ಸಂಪೂರ್ಣ ಲಾಕ್ಡೌನ್: ಚೀನಾವನ್ನು ಮೀರಿಸಿದ ಭಾರತ
ನವದೆಹಲಿ, ಮಾರ್ಚ್ 24: ಕೊರೊನಾವೈರಸ್ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ಭಾರತ ಮುಂದಾಗಿದೆ. ಒಂದು ದಿನದ ಜನತಾ ಕರ್ಫ್ಯೂ ನಂತರ ದೇಶದೆಲ್ಲೆಡೆ ಲಾಕ್ಡೌನ್ ಜಾರಿಗೊಂಡಿತ್ತು. ಆದರೆ, ಇದೀಗ ಇಡೀ ದೇಶವನ್ನು ಸಂಪೂರ್ಣವಾಗಿ ಲಾಕ್ಡೌನ್ ಮಾಡುವ ಆದೇಶವನ್ನು ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 24ರಂದು ಹೊರಡಿಸಿದ್ದಾರೆ. 21ದಿನಗಳ ಲಾಕ್ಡೌನ್ ಸ್ಥಿತಿಯಲ್ಲಿ ಭಾರತೀಯರು ಜೀವಿಸುವುದು ಅನಿವಾರ್ಯವಾಗಿದೆ.
ಈಗ ಕೊರೊನಾದಿಂದ ಪಾರಾಗಲು social distancing ಒಂದೇ ಮಾರ್ಗವಾಗಿದೆ. ಜನರು ಮನೆಯಲ್ಲಿಯೇ ಇರಬೇಕು. ಇದನ್ನು ಬಿಟ್ಟು ಬೇರೆ ಮಾರ್ಗಗಳು ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದರು.
ಇದು ನಿಮ್ಮನ್ನು, ನಿಮ್ಮ ಮಕ್ಕಳನ್ನು, ನಿಮ್ಮ ತಂದೆ ತಾಯಿಯನ್ನು, ಸ್ನೇಹಿತರನ್ನು ಕಾಪಾಡುತ್ತದೆ. ಇದನ್ನು ನೀವು ಪಾಲಿಸದಿದ್ದರೆ ಭಾರತ ದೊಡ್ಡ ಬೆಲೆ ತರಬೇಕಾಗುತ್ತದೆ.
ಅದರ ಅಂದಾಜು ಸಹ ನಿಮಗೆ ಇಲ್ಲ. ಇಂದು(ಮಾರ್ಚ್ 24) ರಾತ್ರಿ 12 ಗಂಟೆಯಿಂದ ಸಂಪೂರ್ಣ ದೇಶವೇ ಲಾಕ್ ಡೌನ್. ಇದೊಂದು ರೀತಿಯಲ್ಲಿ ಕರ್ಫ್ಯೂ ಇದ್ದಂತೆಯೇ. ಜನರು ಮನೆಯಿಂದ ಹೊರ ಬಾರಬಾರದು. ಕೊರೊನಾ ತಡೆಯಲು ಇದು ಅನಿವಾರ್ಯವಾಗಿದೆ ಎಂದು ಮೋದಿ ಹೇಳಿದರು.

ಲಾಕ್ಡೌನ್: ಚೀನಾ v/s ಭಾರತ
ಜನವರಿಯಲ್ಲೇ ಚೀನಾ ಲಾಕ್ಡೌನ್ ತಂತ್ರಕ್ಕೆ ಮೊರೆ ಹೋಗಬೇಕಾಯಿತು. ಜನವರಿ 23ರಂದು ಮೊದಲ ಬಾರಿಗೆ ಕೊರೊನಾವೈರಸ್ ಹರಡಲು ಕಾರಣವಾದ ಮೂಲಕೇಂದ್ರ ವುಹಾನ್ ಪ್ರದೇಶವನ್ನು ಹೊರ ಪ್ರಪಂಚದ ಸಂಪರ್ಕದಿಂದ ಬಂದ್ ಮಾಡಲಾಯಿತು.
ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ರಸ್ತೆ ಸಾರಿಗೆ, ಬಂದರು ಎಲ್ಲವೂ ಸ್ಥಗಿತಗೊಂಡವು. ವುಹಾನ್ ನಿವಾಸಿಗಳೂ ಮನೆಯಿಂದ ಹೊರಗಡೆ ಬರುವುದು, ನಗರದಿಂದ ಹೊರಕ್ಕೆ ಹೋಗುವುದನ್ನು ನಿರ್ಬಂಧಿಸಲಾಯಿತು.

ಮೊದಲಿಗೆ 6 ಕೋಟಿ ಜನರ ನಗರ ಬಂದ್
ಚೀನಾದ ವ್ಯಾಪಾರಿ ಕೇಂದ್ರ ಎನಿಸಿಕೊಂಡಿರುವ ಹುಬೈ ನಗರವನ್ನು ಲಾಕ್ಡೌನ್ ಮಾಡಲು ಮುಂದಾಗಬೇಕಾಯಿತು. ನಾಲ್ಕು ದಿನಗಳ ಮಟ್ಟಿಗೆ 6 ಕೋಟಿಗೂ ಅಧಿಕ ಮಂದಿಯುಳ್ಳ ನಗರವನ್ನು ಲಾಕ್ಡೌನ್ ಮಾಡಲಾಯಿತು.
ಇದಾದ ಬಳಿಕ ಇನ್ನಷ್ಟು ನಗರಗಳಿಗೆ ಲಾಕ್ಡೌನ್ ವಿಸ್ತರಣೆಯಾಯಿತು. ಫ್ರೆಬವರಿ ವೇಳೆಗೆ ಸುಮಾರು 23 ಕೋಟಿ ಜನಸಂಖ್ಯೆಯುಳ್ಳ 18 ಪ್ರಾಂತ್ಯಗಳ ಲಾಕ್ಡೌನ್ ಮಾಡಲಾಯಿತು.

ಭಾರತದ ಅತಿದೊಡ್ಡ ಲಾಕ್ಡೌನ್
ಕರ್ನಾಟಕ ಸೇರಿದಂತೆ 35 ರಾಜ್ಯ, 600ಕ್ಕೂ ಅಧಿಕ ಜಿಲ್ಲೆ, ಎಲ್ಲಾ ಕೇಂದ್ರಾಡಳಿತ ಪ್ರದೇಶಗಳು ಮಾರ್ಚ್ 31ರ ತನಕ ಲಾಕ್ಡೌನ್ ಘೋಷಿಸಿದ್ದವು. ಈಗ ಪ್ರಧಾನಿ ಮೋದಿ ಮಾರ್ಚ್ 24ರ ರಾತ್ರಿ 12 ಗಂಟೆಯಿಂದ ಇಡೀ ದೇಶ ಸಂಪೂರ್ಣ ಲಾಕ್ಡೌನ್ ಘೋಷಿಸಿದ್ದಾರೆ. ಹೀಗಾಗಿ 718ಕ್ಕೂ ಅಧಿಕ ಜಿಲ್ಲೆಗಳಲ್ಲಿರುವ 1.33 ಬಿಲಿಯನ್ ಜನರು ಲಾಕ್ ಡೌನ್ ಗೆ ಹೊಂದಿಕೊಳ್ಳಬೇಕಾಗುತ್ತದೆ. ಭಾರತದ ಶೇ 82.5 ರಷ್ಟು ಜನಸಂಖ್ಯೆ ಲಾಕ್ ಡೌನ್ ಆಗುತ್ತಿದ್ದರೆ, ಚೀನಾ ಶೇ 16.5 ರಷ್ಟು ಮಾತ್ರ ಬಂದ್ ಆಗಿತ್ತು.

ಕೆಲವು ಪ್ರಾಂತ್ಯಕ್ಕೆ ವಿನಾಯಿತಿ ಇತ್ತು
ವುಹಾನ್ ನ ನಿವಾಸಿಗಳು ಲಾಕ್ ಡೌನ್ ಸಂದರ್ಭದಲ್ಲಿ ಎರಡು ದಿನಗಳಿಗೊಮ್ಮೆ ಮನೆಯಿಂದ ಹೊರಕ್ಕೆ ಹೋಗಿ ದಿನಸಿ ಮುಂತಾದ ಅಗತ್ಯ ವಸ್ತುಗಳನ್ನು ಖರೀದಿಸಲು ಅನುಮತಿ ನೀಡಲಾಗಿತ್ತು. ಹೀಗಾಗಿ, ವೈರಸ್ ಹರಡುವುದನ್ನು ನಿಯಂತ್ರಿಸಲು ಸಾಧ್ಯವಾಗಿತ್ತು.
ಭಾರತದಲ್ಲಿ ಪಂಜಾಬ್, ಹರ್ಯಾಣ ಸಂಪೂರ್ಣ ಲಾಕ್ ಡೌನ್ ಅನುಸರಿಸಿದರೆ, ಕರ್ನಾಟಕದಲ್ಲಿ ಲಾಕ್ ಡೌನ್ ಮೊದಲ ದಿನವೇ ವಿಫಲವಾಗಿತ್ತು. ಕೆಲವು ವರ್ಗದವರು ಕೆಲಸಕ್ಕೆ ಹೋಗಲು ವಿನಾಯಿತಿಯೂ ಕೆಲ ರಾಜ್ಯದಲ್ಲಿತ್ತು. ಆದರೆ, ಈಗ ಸಂಪೂರ್ಣ ಬಂದ್ ಮಾಡುವುದು ಅನಿವಾರ್ಯ, ಅಗತ್ಯ ಕ್ರಮವಾಗಿದೆ.

ಕೊರೊನಾವೈರಸ್ ಅಂಕಿ ಅಂಶ
ಮಾರ್ಚ್ 24ರ ರತ್ರಿ 10.10ರ ಸುಮಾರಿಗೆ ಕೊರೊನಾವೈರಸ್ ಅಂಕಿ ಅಂಶದಂತೆ ವಿಶ್ವದೆಲ್ಲೆಡೆ 401,831 ಪ್ರಕರಣಗಳು ದಾಖಲಾಗಿದ್ದು, 17, 501 ಮಂದಿ ಮೃತರಾಗಿದ್ದಾರೆ. ಚೀನಾದಲ್ಲಿ 81,171 ಪ್ರಕರಣ ದಾಖಲಾಗಿದ್ದು, 3277 ಮಂದಿ ಮೃತರಾಗಿದ್ದು, 73,159 ಮಂದಿ ಗುಣಮುಖರಾಗಿದ್ದಾರೆ. ಇಟಲಿಯಲ್ಲಿ 63, 927 ಕೇಸ್ ಗಳಲ್ಲಿ 6077 ಮಂದಿ ಮೃತರಾಗಿದ್ದು, 7432 ಮಂದಿ ಗುಣಮುಖರಾಗಿದ್ದಾರೆ. ಭಾರತದಲ್ಲಿ 519 ಕೇಸ್ ದಾಖಲಾಗಿದ್ದು, 10 ಮಂದಿ ಮೃತರಾಗಿದ್ದು, 40 ಮಂದಿ ಗುಣಮುಖರಾಗಿದ್ದಾರೆ.












Click it and Unblock the Notifications