ಪ್ರಚೋದನಾಕಾರಿ ವರ್ತನೆಗಾಗಿ ಚೀನಾಕ್ಕೆ ಎಚ್ಚರಿಕೆ ನೀಡಿದ ಭಾರತ
ನವದೆಹಲಿ, ಸೆಪ್ಟೆಂಬರ್ 5: ಭಾರತವು ತನ್ನ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಿಕೊಳ್ಳುವಲ್ಲಿನ ದೃಢ ನಿರ್ಧಾರದ ಬಗ್ಗೆ ಯಾವುದೇ ಅನುಮಾನ ಹೊಂದಿಲ್ಲ ಎಂದು ಚೀನಾಕ್ಕೆ ತೀಕ್ಷ್ಣವಾಗಿ ತಿಳಿಸಿದೆ.
ರಷ್ಯಾದ ಮಾಸ್ಕೋದಲ್ಲಿ ಶುಕ್ರವಾರ ನಡೆದ ಚೀನಾ ರಕ್ಷಣಾ ಸಚಿವ ಜನರಲ್ ವೀ ಫೆಂಘೆ ಅವರೊಂದಿಗಿನ ಮಾತುಕತೆಯ ಮಾಹಿತಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೀಡಿದ್ದಾರೆ.
ಲಡಾಖ್ನ ವಾಸ್ತವ ಗಡಿ ರೇಖೆಯ ಬಳಿ ಮೇ ತಿಂಗಳಿನಿಂದ ಆರಂಭವಾದ ಉದ್ವಿಗ್ನ ಸ್ಥಿತಿಯ ನಂತರ ಭಾರತ-ಚೀನಾ ನಡುವಿನ ಮೊದಲ ರಾಜಕೀಯ ಭೇಟಿ ಇದಾಗಿದೆ. ರಕ್ಷಣಾ ಸಚಿವರ ಮಟ್ಟದ ಶಾಂಘೈ ಸಹಕಾರ ಸಂಘದ (ಎಸ್ಸಿಒ) ಸಭೆಯ ವೇಳೆ ಈ ಎರಡೂ ದೇಶಗಳ ರಕ್ಷಣಾ ಸಚಿವರು ಸುಮಾರು 2 ಗಂಟೆ ನಡೆಯಿತು.
ಕಳೆದ ಕೆಲವು ತಿಂಗಳಿನಿಂದ ಭಾರತ-ಚೀನಾ ಗಡಿ ಪ್ರದೇಶದ ಪಶ್ಚಿಮ ವಲಯದ ಗಲ್ವಾನ್ ಕಣಿವೆ ಸೇರಿದಂತೆ ವಾಸ್ತವ ಗಡಿ ರೇಖೆ (ಎಲ್ಎಸಿ) ಉದ್ದಕ್ಕೂ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ರಕ್ಷಣಾ ಸಚಿವರು ಭಾರತದ ನಿಲುವನ್ನು ಚೀನಾಕ್ಕೆ ತೀಕ್ಷ್ಣವಾಗಿ ಮನದಟ್ಟು ಮಾಡಿದ್ದಾರೆ ಎಂದು ಸಚಿವಾಲಯ ಹೇಳಿದೆ. ಮುಂದೆ ಓದಿ.

ಚೀನಾ ಪ್ರಚೋದನಾಕಾರಿ ವರ್ತನೆ
ಚೀನಾವು ಅಧಿಕ ಸಂಖ್ಯೆಯ ಪಡೆಗಳನ್ನು ನುಗ್ಗಿಸುತ್ತಿರುವುದು, ಅವರ ಪ್ರಚೋದನಾಕಾರಿ ವರ್ತನೆ ಮತ್ತು ದ್ವಿಪಕ್ಷೀಯ ಒಪ್ಪಂದಗಳನ್ನು ಮುರಿದು ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಿಸುವ ಪ್ರಯತ್ನ ನಡೆಸಿರುವುದು ಹಾಗೂ ಎರಡೂ ದೇಶಗಳ ವಿಶೇಷ ಪ್ರತಿನಿಧಿಗಳ ನಡುವಿನ ತಿಳಿವಳಿಕೆಗಳನ್ನು ಕಡೆಗಣಿಸುವ ಚೀನಾ ಪಡೆಗಳ ಕೃತ್ಯವನ್ನು ಅವರು ಪ್ರಸ್ತಾಪಿಸಿದರು.

ನಮ್ಮ ದೃಢ ನಿರ್ಧಾರದ ಬಗ್ಗೆ ಅನುಮಾನವಿಲ್ಲ
ಗಡಿ ವಿಚಾರದ ನಿರ್ವಹಣೆಯಲ್ಲಿ ಭಾರತದ ಪಡೆಗಳು ಯಾವಾಗಲೂ ಬಹಳ ಜವಾಬ್ದಾರಿಯುತ ನಿಲುವನ್ನು ತೆಗೆದುಕೊಳ್ಳುತ್ತಿದೆ. ಆದರೆ ಇದೇ ವೇಳೆಗೆ ಭಾರತದ ಸಾರ್ವಭೌಮತೆ ಹಾಗೂ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸುವುದರಲ್ಲಿನ ನಮ್ಮ ಅಚಲ ನಿರ್ಧಾರದ ಬಗ್ಗೆಯೂ ಸಂಶಯ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ ಎಂಬುದಾಗಿ ಹೇಳಿಕೆ ತಿಳಿಸಿದೆ.

ಒಪ್ಪಂದಗಳಿಗೆ ಬದ್ಧರಾಗಿರಿ
ಪ್ಯಾಂಗಾಂಗ್ ಸರೋವರ ಸೇರಿದಂತೆ ಎಲ್ಲ ಸಂಘರ್ಷ ಪೀಡಿತ ಪ್ರದೇಶಗಳಿಂದ ಹಾಗೂ ಗಡಿಯಿಂದ ಕೂಡಲೇ ಪಡೆಗಳನ್ನು ಸಂಪೂರ್ಣವಾಗಿ ಹಿಂದಕ್ಕೆ ಕರೆಸಿಕೊಳ್ಳುವ ವಿಚಾರದಲ್ಲಿ ಭಾರತದೊಂದಿಗೆ ಚೀನಾ ಕೆಲಸ ಮಾಡುವುದು ಮುಖ್ಯವಾಗಿದೆ. ದ್ವಿಪಕ್ಷೀಯ ಒಪ್ಪಂದಗಳು ಹಾಗೂ ಶಿಷ್ಟಾಚಾರಗಳಿಗೆ ಬದ್ಧರಾಗಿರಬೇಕು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಉಲ್ಟಾ ಹೇಳಿದ ಚೀನಾ ಮಾಧ್ಯಮ
ಆದರೆ ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ಭಾರತದೊಂದಿಗಿನ ಸಭೆಯ ಫಲಿತಾಂಶವನ್ನು ಬೇರೆಯದೇ ರೀತಿ ಪ್ರಕಟಿಸಿವೆ. ಗಡಿಯಲ್ಲಿನ ಉದ್ವಿಗ್ನತೆಗೆ ಏಕೈಕ ಹೊಣೆ ನೀವೇ ಎಂದು ಭಾರತಕ್ಕೆ ಹೇಳಿರುವುದಾಗಿ ಮಾಧ್ಯಮ ಹೇಳಿದೆ.
'ಚೀನಾ-ಭಾರತ ಗಡಿ ಉದ್ವಿಗ್ನತೆಗೆ ಸಂಪೂರ್ಣ ಹೊಣೆಗಾರಿಕೆಯನ್ನು ಭಾರತ ಹೊತ್ತುಕೊಂಡಿದೆ. ಚೀನಾ ಸೇನೆಯು ಚೀನಾದ ಪ್ರಾದೇಶಕ ಸಮಗ್ರತೆಯನ್ನು ಕಾಪಾಡುವ ವಿಶ್ವಾಸ, ಬದ್ಧತೆ ಹಾಗೂ ಸಾಮರ್ಥ್ಯವನ್ನು ಹೊಂದಿದೆ ಎಂದು ಚೀನಾ ರಕ್ಷಣಾ ಸಚಿವ ವೀ ಫೆಂಘೆ ಸಭೆಯ ವೇಳೆ ಭಾರತದ ಸಚಿವರಿಗೆ ತಿಳಿಸಿದ್ದಾರೆ' ಎಂದು ಗ್ಲೋಬಲ್ ಟೈಮ್ಸ್ ಟ್ವೀಟ್ ಮಾಡಿತ್ತು.












Click it and Unblock the Notifications