Indian Railways: ವಂದೇ ಭಾರತ್ ರೈಲಿನಲ್ಲಿ ಹಳಸಿದ ಆಹಾರ ವಿತರಿಸಿದವರಿಗೆ ಬಿತ್ತು ₹25,000 ದಂಡ, ಎಲ್ಲಿ?-ಇಲ್ಲಿದೆ ಮಾಹಿತಿ
ನವದೆಹಲಿ, ಜನವರಿ, 12: ವಂದೇ ಭಾರತ್ ರೈಲು ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ಭಾರತದಲ್ಲಿ ಭಾರೀ ಜನಮನ್ನಣೆ ಪಡೆದಿದೆ. ಆದರೆ ಇದೀಗ ಈ ಮಾರ್ಗದ ವಂದೇ ಭಾರತ್ ರೈಲಿನಲ್ಲಿ ಹಳಸಿದ ಹಾಗೂ ಕಳಪೆ ಆಹಾರ ವಿತರಿಸಿದ ಗಂಭೀರ ಆರೋಪ ಮೊದಲ ಬಾರಿಗೆ ಕೇಳಿ ಬಂದಿದ್ದು, ಇದಕ್ಕೆ ಭಾರತೀಯ ರೈಲ್ವೆ ಇಲಾಖೆ ತೆಗೆದುಕೊಂಡ ಸೂಕ್ತ ಕ್ರಮ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನವದೆಹಲಿಯಿಂದ ವಾರಣಾಸಿಗೆ ಹೊರಟಿದ್ದ ವಂದೇ ಭಾರತ್ ರೈಲಿನಲ್ಲಿ ವಾಸನೆ ಬರುತ್ತಿದ್ದ ಆಹಾರದ ಬಗ್ಗೆ ಟ್ವಿಟರ್ನಲ್ಲಿ ಪ್ರಯಾಣಿಕರು ಊಟದ ಸ್ಥಿತಿಗತಿಯನ್ನು ತೆರೆದಿಟ್ಟಿದ್ದರು. ಇದಕ್ಕೆ ಕೂಡಲೇ ಸ್ಪಂದಿಸಿದ ರೈಲ್ವೆ ಅಧಿಕಾರಿಗಳು, ವಂದೇ ಭಾರತ್ ರೈಲಿನ ಆಹಾರದ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಸಂಸ್ಥೆಗೆ ಬರೊಬ್ಬರಿ 25,000 ರೂಪಾಯಿ ದಂಡ ವಿಧಿಸಿದೆ. ಅಲ್ಲದೇ ಇದೇ ರೀತಿಯ ಆಹಾರವನ್ನು ನೀಡುವ ದೂರು ಕೇಳಿ ಬಂದರೆ ಮುಂದೆ ಗುತ್ತಿಗೆ ಕೂಡ ರದ್ದು ಮಾಡುವುದಾಗಿ ಎಚ್ಚರಿಕೆಯನ್ನು ಕೂಡ ನೀಡಿದೆ.

ಆಕಾಶ್ ಕೇಶರಿ ಎಂಬುವವರು ದೆಹಲಿಯಿಂದ ವಾರಣಾಸಿಗೆ (ರೈಲು ವಾಡಿ ಸಂಖ್ಯೆ22416) ವಂದೇ ಭಾರತ್ ರೈಲಿನಲ್ಲಿ ಹೊರಟಿದ್ದರು. ಮಧ್ಯಾಹ್ನದ ವೇಳೆಗೆ ಊಟವನ್ನು ರೈಲಿನಲ್ಲಿಯೇ ಕೊಡಲಾಗುತ್ತಿತ್ತು. ಆದರೆ ಊಟದ ಗುಣಮಟ್ಟ ಅಷ್ಟೇನು ಚೆನ್ನಾಗಿ ಇರಲಲ್ಲ, ವಾಸನೆ ಬರುತ್ತಿತ್ತು. ನಾಲ್ಕೈದು ಪ್ರಯಾಣಿಕರಿಗೆ ಇದೇ ಅನುಭವ ಆಗಿತ್ತು. ಈ ಬಗ್ಗೆ ಊಟ ನೀಡಿದವರಿಗೆ ಮಾಹಿತಿ ಕೊಟ್ಟರೆ, ಅವರಿಂದ ಸ್ಪಂದನೆ ಸಿಕ್ಕಿರಲಿಲ್ಲ. ಕೊಟ್ಟಿರುವ ಊಟ ಮಾಡಿ. ಇಲ್ಲದಿದ್ದರೆ ಬಿಡಿ ಎನ್ನುವ ರೀತಿ ಅವರು ವರ್ತಿಸಿದ್ದರು.
ಊಟದ ತಟ್ಟೆಗಳು ಹಾಗೂ ಬಾಕ್ಸ್ಗಳ ವಿಡಿಯೋ ಮಾಡಿಕೊಂಡಿದ್ದ ಆಕಾಶ್ ಅದನ್ನು ಟ್ವಿಟರ್ ಖಾತೆ ಮೂಲಕ ಹಂಚಿಕೊಂಡಿದ್ದರು. ಭಾರತೀಯ ರೈಲ್ವೆ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ವಂದೇ ಭಾರತ್ ರೈಲು ಅಕೌಂಟ್ಗೆ ಟ್ಯಾಗ್ ಮಾಡಿದ್ದರು. ನನಗೆ ನೀಡಿರುವ ಊಟ ವಾಸನೆ ಬರುತ್ತಿದೆ. ಇದು ಅತ್ಯಂತ ಕೆಟ್ಟ ಊಟ. ಗುಣಮಟ್ಟವಂತೂ ಚೆನ್ನಾಗಿಲ್ಲ. ನನಗೆ ನನ್ನ ಊಟದ ಹಣವನ್ನು ವಾಪಾಸ್ ಮಾಡಿ. ಇಂತಹ ಗುತ್ತಿಗೆದಾರರಿಂದಲೇ ವಂದೇ ಭಾರತ್ ರೈಲಿನ ಹೆಸರು ಹಾಳಾಗುತ್ತಿದೆ ಎಂದು ಆಕಾಶ್ ಆಕ್ರೋಶ ಅಸಮಾಧಾನ ವ್ಯಕ್ತಪಡಿಸಿದ್ದರು.
Sir, our sincere apologies for the unsatisfactory experience you had. The matter is viewed seriously. A suitable penalty has been imposed on the service provider. Further the service provider staff responsible have been disengaged and the licensee has been suitably instructed.…
— IRCTC (@IRCTCofficial) January 11, 2024
ಇದನ್ನು ಗಮನಿಸಿದ ಭಾರತೀಯ ರೈಲ್ವೆಯ ಐಆರ್ಸಿಟಿಸಿ ಎಚ್ಚೆತ್ತುಕೊಂಡು ಈ ಬಗ್ಗೆ ವಿಚಾರಣೆಗೆ ಸೂಚನೆ ನೀಡಿತ್ತು. ಇದು ನಿಜ ಎನ್ನುವುದು ತಿಳಿಯುತ್ತಿದ್ದಂತೆ ಆಹಾರದ ಗುತ್ತಿಗೆ ಪಡೆದವರಿಗೆ 25,000 ರೂಪಾಯಿ ದಂಡ ವಿಧಿಸಿತ್ತು. ನಿಮಗೆ ಆಗಿರುವ ತೊಂದರೆಗೆ ಕ್ಷಮೆ ಯಾಚಿಸುತ್ತೇವೆ. ಇಡೀ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದ್ದು, ನೊಟೀಸ್ ಕೂಡ ಜಾರಿ ಮಾಡಲಾಗಿದೆ ಎಂದು ತಿಳಿಸಿದೆ.
ಅಲ್ಲದೇ ಎಲ್ಲಾ ವಂದೇ ಭಾರತ್ ರೈಲಿನ ಆಹಾರದ ಗುಣಮಟವನ್ನು ನಿಯಮಿತವಾಗಿ ಪರಿಶೀಲಿಸಲು ವಿಭಾಗದ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಆಹಾರದ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಸೇವೆಯನ್ನು ಬಲಪಡಿಸಲಾಗುವುದು ಎಂದು ಐಆರ್ಸಿಟಿಸಿ ಹೇಳಿತ್ತು.
ಇದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ರಾಜಧಾನಿ ಸೇರಿದಂತೆ ಹಲವು ರೈಲುಗಳಲ್ಲಿ ತಮಗೆ ಆಗಿರುವ ಆಹಾರದ ಅನುಭವ ಹಂಚಿಕೊಂಡಿದ್ದಾರೆ. ಹೆಚ್ಚು ಹಣ ಕೊಟ್ಟು ರೈಲ್ವೆ ಆಹಾರದ ಸೇವೆ ಬಳಸುವವರಿಗೆ ಗುಣಮಟ್ಟದ ಆಹಾರ ಸಿಗುವ ಖಾತರಿಯನ್ನು ರೈಲ್ವೆ ಅಧಿಕಾರಿಗಳು ನೀಡಬೇಕು ಎಂದು ಹಲವು ಪ್ರಯಾಣಿಕರು ಟ್ವಿಟರ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications