ಸಂಘರ್ಷ ತಿಳಿಗೊಳಿಸುವಿಕೆ ಎಂದರೇನು? ಸೇನಾ ಪ್ರಕ್ರಿಯೆ ಹೇಗೆ?
ನವದೆಹಲಿ, ಜೂನ್ 17: ಭಾರತ-ಚೀನಾದ ನಡುವಿನ ಮುಷ್ಠಿ ಯುದ್ಧ ತಾರಕಕ್ಕೇರಿದೆ. ಸಂಘರ್ಷವನ್ನು ತಿಳಿಗೊಳಿಸುವ ಪ್ರಕ್ರಿಯೆ ಕೂಡ ಮುಂದುವರೆದಿದೆ. ಹಾಗಾದರೆ ಸಂಘರ್ಷ ತಿಳಿಗೊಳಿಸುವ ಪ್ರಕ್ರಿಯೆ ಸೇನೆಯಲ್ಲಿ ಹೇಗಿರಲಿದೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.ಈ ಮೊದಲೂ ಕೂಡ ಉಭಯ ಸೇನೆಯ ಕಮಾಂಡರ್ ಮಟ್ಟದಲ್ಲಿ ಅನೇಕ ಸಭೆಗಳನ್ನು ನಡೆಸಲಾಗಿತ್ತು.
ಎರಡೂ ದೇಶಗಳ ನಡುವೆ ಭಿನ್ನಾಭಿಪ್ರಾಯಗಳು ಉಂಟಾದಾಗ ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ಪ್ರಕ್ರಿಯೆಯನ್ನು ಸಂಘರ್ಷ ತಿಳಿಗೊಳಿಸುವಿಕೆ ಎಂದು ಹೇಳುತ್ತಾರೆ. ಮೊದಲನೆಯದಾಗಿ ಎರಡೂ ದೇಶಗಳ ಸೇನಾ ಕಮಾಂಡರ್ ನಡುವೆ ಮಾತುಕತೆ ನಡೆಯುತ್ತದೆ. ಉಭಯ ದೇಶಗಳಿಂದ ನಿಯಮ ಉಲ್ಲಂಘನೆ ಕುರಿತು ಆರೋಪ ಪ್ರತ್ಯಾರೋಪಗಳಿರಲಿವೆ.
ಭಾರತ ಹಾಗೂ ಚೀನಾ ನಡುವಿನ ಹಿಂದಿನ ಒಪ್ಪಂದಗಳು, ಯಾವ ದೇಶದ ಸೈನಿಕರು ಎಲ್ಲಿರಬೇಕು, ಈಗ ಎಲ್ಲಿವೆ ಎಂಬುದರ ಕುರಿತು ಚರ್ಚೆ ನಡೆಯುತ್ತದೆ.

ನೀವು ಮೊದಲನೇ ಹಂತಕ್ಕೆ ಹೋದರೆ ನಾವು ಕೂಡ ಮೊದಲನೇ ಹಂತಕ್ಕೆ ಹೋಗುತ್ತೇವೆ ಎಂದು ಸಂಧಾನ ಮಾಡಿಕೊಂಡರೆ ಉತ್ತಮ, ಇಲ್ಲವಾದಲ್ಲಿ ಸೇನೆಯ ಹಿರಿಯ ಅಧಿಕಾರಿಗಳ ಹಂತದಲ್ಲಿ ಮಾತುಕತೆ ನಡೆಯುತ್ತದೆ, ಅದಕ್ಕೂ ಒಪ್ಪದಿದ್ದರೆ ದೇಶದ ಪ್ರಮುಖ ರಾಜಕೀಯ ನಾಯಕರುಗಳ ಮಧ್ಯೆ ಚರ್ಚೆ ಮುಂದುವರೆಯಲಿದೆ.
ಮೊದಲ ಎರಡು ಹಂತಗಳಲ್ಲಿ ಸೇನೆಯ ಮಟ್ಟದಲ್ಲಿ ಸಭೆಗಳು ನಡೆಯಲಿವೆ, ಬಳಿಕ ವಿದೇಶಾಂಗ ಸಚಿವಾಲಯ, ರಕ್ಷಣಾ ಸಚಿವಾಲಯ ಅಂತಿಮವಾಗಿ ಪ್ರಧಾನಿ ಹಾಗೂ ಚೀನಾದ ಅಧ್ಯಕ್ಷರ ನಡುವೆ ಮಾತುಕತೆ ನಡೆಯಲಿದೆ.
ಮೊದಲೆರೆಡು ಹಂತದಲ್ಲಿ ಚೀನಾದಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗದೇ ಇದ್ದಲ್ಲಿ ಯುದ್ಧಕ್ಕೆ ಕರೆ ನೀಡುವ ಸಾಧ್ಯತೆಯೂ ಇದೆ.ಈ ಹಿಂದೆ ವುಹಾನ್ನಲ್ಲಿ ನಡೆದ ಭಾರತ-ಚೀನಾ ಅನೌಪಚಾರಿಕ ಮಾತುಕತೆಯ ವೇಳೆ ಸೇನೆಯ ಹಿರಿಯ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿತ್ತು, ಉಭಯ ರಾಷ್ಟ್ರಗಳ ನಡುವೆ ಇಂಥಹದ್ದೊಂದು ಪರಿಸ್ಥಿತಿ ಎದುರಾದಾಗ ಸಮಸ್ಯೆಯನ್ನು ಬಗೆಹರಿಸಲೆಂದೇ ಸಮಿತಿ ರಚಿಸಲಾಗಿತ್ತು.
ಇದು ಈಗ ಭಾರತ-ಚೀನಾ ನಡುವಿನ ಸಂರ್ಷದ ಸಂದರ್ಭದಲ್ಲಿ ಪ್ರಮುಖ ಪಾತ್ರವಹಿಸಲಿದೆ. ಲಡಾಖ್ನಲ್ಲಿ ಮಂಗಳವಾರ ನಡೆದ ಮುಷ್ಠಿಯುದ್ಧದಲ್ಲಿ ಭಾರತದ 20 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಭಾರತೀಯ ಸೇನೆಯು ಕೂಡ ಚೀನಾದ 43 ಮಂದಿಯನ್ನು ಹತ್ಯೆಗೈದಿರುವುದಾಗಿ ಮಾಹಿತಿ ನೀಡಿದೆ.












Click it and Unblock the Notifications