ನೀವು ಗಾಂಧಿ, ನೆಹರೂ ಇರಿಸಿದ್ದ ಜೈಲುಗಳಿವು: ಬ್ರಿಟನ್ಗೆ ಮೋದಿ ಖಡಕ್ ಉತ್ತರ
ನವದೆಹಲಿ, ಮೇ 29: ಭಾರತೀಯ ಬ್ಯಾಂಕುಗಳಿಗೆ ವಂಚಿಸಿ ಬ್ರಿಟನ್ಗೆ ಪರಾರಿಯಾದ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡೀಪಾರು ಮಾಡಲು ಜೈಲುಗಳ ಪರಿಸ್ಥಿತಿಯ ನೆಪವೊಡ್ಡಿರುವ ಅಲ್ಲಿನ ನ್ಯಾಯಾಲಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಖಡಕ್ ಉತ್ತರ ರವಾನಿಸಿದ್ದಾರೆ.
'ಭಾರತದ ಜೈಲುಗಳ ಸ್ಥಿತಿ ಉತ್ತಮವಾಗಿಲ್ಲ ಎಂದು ಇಂಗ್ಲೆಂಡ್ನ ನ್ಯಾಯಾಲಯ ಹೇಳಿದೆ. ಆದರೆ, ಮಹಾತ್ಮ ಗಾಂಧಿ, ನೆಹರೂ ಮುಂತಾದ ಮಹಾನ್ ನಾಯಕರನ್ನು ನೀವು ಹಿಂದೆ ಇರಿಸಿದ್ದು ಇದೇ ಜೈಲುಗಳಲ್ಲಿ' ಎಂದು ಮೋದಿ ಅವರು ಬ್ರಿಟಿಷ್ ಪ್ರಧಾನಿ ಥೆರೆಸಾ ಮೇ ಅವರಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಎನ್ಡಿಎ ಸರ್ಕಾರಕ್ಕೆ ನಾಲ್ಕು ವರ್ಷ ತುಂಬಿದ ಪ್ರಯುಕ್ತ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸುಷ್ಮಾ ಸ್ವರಾಜ್ ಈ ಮಾಹಿತಿ ನೀಡಿದ್ದಾರೆ.

ಏಪ್ರಿಲ್ನಲ್ಲಿ ನಡೆದ ಕಾಮನ್ವೆಲ್ತ್ ಸರ್ಕಾರಗಳ ಮುಖ್ಯಸ್ಥರ ಸಭೆಯ ವೇಳೆ ಪ್ರಧಾನಿ ಮೋದಿ ಅವರು ಥೆರೆಸಾ ಮೇ ಅವರಿಗೆ ಖಡಕ್ ಸಂದೇಶ ನೀಡಿದ್ದಾರೆ. ಭಾರತೀಯ ಜೈಲುಗಳ ಪರಿಸ್ಥಿತಿಯ ಬಗ್ಗೆ ಇಂಗ್ಲೆಂಡ್ ನ್ಯಾಯಾಲಯಗಳಲ್ಲಿ ದೂರಿರುವ ಮಲ್ಯ ಅವರ ಗಡಿಪಾರಿಗೆ ಸಂಬಂಧಿಸಿದಂತೆ ಈ ಸಂದರ್ಭದಲ್ಲಿ ಅವರು ಚರ್ಚೆ ನಡೆಸಿದ್ದರು.
ಮಲ್ಯ ಅವರ ಗಡಿಪಾರಿಗೆ ನಾವು ಮನವಿ ಸಲ್ಲಿಸಿದ್ದೇವೆ. ನ್ಯಾಯಾಲಯಗಳಲ್ಲಿ ಇರುವ ಪ್ರಕರಣಗಳ ಪೈಕಿ, 12 ಬ್ಯಾಂಕುಗಳನ್ನು ಒಳಗೊಂಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕರಣ ಬ್ಯಾಂಕ್ ಪರವಾಗಿದೆ. ಅವರು ಮಲ್ಯ ಅವರಿಂದ ಹಣವನ್ನು ಮರಳಿ ವಸೂಲಿ ಮಾಡಬಹುದಾಗಿದೆ ಎಂದು ಸುಷ್ಮಾ ತಿಳಿಸಿದ್ದಾರೆ.
ಬ್ಯಾಂಕುಗಳಿಗೆ ವಂಚಿಸಿದ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್ ಮಲ್ಯ, ದೇಶದಿಂದ ಪರಾರಿಯಾಗಿ ಈಗ ಇಂಗ್ಲೆಂಡ್ನಲ್ಲಿ ನೆಲೆಸಿದ್ದಾರೆ.
9000 ಕೋಟಿಗೂ ಅಧಿಕ ಮೊತ್ತದ ಹಣ ವಂಚನೆಯ ಆರೋಪ ಇರುವುದರಿಂದ ದೇಶದಲ್ಲಿನ ಅವರ ಆಸ್ತಿಪಾಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ. ಕಳೆದ ವರ್ಷದ ಏಪ್ರಿಲ್ನಲ್ಲಿ ಮಲ್ಯ ಅವರನ್ನು ಗಡಿಪಾರು ವಾರಂಟ್ನೊಂದಿಗೆ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಬಂಧಿಸಿದ್ದರು.
ಇದಲ್ಲದೆ, ಸಿಂಗಪುರ ಮೂಲದ ವಿಮಾನ ಲೀಸಿಂಗ್ ಕಂಪೆನಿಗೆ ಅಂದಾಜು 90 ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ಭರಿಸುವಂತೆ ಲಂಡನ್ ಹೈಕೋರ್ಟ್ ಫೆಬ್ರುವರಿ 12ರಂದು ಮಲ್ಯ ಅವರಿಗೆ ಆದೇಶಿಸಿತ್ತು.












Click it and Unblock the Notifications