WTO ಸಭೆಯಲ್ಲಿ ಬಡವ, ದುರ್ಬಲರ ಪರ ದನಿಯೆತ್ತಿದ ಭಾರತ
ನವದೆಹಲಿ, ಜೂನ್ 14: ದುರ್ಬಲ ದೇಶಗಳಿಗೆ ನೆರವಾಗುತ್ತಿದ್ದ ಕೆಲ ಅಂಶಗಳನ್ನು ರದ್ದು ಮಾಡಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಡಬ್ಲ್ಯೂಟಿಒದ ಪ್ರಸ್ತಾವವನ್ನು ಭಾರತ ಬಲವಾಗಿ ವಿರೋಧಿಸಿದೆ. ಸ್ವಿಟ್ಜರ್ಲ್ಯಾಂಡ್ ದೇಶದ ಜಿನೀವ ನಗರದಲ್ಲಿ ನಡೆಯುತ್ತಿರುವ ವಿಶ್ವ ವ್ಯಾಪಾರ ಸಂಸ್ಥೆ ಡಬ್ಲ್ಯೂಟಿಒನ ಸಭೆಯಲ್ಲಿ (WTO Ministerial Conference) ಭಾರತ ಧ್ವನಿ ಎತ್ತಿದ್ದು, ಮುಂದುವರಿದ ದೇಶಗಳಿಗೂ ಹಿಂದುಳಿದ ದೇಶಗಳಿಗೂ ಒಂದೇ ನೀತಿ ಯಾಕೆ ಎಂದು ಪ್ರಶ್ನೆ ಮಾಡಿದೆ.
ಈ ಸಭೆಯಲ್ಲಿ ಮಾತನಾಡಿದ ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವ ಪಿಯೂಶ್ ಗೋಯೆಲ್, ಡಬ್ಲ್ಯೂಟಿಒದಲ್ಲಿ ಇರುವ ವಿನಾಯಿತಿ ನೀತಿ (S & DT- Special and Differential Treatment) ಅಂಶವನ್ನು ಕೈಬಿಡಬಾರದು ಎಂದು ಒತ್ತಾಯಿಸಿದರು.
WTOದಿಂದ ಸಬ್ಸಿಡಿಗೆ ತಡೆ; ಮೀನುಗಾರರಿಂದ ಮೆಚ್ಚುಗೆಯ ನಡೆ
"ಡಬ್ಲ್ಯಟಿಒ ವಿಶ್ವಸಾರ್ಹತೆಯ ಪ್ರಶ್ನೆ ಇದೆ. ವಿಶ್ವವೇ ಒಂದು ಕುಟುಂಬ ಎಂದು ಹೇಳುವ ವಸುದೈವ ಕುಟುಂಬಕಂನ ಆಶಯದಂತೆ ದಯೆ, ಜನಪರ ಕಾಳಜಿ, ಬಡಬಗ್ಗರಿಗೆ ನೆರವು ತೋರುವ ಸಮಯ ಬಂದಿದೆ" ಎಂದು ವಿಶ್ವ ವ್ಯಾಪಾರ ಸಂಸ್ಥೆಗೆ ಗೋಯಲ್ ತಿಳಿಹೇಳಿದರು.
ಅಭಿವೃದ್ಧಿಶೀಲ ದೇಶಗಳ ಜಿಡಿಪಿ
"ಮುಂದುವರಿದ ದೇಶಗಳ ತಲಾವಾರು ಜಿಡಿಪಿಯು (Per Capita GDP) ಅಭಿವೃದ್ಧಿಶೀಲ ದೇಶಗಳದ್ದಕ್ಕಿಂತ 20 ರಿಂದ 50 ಪಟ್ಟು ಹೆಚ್ಚಿದೆ. ಇದು ಡಬ್ಲ್ಯೂಟಿಒದಲ್ಲಿರುವ ವಿನಾಯಿತಿ ಕ್ರಮಗಳನ್ನು ಪ್ರಶ್ನಿಸುವವರಿಗೆ ತಿಳಿದಿರಬಹುದು. ಭಾರತ ಕೂಡ ಈ ತಲಾವಾರು ಜಿಡಿಪಿಯಲ್ಲಿ ತಳದಲ್ಲೇ ಇದೆ. ಅಭಿವೃದ್ಧಿಶೀಲ ದೇಶಗಳೂ ಕೂಡ ಉತ್ತಮ ಭವಿಷ್ಯಕ್ಕಾಗಿ ಹೋರಾಡುತ್ತಿವೆ. ಈ ಹಂತದಲ್ಲಿ ಮುಂದುವರಿದ ದೇಶಗಳ ಹಿತಾಸಕ್ತಿಗೆ ಪೂರಕವಾದ ನಿಯಮಗಳನ್ನು ಅಭಿವೃದ್ಧಿಶೀಲ ದೇಶಗಳಿಗೆ ಅನ್ವಯ ಮಾಡುವುದು ಎಷ್ಟು ಸರಿ?" ಎಂದು ಕೇಂದ್ರ ಸಚಿವ ಪಿಯೂಶ್ ಗೋಯಲ್ ಸೋಮವಾರ ನಡೆದ ಡಬ್ಲ್ಯೂಟಿಒದ ಸಭೆಯಲ್ಲಿ ಪ್ರಶ್ನಿಸಿದರು.
ಇರಾನ್ ಮೂಲಕ ಹೊಸ ಮಾರ್ಗದಲ್ಲಿ ರಷ್ಯಾದ ಸರಕುಗಳು ಭಾರತಕ್ಕೆ
ಮೀನುಗಾರಿಕೆ ಸಬ್ಸಿಡಿ ವಿಚಾರ:
ಡಬ್ಲ್ಯೂಟಿಒನ ಪ್ರಸ್ತಾವಿತ ಸುಧಾರಣಾ ಕ್ರಮಗಳಲ್ಲಿ ಮೀನುಗಾರಿಕಾ ಸಬ್ಸಿಡಿ ರದ್ದು ಮಾಡುವುದೂ ಒಂದು. ಇದಕ್ಕೆ ಭಾರತದಲ್ಲಿ ಈಗಾಗಲೇ ವಿರೋಧ ವ್ಯಕ್ತವಾಗಿದೆ. ಈ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪ ಮಾಡಿದ ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವರೂ ಆದ ಪಿಯೂಶ್ ಗೋಯಲ್, ಸಬ್ಸಿಡಿ ರದ್ದುಗೊಳಿಬೇಕೆಂದು ವಾದಿಸುವ ದೇಶಗಳನ್ನು ತರಾಟೆಗೆ ತೆಗೆದುಕೊಂಡರು.
"ಕೆಲ ದೇಶಗಳ ಸವಲತ್ತುಗಳನ್ನು ನಾವು ಸರ್ವಮಾನ್ಯ ಮಾಡುವ ಮೂಲಕ ಸಮಾಜದ ದುರ್ಬಲ ವರ್ಗಗಳ ಏಳ್ಗೆಗೆ ಆದ್ಯತೆ ಕೊಡುವ ದೇಶಗಳ ಪ್ರಗತಿ ಹಕ್ಕನ್ನು ಕಸಿಯಲು ಆಗುವುದಿಲ್ಲ. ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡದ ದೇಶಗಳಿಗೆ ಬೇರೆಯೇ ನಿಲುವು ಇರಬೇಕಾಗುತ್ತದೆ. ಇಲ್ಲದಿದ್ದರೆ ಅಸಮಾನತೆ, ಆಹಾರ ಅಭಾವ ಸೃಷ್ಟಿಸಿರುವ ಕೃಷಿ ಒಪ್ಪಂದದ ರೀತಿಯ ಪರಿಸ್ಥಿತಿ ಉದ್ಭವವಾಗುತ್ತದೆ" ಎಂದು ಪಿಯೂಶ್ ಗೋಯಲ್ ತಿಳಿಸಿದರು.
ಕೋವಿಡ್ ಸಾಂಕ್ರಾಮಿಕತೆಯಿಂದ ವಾಸ್ತವ ಸ್ಥಿತಿ ಅನಾವರಣ:
''ಆಹಾರ ಭದ್ರತೆಯಾಗಲೀ, ಆರೋಗ್ಯವಾಗಲೀ, ಆರ್ಥಿಕತೆಯಾಗಲೀ, ಅಥವಾ ಮುಕ್ತ ಸರಬರಾಜು ಸರಪಳಿಯಾಗಲೀ ಯಾವುದೇ ಜಾಗತಿಕ ಬಿಕ್ಕಟ್ಟು ಉದ್ಭವವಾದರೂ ಅದನ್ನು ಸಮರ್ಥವಾಗಿ ಎದುರಿಸಲು ನಮ್ಮ ವ್ಯವಸ್ಥೆ ಅಸಮರ್ಥವಾಗಿದೆ. ಇದಕ್ಕೆ ಕೋವಿಡ್-19 ಸಾಂಕ್ರಾಮಿಕ ಬಿಕ್ಕಟ್ಟು ಕೈಗನ್ನಡಿ ಹಿಡಿದಿದೆ ಎಂದು ಹೇಳಿದ ಅವರು, ಕೋವಿಡ್ ಕಾಲಘಟ್ಟದಲ್ಲಿ ಜಾಗತಿಕ ಸಂಕಷ್ಟಕ್ಕೆ ಸ್ಪಂದಿಸಲು ಡಬ್ಲ್ಯೂಟಿಒ ವಿಫಲವಾಯಿತು'' ಎಂದು ಟೀಕಿಸಿದರು.
ದೀಪಾವಳಿ ವೇಳೆಗೆ ಯುಕೆ-ಭಾರತದ ನಡುವೆ ಮುಕ್ತ ವ್ಯಾಪಾರ ಒಪ್ಪಂದ
ಈಗಲೂ ಕೋವಿಡ್ ಲಸಿಕೆ ಸಿಗುತ್ತಿಲ್ಲ
"ಇಡೀ ವಿಶ್ವವು ಪರಿಹಾರಕ್ಕೆ ತಹತಹಿಸುತ್ತಿದ್ದರೆ ಅದಕ್ಕೆ ತಕ್ಕದಾಗಿ ಸ್ಪಂದಿಸಲು ಡಬ್ಲ್ಯೂಟಿಒಗೆ ಆಗಲಿಲ್ಲ. ಕೋವಿಡ್ ಬಂದು ಎರಡು ವರ್ಷಗಳಾದರೂ ಲಸಿಕೆ ವಿಚಾರದಲ್ಲಿ ಈಗಲೂ ಅಸಮಾನತೆ ಇದೆ. ಇದು ಒಂದು ಉದಾಹರಣೆ ಅಷ್ಟೇ. ಒಂದೆಡೆ ಹಿಂದುಳಿದ ಮತ್ತು ಅಭಿವೃದ್ಧಿಶೀಲ ದೇಶಗಳ ಜನರಿಗೆ ಈಗಲೂ ಕೋವಿಡ್ ಲಸಿಕೆ ಸಿಗುತ್ತಿಲ್ಲ. ಇನ್ನೊಂದೆಡೆ ಕೆಲ ದೇಶಗಳಲ್ಲಿ ಮೂರು ಮತ್ತು ನಾಲ್ಕನೇ ಡೋಸ್ ಲಸಿಕೆಗಳನ್ನು ಹಾಕಲಾಗಿದೆ. ಇದು ಜಾಗತಿಕ ಆಡಳಿತದ ವೈಫಲ್ಯವಾಗಿದ್ದು, ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ" ಎಂದು ಪಿಯೂಶ್ ಗೋಯಲ್ ಕರೆ ನೀಡಿದರು.
(ಒನ್ಇಂಡಿಯಾ ಸುದ್ದಿ)