ಸಂದೀಪ್ ಉನ್ನಿಕೃಷ್ಣನ್ ಸ್ಮರಣೆ ಪ್ರತಿದಿನದ ಕೆಲಸವಾಗಲಿ
ಬೆಂಗಳೂರು, ಮಾ. 15: ಮೇಜರ್ ಸಂದೀಪ್ ಉನ್ನಿಕೃಷ್ಣನ್, ಈ ಹೆಸರು ಕೇಳಿದರೆ ಮೈ ರೋಮಾಂಚನವಾಗುತ್ತದೆ. ಮುಂಬೈ ದಾಳಿಯಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಉನ್ನಿಕೃಷ್ಣನ್ ಬದುಕಿದ್ದರೆ ಇಂದು 38 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು.
ಸಂದೀಪ್ ಪ್ರಾಣತ್ಯಾಗ ಮಾಡಿ ಆರು ವರ್ಷಗಳೇ ಆಗಿವೆ. ಸಂದೀಪ್ ಎನ್ಎಸ್ಜಿ ಕಮಾಂಡೊ, ಮೇಜರ್ ಆಗಿ ಮುಂಬಯಿ ದಾಳಿಯಲ್ಲಿ ಉಗ್ರರೊಂದಿಗೆ ಸೆಣಸಾಡಿ ದೇಶಕ್ಕಾಗಿ ಮಡಿದರು. ಸಾಮಾಜಿಕ ಜಾಲತಾಣಗಳಲ್ಲೂ ಸಂದೀಪ್ ಸ್ಮರಣೆ ಮಾಡಿಕೊಳ್ಳಲಾಗಿದೆ.

ಸಂದೀಪ್ ಅಪ್ಪ ನಿವೃತ್ತ ಇಸ್ರೋ ಅಧಿಕಾರಿ ಉನ್ನಿಕೃಷ್ಣನ್ ಹಾಗೂ ತಾಯಿ ಧನಲಕ್ಷ್ಮಿ ಅವರು ' ನಮಗೆ ಮಗನನ್ನು ಕಳೆದುಕೊಂಡ ದುಃಖಕ್ಕಿಂತ ವೀರಪುತ್ರನನ್ನು ನಾಡಿಗೆ ನೀಡಿದ ಹೆಮ್ಮೆಯಿದೆ ಎಂದು ಹೇಳಿದ್ದರು, ಇಂದಿಗೂ ಅದೇ ಮಾತನ್ನು ಪುನರುಚ್ಚಾರ ಮಾಡುತ್ತಾರೆ. ಆತನ ಸಾವಿನ ನಂತರ ಯಾವುದೇ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ನಮಗೆ ಆಸಕ್ತಿಯಿಲ್ಲ. ಆತನ ನೆನೆಪೇ ನಮ್ಮ ಮುಂದಿನ ಜೀವನದ ಸಂಗಾತಿ ಎಂದು ಹೇಳುವಾಗ ಯಾವ ತಾಯಿಗೂ ಸಂದೀಪ್ ನಂಥ ಮಗ ಬೇಕು ಎಂದೆನಿಸದೆ ಇರಲಾರದು.
ಕೋಲ್ಕತ್ತಾದಲ್ಲಿ 1977 ಮಾರ್ಚ್ 15 ರಂದು ಜನಿಸಿದ ಸಂದೀಪ್ ಬೆಂಗಳೂರಿನ ಹೆಬ್ಬಾಳ ಸೇನಾ ಕೇಂದ್ರದಲ್ಲಿ ತರಬೇತಿ ಪಡೆದಿದ್ದರು. 31 ನೇ ವಯಸ್ಸಿನಲ್ಲಿ ಪ್ರಾಣ ತ್ಯಾಗ ಮಾಡಿದ ಸಂದೀಪ್ 9 ವರ್ಷಗಳ ಕಾಲ ಭಾರತದ ಸೇನೆಯ ಭಾಗವಾಗಿ ದುಡಿದಿದ್ದರು. ಅವರ ಸೇವೆಗೆ ಅಶೋಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಮುಂಬೈ ದಾಳಿಯಲ್ಲಿ ಬಲಿಯಾಗಬೇಕಿದ್ದ ಅದೆಷ್ಟೋ ಜನರ ಪ್ರಾಣ ಕಾಪಾಡಿದ ಸಂದೀಪ್ 28 ನವೆಂಬರ್ 2008 ರಂದು ಹುತಾತ್ಮರಾದರು. ಉಗ್ರಗಾಮಿಗಳ ದಾಳಿಗೆ ಎದೆಯೊಡ್ಡಿದ ಸಂದೀಪ್ ಉನ್ನಿಕೃಷ್ಣನ್ ಸ್ಮರಣೆ ಪ್ರತಿದಿನ ಮಾಡಿಕೊಳ್ಳಲೇಬೇಕು.












Click it and Unblock the Notifications