ದೇಶದಲ್ಲಿ ಶಾಲೆ, ಮೆಟ್ರೋ, ಚಿತ್ರಮಂದಿರ ತೆರೆಯುವುದು ಯಾವಾಗ?
ನವದೆಹಲಿ, ಆಗಸ್ಟ್.23: ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ಪ್ರಕರಣಗಳ ಸಂಖ್ಯೆ ಒಂದು ದಿಕ್ಕಿನಲ್ಲಿ ಏರಿಕೆಯಾಗುತ್ತಿದೆ. ಇದರ ನಡುವೆ ದೇಶದಲ್ಲಿ ಅನ್ ಲಾಕ್ ಪ್ರಕ್ರಿಯೆ ಜಾರಿಗೊಳಿಸಲು ಕೇಂದ್ರ ಸರ್ಕಾರವು ಸಿದ್ಧತೆ ನಡೆಸಿದೆ.
ದೇಶದಲ್ಲಿ ಸಪ್ಟೆಂಬರ್ ತಿಂಗಳಿನಲ್ಲಿ ಮತ್ತಷ್ಟು ವಲಯಗಳ ಮೇಲೆ ಹೇರಿರುವ ನಿರ್ಬಂಧವನ್ನು ತೆರವುಗೊಳಿಸುವುದಕ್ಕೆ ಸರ್ಕಾರವು ಚಿಂತನೆ ನಡೆಸಿದೆ. ಮುಂದಿನ ತಿಂಗಳಿನಿಂದಲೇ ದೇಶದಲ್ಲಿ ಶಾಲಾ-ಕಾಲೇಜು, ಮೆಟ್ರೋ, ಅಂತಾರಾಷ್ಟ್ರೀಯ ವಿಮಾನ ಸಂಚಾರ ಆರಂಭಿಸುವದಕ್ಕೆ ಅವಕಾಶ ನೀಡಲು ತೀರ್ಮಾನಿಸಲಾಗುತ್ತಿದೆ.
ಸಿನಿಮಾ, ಟಿವಿ ಧಾರಾವಾಹಿಗಳ ಚಿತ್ರೀಕರಣ ಪುನರಾರಂಭ: ಜಾವಡೇಕರ್
ಭಾರತದಲ್ಲಿನ ಚಿತ್ರ ಮಂದಿರಗಳನ್ನು ತೆರೆಯುವುದಕ್ಕೆ ಅನುಮತಿ ನೀಡಲು ಕೇಂದ್ರ ಸರ್ಕಾರವು ಮುಂದಾಗಿದೆ. ಆದರೆ ಮಾಲ್ ಗಳಲ್ಲಿರುವ ಮಲ್ಟಿಫ್ಲೆಕ್ಸ್ ಗಳಲ್ಲಿ ಚಿತ್ರ ಪ್ರದರ್ಶಿಸಲು ಅನುಮತಿ ನೀಡುವುದಕ್ಕೆ ಸರ್ಕಾರವು ಹಿಂದೇಟು ಹಾಕಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಚಿತ್ರ ಮಂದಿರಗಳಲ್ಲಿ ಈಗಾಗಲೇ ಸಾಮಾಜಿಕ ಅಂತರ ಮತ್ತು ನೇರ ಸಂಪರ್ಕವಿಲ್ಲದ ರೀತಿಯಲ್ಲಿ ಟಿಕೆಟ್ ವಿತರಣೆಗೆ ತಯಾರಿ ನಡೆಸಿಕೊಳ್ಳಲಾಗುತ್ತಿದೆ.
ಶಾಲಾ-ಕಾಲೇಜು ಪುನಾರಂಭಕ್ಕೆ ಮನಸ್ಸು
ದೇಶದಲ್ಲಿ ಈಗಾಗಲೇ ಹಲವು ರಾಜ್ಯಗಳು ಶಾಲಾ-ಕಾಲೇಜುಗಳ ಪುನಾರಂಭಕ್ಕೆ ಮನಸ್ಸು ಮಾಡಿದೆ. ಆಗಸ್ಟ್ ತಿಂಗಳ ಕೊನೆಯ ವಾರದಲ್ಲೇ ಶಾಲೆಗಳನ್ನು ತೆರೆಯುವುದಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಆದರೆ ಕೇಂದ್ರ ಸರ್ಕಾರವು ಈ ನಿಟ್ಟಿಯಲ್ಲಿ ಯಾವುದೇ ರೀತಿ ತೀರ್ಮಾನವನ್ನು ತೆಗೆದುಕೊಂಡಿಲ್ಲ ಎಂದು ತಿಳಿದು ಬಂದಿದೆ.
ಮುಂಬೈ, ದೆಹಲಿಯಲ್ಲಿ ಮೆಟ್ರೋ ಸೇವೆ ಆರಂಭ
ಸಪ್ಟೆಂಬರ್ ತಿಂಗಳಿನಿಂದ ನವದೆಹಲಿಯಲ್ಲಿ ಮೆಟ್ರೋ ರೈಲ್ವೆ ಸಂಚಾರವನ್ನು 15 ದಿನಗಳವರೆಗೂ ಪ್ರಾಯೋಗಿಕವಾಗಿ ಪುನಾರಂಭಗೊಳಿಸುವುದಕ್ಕೆ ತೀರ್ಮಾನಿಸಲಾಗಿದೆ. ಈ ಅವಧಿಯಲ್ಲಿ ಅಗತ್ಯ ಸಿಬ್ಬಂದಿಯನ್ನು ಮಾತ್ರ ಬಳಸಿಕೊಂಡು ಮೆಟ್ರೋ ಕಾರ್ಯಾರಂಭಕ್ಕೆ ಸೂಚನೆ ನೀಡಲಾಗಿದೆ. ಮುಂಬೈನಲ್ಲೂ ಪ್ರಾಯೋಗಿಕವಾಗಿ ಮೆಟ್ರೋ ರೈಲ್ವೆ ಸಂಚಾರ ಆರಂಭಿಸಲು ನಿರ್ಧರಿಸಲಾಗಿದೆ.
ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಅನುಮತಿ?
ದೇಶದಲ್ಲಿ ಸಾಮಾನ್ಯವಾಗಿ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ಸಪ್ಟೆಂಬರ್ ತಿಂಗಳಿನಲ್ಲೂ ಅನುಮತಿ ನೀಡಲಾಗುವುದಿಲ್ಲ. ಬದಲಿಗೆ ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತರುವ ಪ್ರಯತ್ನ ನಡೆಸಲಾಗುತ್ತಿದೆ. ಅದಕ್ಕಾಗಿ ಏರ್ ಬಬಲ್ಸ್ ಒಪ್ಪಂದಕ್ಕೆ ಈಗಾಗಲೇ ಹಲವಾರು ದೇಶಗಳು ಅಂಕಿತ ಹಾಕಿವೆ. ಈ ಹಿನ್ನೆಲೆ ಅಂತಾರಾಷ್ಟ್ರೀಯ ವಿಮಾನ ಹಾರಾಟವು ಈ ಯೋಜನೆ ಅಡಿಯಲ್ಲಿ ಹಾರಾಟ ನಡೆಸಲಿವೆ.
ದೇಶದಲ್ಲಿ ಕೊವಿಡ್-19 ಕೇಸ್ ಸಂಖ್ಯೆ 30 ಲಕ್ಷ ದಾಟಿದೆ
ಕೊರೊನಾವೈರಸ್ ಸೋಂಕಿತರ ಸಂಖ್ಯೆಯು ಈಗಾಗಲೇ 30 ಲಕ್ಷದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲೇ ಕೊರೊನಾವೈರಸ್ ಸೋಂಕಿಗೆ 912 ಮಂದಿ ಪ್ರಾಣ ಬಿಟ್ಟಿದ್ದು, 69239 ಜನರಿಗೆ ಮಹಾಮಾರಿ ಅಂಟಿಕೊಂಡಿರುವುದು ದೃಢಪಟ್ಟಿದೆ. ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3044941ಕ್ಕೆ ಏರಿಕೆಯಾಗಿದ್ದು, ಈ ಪೈಕಿ 2280567 ಸೋಂಕಿತರು ಗುಣಮುಖರಾಗಿದ್ದಾರೆ. ಉಳಿದಂತೆ 707668 ಸಕ್ರಿಯ ಪ್ರಕರಣಗಳಿದ್ದು, ಮಹಾಮಾರಿಗೆ ಇದುವರೆಗೂ ದೇಶದಲ್ಲಿ 56706 ಜನರು ಪ್ರಾಣ ಬಿಟ್ಟಿದ್ದಾರೆ.