ಸೇನಾಪಡೆಗಳಿಂದ ಮಾನವ ಹಕ್ಕುಗಳ ಹರಣ, ವಿಶ್ವಸಂಸ್ಥೆ ವರದಿಗೆ ಭಾರತ ಕಿಡಿ
ನವದೆಹಲಿ, ಜೂನ್ 15: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರಮವಾಗಿ ಪಾಕಿಸ್ತಾನ ಸೇನೆ ಮತ್ತು ಭಾರತೀಯ ಸೇನೆಯಿಂದ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ ಎಂದು ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳು ಸಮಿತಿ ವರದಿ ಬಿಡುಗಡೆ ಮಾಡಿತ್ತು. ಇದರ ಬೆನ್ನಿಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ಹೈಕಮಿಷನರ್ ಈ ಬಗ್ಗೆ ಅಂತರಾಷ್ಟ್ರೀಯ ತನಿಖೆಯಾಗಬೇಕು ಎಂದು ಹೇಳಿದ್ದರು.
ಈ ಹೇಳಿಕೆಗೆ ಭಾರತ ಕೆಂಡಾಮಂಡಲವಾಗಿದೆ. ವಿಶ್ವಸಂಸ್ಥೆ ವರದಿಯನ್ನು, ತಪ್ಪು ಮಾಹಿತಿ ಒಳಗೊಂಡ, ದುರುದ್ದೇಶ ಪೂರಿತ, ಪಕ್ಷಪಾತಿ ವರದಿ ಎಂದು ಭಾರತ ಆರೋಪಿಸಿದೆ.
ಈ ವರದಿಯಲ್ಲಿ ಪೂರ್ವಾಗ್ರಹ ಪೀಡಿತ ವೈಯಕ್ತಿಕ ಭಾವನೆಗಳು ಕೆಲಸ ಮಾಡಿವೆ. ಇದಕ್ಕೆ ವಿಶ್ವಸಂಸ್ಥೆ ಮಣೆ ಹಾಕುವ ಮೂಲಕ ಅದರ ಘನತೆ ತಗ್ಗಿದೆ ಎಂದು ಭಾರತ ಟೀಕಿಸಿದೆ. ಈ ವರದಿಯ ಮೂಲಕ ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆಯಾಗಿದೆ ಎಂದು ಭಾರತ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿದೆ.

ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದನ್ನೂ ವಿಶ್ವಸಂಸ್ಥೆ ಮರೆತಿದೆ ಎಂದು ಭಾರತ ಕಿಡಿಕಾರಿದೆ.+
ಕಾಶ್ಮೀರದಲ್ಲಿ ತೀವ್ರಗಾಮಿ ಚಟುವಟಿಕೆ ನಡೆಸುವವರನ್ನು ವರದಿಯಲ್ಲಿ ಹೋರಾಟಗಾರರು ಎಂದು ಕರೆಯಲಾಗಿದೆ. ಜೊತೆಗೆ ಶಾಂತಿಯುತ ಪ್ರತಿಭಟನೆ ಮಾಡುವವರನ್ನು ಹಾಗೂ ಪ್ರಶ್ನಿಸುವವರನ್ನು ಮಟ್ಟಹಾಕಲು ಭಾರತ ಸರಕಾರ ಯತ್ನಿಸುತ್ತಿದ್ದು ಇದು ಕೊನೆಯಾಗಬೇಕು ಎಂದು ಹೇಳಲಾಗಿದೆ.











Click it and Unblock the Notifications