ಲೋಕಸಭೆಯಲ್ಲಿ ಇಂದು; ರಾಜ್ಯಸಭೆಯಲ್ಲಿ ವಿಪಕ್ಷಗಳ ಹೋರಾಟ ಅಂತ್ಯ
ನವದೆಹಲಿ, ಡಿಸೆಂಬರ್ 20; ಎರಡು ದಿನಗಳ ಬಿಡುವಿನ ಬಳಿಕ ಸಂಸತ್ ಕಲಾಪ ಸೋಮವಾರ ಮತ್ತೆ ಆರಂಭವಾಗಲಿದೆ. ಡಿಸೆಂಬರ್ 23ರ ತನಕ ಅಧಿವೇಶನ ನಡೆಯಲಿದ್ದು, ಇಂದು ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆ ಇದೆ. ರಾಜ್ಯಸಭೆಯಲ್ಲಿ ವಿಪಕ್ಷಗಳು ತಮ್ಮ ಧರಣಿ ಅಂತ್ಯಗೊಳಿಸುವ ನಿರೀಕ್ಷೆ ಇದೆ.
ನವೆಂಬರ್ 29ರಂದು ಚಳಿಗಾಲದ ಅಧಿವೇಶನ ಆರಂಭಗೊಂಡಾಗ ರಾಜ್ಯಸಭೆಯ 12 ಸದಸ್ಯರನ್ನು ಸಭಾಪತಿ ಎಂ. ವೆಂಕಯ್ಯ ನಾಯ್ಡು ಅಮಾನತುಗೊಳಿಸಿದ್ದರು. ಈ ವಿಚಾರವನ್ನು ಖಂಡಿಸಿ ವಿರೋಧ ಪಕ್ಷಗಳು ಸಂಸತ್ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸುತ್ತಿವೆ.
ಅಮಾನತುಗೊಂಡಿರುವ 12 ಸದಸ್ಯರು ಸಂಸತ್ ಗಾಂಧಿ ಪ್ರತಿಮೆ ಮುಂದೆ ಡಿಸೆಂಬರ್ 1ರಿಂದ ಧರಣಿ ನಡೆಸುತ್ತಿದ್ದಾರೆ. ರಾಜ್ಯಸಭೆ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಮಾನತುಗೊಂಡ ಸದಸ್ಯರಿಗೆ ಬೆಂಬಲ ನೀಡಿದ್ದಾರೆ.

ಸದಸ್ಯರ ಅಮಾನತು ಆದೇಶ ವಾಪಸ್ ಪಡೆಯಬೇಕು ಎಂದು ವಿಪಕ್ಷಗಳು ರಾಜ್ಯಸಭೆಯಲ್ಲಿಯೂ ಗದ್ದಲ ಎಬ್ಬಿಸುತ್ತಿವೆ. ಸಮಾಜವಾದಿ ಪಕ್ಷ, ಎನ್ಸಿಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಸದಸ್ಯರ ಬೆಂಬಲಕ್ಕೆ ನಿಂತಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.
ರಾಜ್ಯಸಭೆಯ 12 ಸದಸ್ಯರ ಅಮಾನತು ವಿಚಾರವನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಎಂದು ಸರ್ಕಾರ ಮತ್ತು ವಿರೋಧ ಪಕ್ಷಗಳಿಗೆ ವೆಂಕಯ್ಯ ನಾಯ್ಡು ಸಲಹೆ ನೀಡಿದ್ದಾರೆ. ಸೋಮವಾರ ವಿಪಕ್ಷಗಳ ಜೊತೆ ಸಭೆ ನಡೆಯುವ ನಿರೀಕ್ಷೆ ಇದೆ. ಸದಸ್ಯರು ಕ್ಷಮೆ ಕೇಳಿದರೆ ಅಮಾನತು ಆದೇಶ ವಾಪಸ್ ಪಡೆಯಬಹುದು ಎಂದು ಹಿಂದೆ ಸರ್ಕಾರ ಹೇಳಿತ್ತು.
ಲೋಕಸಭೆ ಕಲಾಪ; ಲೋಕಸಭೆಯಲ್ಲಿ ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021-2022ರ ಹಣಕಾಸು ವರ್ಷದ ಸೇವೆಗಳಿಗಾಗಿ ಹೊರಗಿನ ಕೆಲವು ಹೆಚ್ಚಿನ ಮೊತ್ತಗಳ ಪಾವತಿ ಮತ್ತು ವಿನಿಯೋಗವನ್ನು ಅಧಿಕೃತಗೊಳಿಸುವ ವಿಧೇಯಕವನ್ನು ಮಂಡಿಸಲಿದ್ದಾರೆ.
ರಾಜ್ಯಸಭೆಯಲ್ಲಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಸಾಂಸ್ಥಿಕ ಮಧ್ಯಸ್ಥಿಕೆ, ವಿವಾದಗಳ ಪರಿಹಾರಕ್ಕಾಗಿ, ವಾಣಿಜ್ಯ ಅಥವಾ ಇತರ ರೀತಿಯಲ್ಲಿ, ಮಧ್ಯಸ್ಥಿಕೆ ಇತ್ಯರ್ಥ ಒಪ್ಪಂದಗಳನ್ನು ಜಾರಿಗೊಳಿಸಲು, ಮಧ್ಯವರ್ತಿಗಳ ನೋಂದಣಿಗಾಗಿ ಸಂಸ್ಥೆಯನ್ನು ಒದಗಿಸುವ ವಿಚಾರದ ಕುರಿತು ವಿಷಯ ಪ್ರಸ್ತಾಪಿಸಲಿದ್ದಾರೆ.
ದೇಶದಲ್ಲಿನ ಕೋವಿಡ್ ರೂಪಾಂತರಿ ಓಮಿಕ್ರಾನ್ ಪ್ರಕರಣಗಳ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ.












Click it and Unblock the Notifications