ಅಣ್ವಸ್ತ್ರ ಸಾಮರ್ಥ್ಯದ ಶೌರ್ಯ ಕ್ಷಿಪಣಿ ಪ್ರಯೋಗ ಯಶಸ್ವಿ
ಬಾಲಸೋರ್, ಅಕ್ಟೋಬರ್ 3: ಚೀನಾದೊಂದಿಗಿನ ಗಡಿ ಬಿಕ್ಕಟ್ಟಿನ ನಡುವೆ ಭಾರತ ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಯಶಸ್ಸು ಗಳಿಸಿದೆ. ಪರಮಾಣು ಸಾಮರ್ಥ್ಯದ ಶೌರ್ಯ ಕ್ಷಿಪಣಿಯ ಹೊಸ ಆವೃತ್ತಿಯನ್ನು ಒಡಿಶಾದ ಕರಾವಳಿಯಲ್ಲಿ ಭಾರತವು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಕ್ಷಿಪಣಿಯು ಸುಮಾರು 800 ಕಿ.ಮೀ ದೂರದ ಗುರಿಗಳನ್ನು ಹೊಡೆಯಬಲ್ಲ ತಾಕತ್ತು ಹೊಂದಿದೆ.
ಒಡಿಶಾದ ಬಾಲಸೋರ್ ಕೇಂದ್ರದಲ್ಲಿ ಶನಿವಾರ ನಡೆದ ಕ್ಷಿಪಣಿಯ ಹೊಸ ಆವೃತ್ತಿಯ ಪರೀಕ್ಷೆ ಯಶಸ್ವಿಯಾಗಿದೆ. ಹೀಗಾಗಿ ಈ ಕ್ಷಿಪಣಿಯನ್ನು ಇದೇ ವರ್ಗದ ಇತರೆ ಕ್ಷಿಪಣಿಗಳ ಜತೆಗೆ ಯುದ್ಧ ಪಡೆಗಳ ಬತ್ತಳಿಕೆಗೆ ಈ ಹೊಸ ಕ್ಷಿಪಣಿಯನ್ನು ಕೂಡ ಸೇರಿಸಲಾಗುತ್ತದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಈ ಕ್ಷಿಪಣಿಯು ಹಗುರವಾಗಿದ್ದು, ಇತರೆ ಹಾಲಿ ಕ್ಷಿಪಣಿಗಳಿಗೆ ಹೋಲಿಸಿದರೆ ಕಾರ್ಯಾಚರಣೆಗೆ ಬಳಸಲು ಸುಲಭವಾಗಿದೆ. ತನ್ನ ಗುರಿಯತ್ತ ಚಲಿಸುವ ಕೊನೆಯ ಹಂತದಲ್ಲಿ ಕ್ಷಿಪಣಿಯು ಅತ್ಯಧಿಕ ವೇಗವನ್ನು ಪಡೆದುಕೊಳ್ಳುತ್ತದೆ ಎಂದು ಹೇಳಲಾಗಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಯುದ್ಧತಂತ್ರ ಕ್ಷಿಪಣಿಗಳ ಕ್ಷೇತ್ರದಲ್ಲಿ ಸಂಪೂರ್ಣ ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ ಭಾರತ ಸೃಷ್ಟಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶವನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಹೆಚ್ಚಿಸಿದೆ.
ಭಾರತವು 400 ಕಿ.ಮೀ. ವಲಯದ ಗುರಿಯನ್ನು ತಲುಪಬಲ್ಲ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಇತ್ತೀಚೆಗೆ ಯಶಸ್ವಿಯಾಗಿ ಪ್ರಯೋಗಿಸಿತ್ತು.












Click it and Unblock the Notifications