು ಮನವಿ ಮಾಡಲಾಗಿತ್ತು. ಇದೀಗ ಈ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿದ್ದಾರೆ.
ಭಾನುವಾರ ವೈಷ್ಣವ್ ಅವರು ಅಹಮದಾಬಾದ್ನಲ್ಲಿ ನಡೆಯುತ್ತಿರುವ ಬುಲೆಟ್ ರೈಲು ಯೋಜನೆಯ ಪ್ರಗತಿಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ದೇಶದ ಹಿರಿಯ ನಾಗರಿಕರು ಮತ್ತು ಪತ್ರಕರ್ತರಿಗೆ ಕೋವಿಡ್ ಪೂರ್ವದ ರಿಯಾಯಿತಿಗಳನ್ನು ಮತ್ತೆ ನೀಡಬೇಕು ಎಂಬ ಮನವಿ ಇದೆ. ಆದರೆ ಪ್ರತಿ ರೈಲು ಪ್ರಯಾಣಿಕರು ಈಗಾಗಲೇ ತಮ್ಮ ಪ್ರಯಾಣದಲ್ಲಿ ಶೇಕಡಾ 55% ರಿಯಾಯಿತಿ ದರದಲ್ಲಿಯೇ ಪ್ರಯಾಣ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

2020ರಲ್ಲಿ ತೆಗೆದಿದ್ದ ರಿಯಾಯಿತಿ
2020ರ ಮಾರ್ಚ್ ನಲ್ಲಿ COVID-19 ಲಾಕ್ಡೌನ್ಗೆ ಮೊದಲು, ರೈಲ್ವೆಯು ಹಿರಿಯ ನಾಗರಿಕರು ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಪತ್ರಕರ್ತರಿಗೆ ಶೇಕಡಾ 50% ದರದ ರಿಯಾಯಿತಿ ನೀಡಲಾಗಿತ್ತು. ಜೂನ್ 2022 ರಲ್ಲಿ ರೈಲ್ವೆ ಕಾರ್ಯಾಚರಣೆಗಳ ಪೂರ್ಣ ಪುನರಾರಂಭದ ಹೊರತಾಗಿಯೂ, ಈ ರಿಯಾಯಿತಿ ನೀಡದೇ ಯಥಾ ಸ್ಥಿತಿಯಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಈ ಬಗ್ಗೆ ಸಂಸತ್ತು ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಚರ್ಚೆಗಳು ನಡೆದಿವೆ.
ಅಗ್ಗದ ದರದಲ್ಲಿ ರೈಲ್ವೆ ಇಲಾಖೆ ಸೇವೆ
ಇದೇ ವಿಚಾರ ಕುರಿತು ಪ್ರಶ್ನೆ ಸಂಸತ್ನಲ್ಲಿ ಕೇಳಿದಾಗ ವೈಷ್ಣವ್ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಸತತವಾಗಿ ಈ ನಿಲುವನ್ನು ವೈಷ್ಣವ್ ಉಳಿಸಿಕೊಂಡಿದ್ದಾರೆ. ಸದ್ಯದ ರಿಯಾಯಿತಿ ಕುರಿತು ಅವರು ಸಮರ್ಥನೆ ನೀಡಿದ್ದಾರೆ. ಸದ್ಯ ನೀವು ಒಂದು ಗಮ್ಯಸ್ಥಾನ ತಲುಪಲು ಪ್ರಯಾಣಿಕರಿಗೆ ರೈಲು ಟಿಕೆಟ್ಗೆ 100 ರೂಪಾಯಿ ಇದ್ದರೆ, ಕೇವಲ 45 ರೂಪಾಯಿಗಳಲ್ಲಿ ಅವರಿಗೆ ಪ್ರಯಾಣ ಸೇವೆ ನೀಡುತ್ತಿದೆ ಎಂದು ತಿಳಿಸಿದ್ದರು.
ಆರ್ಟಿಐ ಅರ್ಜಿಗೆ ಪ್ರತಿಕ್ರಿಯಿಸಿರುವ ರೈಲ್ವೆ ಇಲಾಖೆಯು 2022-23ರ ಹಣಕಾಸು ವರ್ಷದಲ್ಲಿ ಸುಮಾರು 15 ಕೋಟಿ ಹಿರಿಯ ನಾಗರಿಕರಿಂದ ಅಂದಾಜು 2,242 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂಬುದನ್ನು ಬಹಿರಂಗಪಡಿಸಿದೆ.












Click it and Unblock the Notifications