ಸಂಸತ್ ಅಧಿವೇಶನ: ಸೇನಾ ಹೆಲಿಕಾಪ್ಟರ್ ಪತನದ ಬಗ್ಗೆ ರಾಜನಾಥ್ ಸಿಂಗ್ ವಿವರಣೆ
ನವದೆಹಲಿ, ಡಿಸೆಂಬರ್ 09: ಭಾರತೀಯ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ಸಿಂಗ್ ರಾವತ್ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಪತನವಾಗಿ ಜನರಲ್ ಬಿಪಿನ್ ರಾವತ್ ಮತ್ತು ಇತರ 12 ಮಂದಿ ಸಾವನ್ನಪ್ಪಿದ ಘಟನೆಯ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ನೀಡುವ ನಿರೀಕ್ಷೆಯಿದೆ.
ಈ ಮಧ್ಯೆ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಬಗ್ಗೆ ಪತ್ರಕರ್ತರು ವರದಿ ಮಾಡುವುದನ್ನು ತಡೆಯಲು ನಾವು ಯಾವುದೇ ಆದೇಶವನ್ನು ನೀಡಿಲ್ಲ ಎಂದು ಸರ್ಕಾರವು ಸಂಸತ್ತಿಗೆ ತಿಳಿಸಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಪತ್ರಕರ್ತರು ವರದಿ ಮಾಡುವುದನ್ನು ತಡೆಯುವ ಯಾವುದೇ ಆದೇಶವನ್ನು ಜೆ & ಕೆ ಆಡಳಿತ ಹೊರಡಿಸಿಲ್ಲ ಎಂದು ಗೃಹ ಸಚಿವಾಲಯ ತಿಳಿಸಿದೆ.
ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸಹಿತ 14 ಜನರಿದ್ದ ಸೇನಾ ಹೆಲಿಕಾಪ್ಟರ್ ಪತನವಾಗಿರುವ ಘಟನೆ ತಮಿಳುನಾಡಿನ ನೀಲ್ಗಿರಿ ಜಿಲ್ಲೆಯ ಕುನೂರ್ ಬಳಿ ನಡೆದಿದೆ. ಐಎಎಫ್ ಎಂಐ-17ವಿ5 ಹೆಲಿಕಾಪ್ಟರ್ ಇದಾಗಿದ್ದು, ಹೆಲಿಕಾಪ್ಟರ್ನಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13 ಮಂದಿ ದುರ್ಮರಣಕ್ಕೀಡಾಗಿರುವುದನ್ನು ಇರುವುದನ್ನು ಭಾರತೀಯ ಸೇನೆ ಈಗಾಗಲೇ ಖಚಿತಪಡಿಸಿದ್ದು, ತನಿಖೆಗೆ ಆದೇಶಿಸಿದೆ.

ಜನರಲ್ ಬಿಪಿನ್ ರಾವತ್ ಅವರು ಛೀಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಆಗಿ ಡಿಸೆಂಬರ್ 31, 2021 ತನಕ ಅಧಿಕಾರ ಅವಧಿ ಹೊಂದಿದ್ದರು. ಈಗ ಅಕಾಲಿಕ ಮರಣದ ಬಳಿಕ ಶೀಘ್ರದಲ್ಲೇ ಹೊಸ ಸಿಡಿಎಸ್ ನೇಮಕಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತಂತೆ ರಕ್ಷಣಾ ಸಚಿವ ರಾಜನಾಥ್ ಸಿಂಘ್ ಅವರು ಪ್ರಕ್ರಿಯೆ ಆರಂಭಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಲೋಕಸಭೆಯಲ್ಲಿ ಇಂದು ಏನು ನಡೆಯಲಿದೆ?
* ಡಾ. ಜಿತೇಂದ್ರ ಸಿಂಗ್ ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯಿದೆ, 1946 ಅನ್ನು ತಿದ್ದುಪಡಿ ಮಾಡುವ ಮಸೂದೆಯನ್ನು ಮಂಡನೆ ಮಾಡಲಿದ್ದಾರೆ.
* ಡಿಎಂಕೆ ಸಂಸದೆ ಕನಿಮೋಳಿ ಕರುಣಾನಿಧಿಯವರಿಂದ ಹವಾಮಾನ ಬದಲಾವಣೆ ಕುರಿತು ಮತ್ತಷ್ಟು ಚರ್ಚೆ ನಡೆಯಲಿದೆ.
* ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರತೀಯ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ಸಿಂಗ್ ರಾವತ್ ಸಾವಿಗೆ ಕಾರಣವಾದ ಹೆಲಿಕಾಪ್ಟರ್ ಪತನದ ಬಗ್ಗೆ ಹೇಳಿಕೆ ನೀಡುವ ನಿರೀಕ್ಷೆಯಿದೆ.
ರಾಜ್ಯಸಭೆಯಲ್ಲಿ ಏನು ನಡೆಯಲಿದೆ?
* ಡಾ. ಮನ್ಸುಖ್ ಮಾಂಡವಿಯಾ ಲೋಕಸಭೆಯಲ್ಲಿ ಅಂಗೀಕರಿಸಿದಂತೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್ ಆಕ್ಟ್, 1998 ಅನ್ನು ಮತ್ತಷ್ಟು ತಿದ್ದುಪಡಿ ಮಾಡುವ ಮಸೂದೆಯನ್ನು ಮಂಡಿಸಲಿದ್ದಾರೆ.
* ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಿಡಿಎಸ್ ಜನರಲ್ ಬಿಪಿನ್ ಸಿಂಗ್ ರಾವತ್ ಸಾವಿಗೆ ಕಾರಣವಾದ ಹೆಲಿಕಾಪ್ಟರ್ ಅಪಘಾತದ ಬಗ್ಗೆ ಹೇಳಿಕೆ ನೀಡುವ ನಿರೀಕ್ಷೆಯಿದೆ.
ಮುಂಗಾರು ಅಧಿವೇಶನದಲ್ಲಿ ದುರ್ನಡತೆ ತೋರಿದ ಆರೋಪದಲ್ಲಿ ಹಲವು ಸಂಸದರನ್ನು ಈ ಬಾರಿ ಚಳಿಗಾಲ ಅಧಿವೇಶನದಿಂದ ಅಮಾನತು ಮಾಡಲಾಗಿದೆ. ಈ ವಿಚಾರದಲ್ಲಿ ಚಳಿಗಾಲ ಅಧಿವೇಶನ ಆರಂಭವಾದ ಪ್ರಾರಂಭದಲ್ಲಿ ಅಧಿವೇಶನದಲ್ಲಿ ಗದ್ದಲ ನಡೆದು ಅಧಿವೇಶನ ಮುಂಡೂಡಿಕೆ ಮಾಡಲಾಗುತ್ತಿತ್ತು. ಇದರಿಂದಾಗಿ ಅಧಿವೇಶನ ಸರಿಯಾಗಿ ನಡೆದಿರಲಿಲ್ಲ. ಪ್ರಸ್ತುತ ಅಧಿವೇಶನವು ಅಧಿಕ ಸಮಯ ನಡೆಯುತ್ತಿದ್ದು ಇಂದು ಹೆಲಿಕಾಪ್ಟರ್ ಪತನದ ವಿಚಾರವೇ ಮುನ್ನಲೆಗೆ ಬರುವ ಸಾಧ್ಯತೆಗಳು ಅಧಿಕವಾಗಿದೆ.
ಇನ್ನು ಬುಧವಾರವೂ 12 ಸಂಸದರ ಅಮಾನತು ಹಿಂಪಡೆಯುವಂತೆ ಒತ್ತಾಯಿಸಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಆದರೆ ಲೋಕಸಭೆಯು ಪ್ರಮುಖ ವಿಷಯಗಳ ಚರ್ಚೆಗೆ ಸಾಕ್ಷಿಯಾಗಿದೆ. ಜೊತೆಗೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರ (ವೇತನ ಮತ್ತು ಸೇವಾ ಷರತ್ತುಗಳು) ತಿದ್ದುಪಡಿ ಮಸೂದೆ ಅನ್ನು ಅಂಗೀಕಾರ ಮಾಡಲಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications