ಶ್ರೀಲಂಕಾ ನೌಕಾಪಡೆಯಿಂದ ಭಾರತೀಯ ಮೀನುಗಾರನ ಹತ್ಯೆ
ರಾಮೇಶ್ವರಂನಿಂದ ಎಂದಿನಂತೆ ಸಹಚರರೊಡನೆ ಮೀನು ಹಿಡಿಯಲು ನೀರಿಗಿಳಿದಿದ್ದ ಬಿಸ್ಟೋ. ಮೀನು ಹಿಡಿದು ವಾಪಸ್ಸಾಗುವಾಗ ಮೀನುಗಾರರ ಮೇಲೆ ಗುಂಡಿನ ದಾಳಿ; ಘಟನೆಯಲ್ಲಿ ಇನ್ನಿಬ್ಬರು ಗಾಯಾಳು.
ಮಧುರೈ, ಮಾರ್ಚ್ 7: ಸಮುದ್ರದಲ್ಲಿ ಮೀನು ಹಿಡಿಯಲು ದೋಣಿಯಲ್ಲಿ ತೆರಳಿದ್ದ ತಮಿಳುನಾಡಿನ ರಾಮೇಶ್ವರಂನ ಮೀನುಗಾರನೊಬ್ಬನ ಮೇಲೆ ಶ್ರೀಲಂಕಾದ ನೌಕಾ ಪಡೆಯು ಗುಂಡಿನ ಮಳೆಗರೆದು ಹತ್ಯೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಗುಂಡಿನ ಮಳೆಗರೆದ ಬಗ್ಗೆ ಶ್ರೀಲಂಕಾ ಸರ್ಕಾರ ಯಾವುದೇ ಸ್ಪಷ್ಟನೆ, ಪ್ರಕಟಣೆ ಹೊರಡಿಸಿಲ್ಲ.
ಬಿಸ್ಟೋ (22) ಎಂಬಾತ ಮೃತ ದುರ್ದೈವಿ. ಸೋಮವಾರ, ಸುಮಾರು 400 ಮೀನುಗಾರರು ರಾಮೇಶ್ವರಂನಿಂದ ಮೀನು ಹಿಡಿಯಲೆಂದು ತಂತಮ್ಮ ದೋಣಿಗಳಲ್ಲಿ ಸಮುದ್ರಕ್ಕೆ ಇಳಿದಿದ್ದರು.

ಮೀನು ಹಿಡಿಯುತ್ತಾ ಪಾಲ್ಕ್ ಸ್ಟ್ರೇನ್ಸ್ ಎಂಬ ಸಾಗರ ಪ್ರಾಂತ್ಯದವರೆಗೂ ದೋಣಿಗಳು ಸಾಗಿದ್ದವೆಂದು ಹೇಳಲಾಗಿದೆ. ಅಲ್ಲಿ ಮೀನು ಹಿಡಿಯುವ ಕಾಯಕ ಮುಗಿದ ನಂತರ, ಅವರೆಲ್ಲರೂ ರಾಮೇಶ್ವರಂ ಕಡೆಗೆ ವಾಪಸ್ಸಾಗುತ್ತಿದ್ದಾಗ ಶೂಟೌಟ್ ನಡೆದಿದೆ.
ಸಾಗರದಲ್ಲಿ ಹಿಂಬರುತ್ತಿದ್ದಾಗ ಬಿಸ್ಟೋ ಹಾಗೂ ಸಹಚರರು ಇದ್ದ ದೋಣಿಯ ಕಡೆಗೆ ಶ್ರೀಲಂಕಾ ನೌಕಾ ಪಡೆಯು ಗುಂಡು ಹಾರಿಸಿತೆಂದು ಸಹ ಮೀನುಗಾರರು ಆರೋಪಿಸಿದ್ದಾರೆ.
ಘಟನೆಯಲ್ಲಿ ಇನ್ನಿಬ್ಬರು ಮೀನುಗಾರರೂ ಗಾಯಗೊಂಡಿದ್ದು ಅವರನ್ನು ರಾಮೇಶ್ವರಂನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೇ ಆಸ್ಪತ್ರೆಯಲ್ಲಿ ಬಿಸ್ಟೋನ ಅವರ ಶವವನ್ನೂ ತರಲಾಗಿದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications