ಅಫ್ಘಾನ್ ಪ್ರಜೆಗಳಿಗೆ ವೀಸಾ ನಿರ್ಬಂಧ ಸಡಿಲಗೊಳಿಸಿದ ಭಾರತ
ನವದೆಹಲಿ, ಆಗಸ್ಟ್ 28: ಭಾರತಕ್ಕೆ ಬರುವ ಅಫ್ಘಾನಿಸ್ತಾನ ನಾಗರಿಕರಿಗೆ ಕೇಂದ್ರ ಸರ್ಕಾರ ಆರು ತಿಂಗಳ ವೀಸಾ ಸೌಲಭ್ಯ ನೀಡಲಿದೆ. ಜೊತೆಗೆ ವೀಸಾ ಪ್ರಕ್ರಿಯೆ ಮೇಲಿದ್ದ ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸಿದೆ.
ಉದ್ಯೋಗ ಹಾಗೂ ವಿಳಾಸದ ಪುರಾವೆಗಳನ್ನು "ಆಯ್ಕೆ"ಯಂತೆ ಇರಿಸಿದ್ದು, ಸರ್ಕಾರ ಅಫ್ಘಾನ್ ಪ್ರಜೆಗಳಿಗೆ ವೀಸಾ ನಿರ್ಬಂಧಗಳನ್ನು ಸರಾಗಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾಲಿಬಾನ್ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ ತೊರೆಯುತ್ತಿರುವ ಹೆಚ್ಚಿನ ಸಂಖ್ಯೆಯ ಜನರಿಗೆ ನೆರವಾಗಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈಗಿರುವ ಪರಿಸ್ಥಿತಿಯಲ್ಲಿ ವೀಸಾ ಸೌಲಭ್ಯವನ್ನು ಆರು ತಿಂಗಳ ಕಾಲ ನೀಡಲಾಗುವುದು. ವೀಸಾ ಸೌಲಭ್ಯವನ್ನು ದೀರ್ಘಕಾಲ ಮುಂದುವರೆಸುವುದು ಸರಿಯಾದ ಯೋಜನೆ ಎನಿಸುತ್ತಿಲ್ಲ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ತಿಳಿಸಿದೆ.
ಅಫ್ಘಾನಿಸ್ಥಾನ ತಾಲಿಬಾನ್ ವಶವಾದ ಬಳಿಕ ಅಲ್ಲಿನ ನಾಗರಿಕರು ಹಾಗೂ ವಿದೇಶಿಗರು ಅಫ್ಘಾನ್ನಿಂದ ಬೇರೆ ದೇಶಗಳಿಗೆ ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಅಫ್ಘನ್ನರು ಇ-ವೀಸಾ ಬಳಸಿ ಭಾರತಕ್ಕೆ ಬರಬಹುದು ಎಂದು ಹೇಳಿತ್ತು.
ವೀಸಾ ಯೋಜನೆ ಬಗ್ಗೆ ಶುಕ್ರವಾರ ಸ್ಪಷ್ಟನೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, 'ಆರು ತಿಂಗಳ ವೀಸಾ ಬಳಸಿ ಅವರೆಲ್ಲ ಸದ್ಯ ಭಾರತಕ್ಕೆ ಬರುತ್ತಿದ್ದಾರೆ. ಅದಾದ ಬಳಿಕ ವೀಸಾ ಹಿಂಪಡೆಯುತ್ತೇವೆ' ಎಂದು ತಿಳಿಸಿದ್ದಾರೆ.
'ಭಾರತ ಇ- ಎಮರ್ಜೆನ್ಸಿ ವೀಸಾ ವ್ಯವಸ್ಥೆ ಪರಿಚಯಿಸಿದೆ. ಕೆಲವು ಗೊಂದಲಗಳಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ' ಎಂದು ಸಚಿವಾಲಯ ತಿಳಿಸಿದೆ.
ಸಾವಿರ ವೀಸಾಗಳು ಕಳ್ಳತನವಾಗಿರುವ ಬಗ್ಗೆ ವರದಿಯಾದ ಬಳಿಕ, ಅಫ್ಘಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಆಗಸ್ಟ್ 12-14ರ ನಡುವೆ ವಿತರಿಸಿದ್ದ 11 ಸಾವಿರಕ್ಕೂ ಹೆಚ್ಚು ವೀಸಾಗಳನ್ನು ರದ್ದುಗೊಳಿಸಲಾಗಿದೆ. ಇದರ ಬೆನ್ನಲ್ಲೇ ಭಾರತ ಸರ್ಕಾರ ಇ ವೀಸಾ ಆರಂಭಿಸಿದೆ.
ಕಾಬೂಲ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮುಚ್ಚಿದ ನಂತರ ಭಾರತವು ಅಫ್ಘಾನ್ ಪ್ರಜೆಗಳಿಗಾಗಿ ಇ-ವೀಸಾ ಅರ್ಜಿಗಳನ್ನು ಸ್ವೀಕರಿಸಲು ಆರಂಭಿಸಲಾಯಿತು. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಿಡಿತ ಸಾಧಿಸಿರುವುದರ ನಡುವೆ, ಈ ಹಿಂದೆ ಅಫ್ಘಾನ್ ಸರ್ಕಾರ ಮತ್ತು ಭದ್ರತಾ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ ಹಲವಾರು ಅಫ್ಘಾನ್ ಪ್ರಜೆಗಳಿಗೆ ಆಶ್ರಯ ನೀಡುವಂತೆ ಭಾರತದ ಸಹಾಯ ಕೋರಲಾಗಿತ್ತು.

565 ಅಫ್ಘನ್ನರ ಸ್ಥಳಾಂತರ
ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಭಾರತ ಈವರೆಗೂ 565 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದೆ. ಈ ಪೈಕಿ 175 ಮಂದಿ ರಾಜತಾಂತ್ರಿಕ ಕಚೇರಿ ಸಿಬ್ಬಂದಿಯಾಗಿದ್ದು, 263 ಭಾರತೀಯ ಪ್ರಜೆಗಳಾಗಿದ್ದಾರೆ. ಹಿಂದೂ ಮತ್ತು ಸಿಖ್ಖರು ಸೇರಿದಂತೆ 112 ಅಫ್ಘಾನಿಸ್ತಾನದ ಪ್ರಜೆಗಳಾಗಿದ್ದಾರೆ.
ತಾಲಿಬಾನ್ ವಶಪಡಿಸಿಕೊಂಡಿರುವ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳು ಹಾಗೂ ಅಫ್ಘಾನ್ ಪಾಲುದಾರರನ್ನು ಭಾರತಕ್ಕೆ ಕರೆ ತರುವ ಉದ್ದೇಶದಿಂದ "ಆಪರೇಷನ್ ದೇವಿ ಶಕ್ತಿ" ಕಾರ್ಯಾಚರಣೆ ಘೋಷಿಸಲಾಗಿದೆ. ಕಾಬೂಲ್ ವಿಮಾನ ನಿಲ್ದಾಣದಿಂದ ಸ್ಥಳಾಂತರಿಸುವ ಪ್ರಕ್ರಿಯೆ ನಡೆಸಲಾಗುವುದು ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಈ ಹಿನ್ನೆಲೆ ಪ್ರತಿನಿತ್ಯ ಕಾಬೂಲ್ ವಿಮಾನ ನಿಲ್ದಾಣಕ್ಕೆ ಭಾರತದಿಂದ ಎರಡು ವಿಮಾನಗಳನ್ನು ಬಿಡಲಾಗುತ್ತಿದೆ.
ಎರಡು ದಶಕಗಳ ನಂತರ ಅಫ್ಘಾನ್ನಿಂದ ಅಮೆರಿಕ ತನ್ನ ಸೇನಾ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದಂತೆ ತಾಲಿಬಾನಿಗಳು ಆಕ್ರಮಣ ಮಾಡಿ ಅಫ್ಘಾನಿಸ್ತಾನನ್ನು ವಶಪಡಿಸಿಕೊಂಡಿದ್ದಾರೆ. ತಾಲಿಬಾನಿಗಳ ಆಕ್ರಮಣ ಆರಂಭವಾಗುತ್ತಿದ್ದಂತೆ ಎಲ್ಲೆಲ್ಲೂ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಹಲವು ದೇಶಗಳು ಅಫ್ಘಾನಿಸ್ತಾನದಲ್ಲಿರುವ ತಮ್ಮ ಜನರು ಹಾಗೂ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳುತ್ತಿವೆ. ತಾಲಿಬಾನ್ ಕ್ರೌರ್ಯಕ್ಕೆ ನಲುಗಿದ ಸಾವಿರಾರು ಪ್ರಜೆಗಳು ದೇಶ ತೊರೆದು ಹೋಗುವುದಕ್ಕಾಗಿ ಹಾತೊರೆಯುತ್ತಿದ್ದಾರೆ. ಗುರುವಾರ ಸಾವಿರಾರು ಮಂದಿ ವಿಮಾನ ನಿಲ್ದಾಣದಲ್ಲಿ ನೆರೆದಿರುವುದನ್ನು ಗುರಿಯಾಗಿಸಿಕೊಂಡ ಉಗ್ರರು ಈ ಬಾಂಬ್ ಸ್ಫೋಟ ನಡೆಸಿದ್ದಾರೆ. ಅಮಾಯಕ ಜನರು ಪ್ರಾಣ ಕಳೆದುಕೊಂಡಿದ್ದಾರೆ.












Click it and Unblock the Notifications