ತಾಲಿಬಾನ್ ಭೇಟಿ ಮಾಡಿದ ಭಾರತೀಯ ನಿಯೋಗ
ನವದೆಹಲಿ, ಜೂನ್ 3: ಭಾರತದ ನಿಯೋಗವೊಂದು ನಿನ್ನೆ ಗುರುವಾರ ತಾಲಿಬಾನ್ ಆಡಳಿತಗಾರರನ್ನು ರಾಜಧಾನಿ ಕಾಬೂಲ್ನಲ್ಲಿ ಭೇಟಿ ಮಾಡಿದೆ. ಕಳೆದ ವರ್ಷ ಇಲ್ಲಿ ತಾಲಿಬಾನ್ ಆಡಳಿತಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಎರಡೂ ದೇಶಗಳ ಪ್ರತಿನಿಧಿಗಳು ಸಂಧಿಸಿರುವುದು.
ಅಮೆರಿಕದ ಸೇನೆ ವಾಪಸ್ ಹೋದ ಬಳಿಕ ಕ್ಷಿಪ್ರ ಕಾರ್ಯಾಚರಣೆ ಮೂಲಕ ಅಫ್ಗಾನಿಸ್ತಾನದಲ್ಲಿ ಅಧಿಕಾರ ವಹಿಸಿಕೊಂಡ ತಾಲಿಬಾನ್ ಸರಕಾರವನ್ನು ಭಾರತ ಇನ್ನೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ತಾಲಿಬಾನ್ ಅಡಳಿತ ಬಂದ ಮೇಲೆ ಕಾಬೂಲ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ತನ್ನ ಎಲ್ಲಾ ಸಿಬ್ಬಂದಿಯನ್ನೂ ಭಾರತ ವಾಪಸ್ ಕರೆಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತದ ನಿಯೋಗ ತಾಲಿಬಾನ್ ಸರಕಾರವನ್ನು ಭೇಟಿ ಮಾಡುತ್ತಿರುವುದು ಕುತೂಹಲ ಮೂಡಿಸಿದೆ.
ಐತಿಹಾಸಿಕ ಸಂಬಂಧದ ಹಿನ್ನೆಲೆಯಲ್ಲಿ ಮರುಯತ್ನ:
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಇದ್ದರೂ ಐತಿಹಾಸಿಕವಾಗಿ ಆ ದೇಶದ ಜನರ ಜೊತೆ ಭಾರತಕ್ಕೆ ಉತ್ತಮ ಬಾಂಧವ್ಯ ಇದೆ. ಆ ಬೆಸುಗೆಯ ಆಧಾರದಲ್ಲಿ ನಾವು ಅಫ್ಘಾನಿಸ್ತಾನದಲ್ಲಿ ಹೆಜ್ಜೆ ಇಡುತ್ತೇವೆ ಎಂದು ಭಾರತದ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗಚಿ ಗುರುವಾರ ಹೇಳಿದ್ದಾರೆ.

"ಭಾರತೀಯ ನಿಯೋಗದ ಸದಸ್ಯರು ತಾಲಿಬಾನ್ನ ಹಿರಿಯ ನಾಯಕರನ್ನು ಭೇಟಿ ಮಾಡಲಿದ್ದಾರೆ. ಅಫ್ಘಾನಿಸ್ತಾನದ ಜನರಿಗೆ ಮಾನವೀಯತಾ ಸಹಾಯ ಮಾಡುವ ಸಂಬಂಧ ಚರ್ಚೆ ನಡೆಸಲಿದ್ದಾರೆ" ಎಂದೂ ಬಾಗಚಿ ಮಾಹಿತಿ ನೀಡಿದ್ದಾರೆ.
ಸದ್ಯ ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಎಲ್ಲಾ ಭಾರತೀಯ ಸಿಬ್ಬಂದಿಯನ್ನೂ ವಾಪಸ್ ಕರೆಸಿಕೊಳ್ಳಲಾಗಿದೆ. ತಾಲಿಬಾನ್ ಆಡಳಿತಕ್ಕೆ ಮುಂಚೆ ಭಾರತ ನಡೆಸುತ್ತಿದ್ದ ಅಭಿವೃದ್ಧಿ ಯೋಜನೆಗಳೆಲ್ಲವೂ ನಿಂತುಹೋಗಿವೆ. ತಾಲಿಬಾನ್ ಈಗ ಭಾರತದ ಜೊತೆಗಿನ ಸಂಬಂಧಕ್ಕೆ ಮತ್ತೆ ಜೀವ ತುಂಬಲು ಆಸಕ್ತಿ ತೋರುತ್ತಿದೆ.

ಭಾರತ ನಿಲ್ಲಿಸಿರುವ ಯೋಜನೆಗಳನ್ನು ಪುನಾರಂಭಿಸಬೇಕು ಮತ್ತು ರಾಜತಾಂತ್ರಿಕ ಸಂಬಂಧ ಮರುಸ್ಥಾಪಿಸಿ ಅಫ್ಘನ್ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ತಾಲಿಬಾನ್ ಹಿರಿಯ ಮುಖಂಡ ಆಮಿರ್ ಖಾನ್ ಮೋಟಾಕಿ ಹೇಳಿದ್ಧಾರೆ. ಭಾರತದ ಜೊತೆ ವ್ಯಾಪಾರ ಸಂಬಂಧಕ್ಕೂ ತಾಲಿಬಾನ್ ಉತ್ಸಾಹ ತೋರಿದೆ.
ಅಫ್ಘಾನಿಸ್ತಾನಕ್ಕೆ ಹೋಗಿರುವ ಭಾರತದ ನಿಯೋಗವು ಕೇವಲ ತಾಲಿಬಾನ್ ನಾಯಕರನ್ನು ಭೇಟಿ ಮಾಡುವುದು ಮಾತ್ರವಲ್ಲ, ಆ ದೇಶದ ವಿವಿಧೆಡೆ ಭಾರತ ಭಾಗಿಯಾಗಿರುವ ಯೋಜನೆ ಮತ್ತು ಕಾಮಗಾರಿಗಳು ನಡೆಯುತ್ತಿದ್ದ ಸ್ಥಳಗಳಿಗೂ ಭೇಟಿಯಾಗಲಿದೆ.
ತಾಲಿಬಾನ್ ಆಡಳಿತಕ್ಕೆ ಬಂದ ಬಳಿಕ ಅಫ್ಘಾನಿಸ್ತಾನ ವಿವಿಧ ಕಾರಣಗಳಿಂದ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಕೆಲ ಅಂತರರಾಷ್ಟ್ರೀಯ ದಿಗ್ಬಂಧನಗಳು ತಾಲಿಬಾನ್ ಸರಕಾರದ ಕೈ ಕಟ್ಟಿಹಾಕಿದೆ. ಈ ಸಂದರ್ಭದಲ್ಲಿ ಅಫ್ಘಾನಿಸ್ತಾನಕ್ಕೆ ಭಾರತದ ನೆರವು ಬಹಳ ಅಗತ್ಯ ಎನಿಸಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications