ಚೀನಾ ಪ್ರಯಾಣಿಕರನ್ನು ಕರೆತರಬೇಡಿ: ವಿಮಾನಯಾನ ಸಂಸ್ಥೆಗಳಿಗೆ ಭಾರತ ಸರ್ಕಾರದ ಸೂಚನೆ
ನವದೆಹಲಿ, ಡಿಸೆಂಬರ್ 28: ಚೀನಾದ ಪ್ರಜೆಗಳನ್ನು ಕರೆದುಕೊಂಡು ಬರದಂತೆ ಭಾರತಕ್ಕೆ ಬರುವ ಎಲ್ಲ ವಿಮಾನ ಸಂಸ್ಥೆಗಳಿಗೂ ಭಾರತದ ನಾಗರಿಕ ವಿಮಾನಯಾನ ಇಲಾಖೆ ಅನೌಪಚಾರಿಕವಾಗಿ ಸೂಚನೆ ನೀಡಿದೆ ಎನ್ನಲಾಗಿದೆ. ಭಾರತ ಮತ್ತು ಚೀನಾ ನಡುವೆ ರಾಜತಾಂತ್ರಿಕ ಹಾಗೂ ಸೇನಾ ಬಿಕ್ಕಟ್ಟು ಮುಂದುವರಿದಿರುವ ಬೆನ್ನಲ್ಲೇ ಈ ಹೊಸ ಬೆಳವಣಿಗೆ ನಡೆದಿದೆ.
ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ಸರ್ಕಾರವು ಅನಧಿಕೃತವಾಗಿ ಈ ಸೂಚನೆಯನ್ನು ನೀಡಿದೆ ಎಂದು ವಿಮಾನಯಾನ ಕೈಗಾರಿಕೆಯ ಮೂಲಗಳು ತಿಳಿಸಿರುವುದಾಗಿ 'ಇಂಡಿಯಾ ಟುಡೆ' ವರದಿ ಮಾಡಿದೆ.
ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಚೀನಾಕ್ಕೆ ತೆರಳುವ ಎಲ್ಲ ವಿಮಾನಗಳ ಹಾರಾಟವನ್ನು ಭಾರತ ಈ ಹಿಂದೆ ನಿರ್ಬಂಧಿಸಿತ್ತು. ಆದರೆ ಬೇರೆ ದೇಶಗಳಿಗೆ ಭಾರತವು ಹೊಂದಿರುವ 'ಏರ್ ಬಬಲ್' ವಿಮಾನ ಸಂಚಾರ ವ್ಯವಸ್ಥೆ ಮೂಲಕ ಚೀನಾದ ಪ್ರಜೆಗಳು ಪ್ರವಾಸಿ ವೀಸಾ ಹೊರತಾಗಿ ಕೆಲವು ನಿರ್ದಿಷ್ಟ ಮಾದರಿಗಳ ವೀಸಾದಡಿ ಭಾರತಕ್ಕೆ ಆಗಮಿಸುತ್ತಿದ್ದಾರೆ. ಮುಂದೆ ಓದಿ.

ಭಾರತದಲ್ಲಿ ಏರ್ ಬಬಲ್ ವ್ಯವಸ್ಥೆ
'ಏರ್ ಬಬಲ್' ವ್ಯವಸ್ಥೆಯು ಭಾರತ ಮತ್ತು ನಿರ್ದಿಷ್ಟ ದೇಶಗಳು ತಮ್ಮ ರಾಷ್ಟ್ರೀಯ ವಿಮಾನಗಳು ಉಭಯ ದೇಶಗಳ ಮಧ್ಯೆ ಹಾರಾಟ ನಡೆಸಲು ವಿವಿಧ ನಿರ್ಬಂಧಗಳ ನಡುವೆ ಅವಕಾಶ ನೀಡುತ್ತದೆ. ಈ ಹಿಂದೆ ಇದ್ದಂತೆ ನಿಗದಿತ ವೇಳಾಪಟ್ಟಿಯಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಮಾನ ಸಂಚಾರಗಳು ನಡೆಯುತ್ತಿಲ್ಲ. ಹೀಗಾಗಿ ಭಾರತವು ಕೆಲವು ದೇಶಗಳ ನಡುವೆ ಒಪ್ಪಂದ ಮಾಡಿಕೊಂಡು ವಿಮಾನ ಹಾರಾಟ ನಡೆಸುತ್ತಿದೆ.

ಭಾರತದ ಸೂಚನೆ
ಹೀಗಾಗಿ ಬೇರೆ ದೇಶಗಳಲ್ಲಿ ನೆಲೆಸಿರುವ ಚೀನಾ ಪ್ರಜೆಗಳು ಕೆಲವು ವೀಸಾಗಳ ಅಡಿಯಲ್ಲಿ ಏರ್ ಬಬಲ್ ಮೂಲಕ ಭಾರತಕ್ಕೆ ಬರಲು ಅವಕಾಶವಿತ್ತು. ಆದರೆ ಈಗ ಚೀನಾದ ಯಾವುದೇ ಪ್ರಜೆಗಳನ್ನು ಹೊತ್ತು ತರದಂತೆ ಸರ್ಕಾರ ಸೂಚನೆ ನೀಡಿದೆ ಎನ್ನಲಾಗಿದೆ. ಇದಕ್ಕೂ ಮುನ್ನ ಭಾರತದ ಪ್ರಯಾಣಿಕರು ಚೀನಾಕ್ಕೆ ಬಾರದಂತೆ ಅಲ್ಲಿನ ಸರ್ಕಾರ ನಿರ್ಬಂಧಿಸಿತ್ತು.

ಭಾರತದಲ್ಲಿನ ವಿದೇಶೀಯರಿಗೆ ಅವಕಾಶವಿಲ್ಲ
'ಸೂಕ್ತ ಚೀನಾ ವೀಸಾ ಅಥವಾ ವಾಸದ ಅನುಮತಿಗಳನ್ನು ಹೊಂದಿರುವ ಭಾರತದಲ್ಲಿನ ವಿದೇಶಿ ಪ್ರಜೆಗಳು ಕೊರೊನಾ ವೈರಸ್ ಸೋಂಕಿನ ಕಾರಣ ಚೀನಾಕ್ಕೆ ಆಗಮಿಸುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಭಾರತದಲ್ಲಿನ ಚೀನಾದ ರಾಯಭಾರ ಕಚೇರಿಯು ಈ ಮೇಲೆ ಉಲ್ಲೇಖಿಸಿದ ವೀಸಾ ವರ್ಗಗಳು ಅಥವಾ ವಾಸ ಅನುಮತಿ ಹೊಂದಿದ್ದರೂ ಆರೋಗ್ಯ ಘೋಷಣೆ ಅರ್ಜಿಗಳಿಗೆ ಮುದ್ರೆ ಹಾಕುವುದಿಲ್ಲ' ಎಂದು ನವೆಂಬರ್ 5ರಂದು ಚೀನಾ ರಾಯಭಾರ ಕಚೇರಿ ತಿಳಿಸಿತ್ತು.

ಮುನ್ನೆಚ್ಚರಿಕೆ ಕಾರಣದಿಂದ ಕ್ರಮ
'ಜಾಗತಿಕವಾಗಿ ಕೊರೊನಾ ಪ್ರಕರಣಗಳು ಹೆಚ್ಚುವ ಭೀತಿಯಿಂದ ಚೀನಾ ಈ ಕ್ರಮಗಳನ್ನು ತೆಗೆದುಕೊಂಡಿರಬಹುದು. ಚಳಿಗಾಲ ಬರುತ್ತಿರುವುದಿಂದ ವೈರಸ್ ಪ್ರಭಾವ ಹೆಚ್ಚಾಗಬಹುದು ಎಂಬ ಉದ್ದೇಶ ಇದರ ಹಿಂದೆ ಇರುವಂತಿದೆ. ಚೀನಾಕ್ಕೆ ಹೋಗುವ ಮತ್ತು ಬರುವ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಭಾರತವು ಚೀನಾ ಅಧಿಕಾರಿಗಳ ಜತೆ ಸಂಪರ್ಕದಲ್ಲಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಗ ಪ್ರತಿಕ್ರಿಯೆ ನೀಡಿತ್ತು.

ಚೀನಾದಲ್ಲಿ ಸಿಲುಕಿರುವ ನಾವಿಕರು
ಆದರೆ, ಭಾರತ ಮತ್ತು ಚೀನಾ ನಡುವೆ ತಲೆದೋರಿರುವ ಇನ್ನೊಂದು ಬಿಕ್ಕಟ್ಟಿನ ಕಾರಣ ಭಾರತವು ಚೀನಾ ಪ್ರಜೆಗಳ ಪ್ರಯಾಣದ ಮೇಲೆ ನಿರ್ಬಂಧ ವಿಧಿಸಿದೆ ಎನ್ನಲಾಗಿದೆ. ಆಸ್ಟ್ರೇಲಿಯಾದಿಂದ ಕಲ್ಲಿದ್ದಲು ಸಾಗಿಸುವ ಭಾರತದ ಎರಡು ಹಡುಗಳು ಹಲವಾರು ತಿಂಗಳಿನಿಂದ ಚೀನಾದ ಬಂದರಿನಲ್ಲಿ ಸಿಲುಕಿಕೊಂಡಿದೆ. ಕೋವಿಡ್ ಕ್ವಾರೆಂಟೈನ್ ನೆಪವೊಡ್ಡಿ ಭಾರತದ ನಾವಿಕರು ತಾಯ್ನಾಡಿಗೆ ವಾಪಸಾಗಲು ಚೀನಾ ಬಿಡುತ್ತಿಲ್ಲ. ಎರಡು ಹಡಗುಗಳಲ್ಲಿನ ಸುಮಾರು 39 ನಾವಿಕರ ಸ್ಥಿತಿ ಹೀನಾಯವಾಗಿದೆ.












Click it and Unblock the Notifications