ವಿಡಿಯೋ; ನಮ್ಮ ಪಕ್ಷಕ್ಕೆ ಅಧ್ಯಕ್ಷರೇ ಇಲ್ಲ; ಕಪಿಲ್ ಸಿಬಲ್
ನವದೆಹಲಿ, ಸೆಪ್ಟೆಂಬರ್ 29: "ನಮ್ಮ ಪಕ್ಷದಲ್ಲಿ ಅಧ್ಯಕ್ಷರೇ ಇಲ್ಲ. ಹಾಗಾಗಿ ಈ ಎಲ್ಲಾ ನಿರ್ಧಾರಗಳನ್ನು ಯಾರು ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿದಿಲ್ಲ" ಎಂದು ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಹೇಳಿದರು.
ಬುಧವಾರ ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟಿನ ಕುರಿತು ಮಾತನಾಡಿರುವ ಕಪಿಲ್ ಸಿಬಲ್ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಹಿರಿಯ ನಾಯಕರ ಹೇಳಿಕೆ ಕೆಲವು ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.
"ಪಕ್ಷ ತೊರೆದಿರುವವರು ಮರಳಿ ಬರಬೇಕು. ದೇಶದ ಪ್ರತಿ ಕಾಂಗ್ರೆಸಿಗ ಪಕ್ಷ ಬಲವರ್ಧನೆ ಬಗ್ಗೆ ಯೋಚಿಸಬೇಕು. ಕಾಂಗ್ರೆಸ್ ಮಾತ್ರವೇ ಈ ಗಣರಾಜ್ಯವನ್ನು ಉಳಿಸಲು ಸಾಧ್ಯ" ಎಂದು ಕಪಿಲ್ ಸಿಬಲ್ ತಿಳಿಸಿದರು.
ಪಂಜಾಬ್ ಕಾಂಗ್ರೆಸ್ ಬೆಳವಣಿಗೆ ಕುರಿತು ಕಪಿಲ್ ಸಿಬಲ್ ಆತಂಕ ವ್ಯಕ್ತಪಡಿಸಿದರು. "ದೇಶದ ಗಡಿರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇಂಥ ಸ್ಥಿತಿ ಎದುರಾಗಿದೆ ಎಂದರೆ ಏನರ್ಥ?. ಇದು ಐಎಸ್ಐ ಮತ್ತು ಪಾಕಿಸ್ತಾನಕ್ಕೆ ಅನುಕೂಲಕರ ಆಗಬಹುದಾಗಿದೆ. ನಮಗೆಲ್ಲ ಪಂಜಾಬ್ ಇತಿಹಾಸ ತಿಳಿದಿದೆ" ಎಂದರು.
ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿದ್ದು, ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮಂಗಳವಾರ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು, ಪಕ್ಷದ ಕಾರ್ಯ ಚಟುವಟಿಕೆಯಲ್ಲಿ ಮುಂದುವರೆಯುತ್ತೇನೆ ಎಂದು ಹೇಳಿದ್ದಾರೆ.
|
ಪಂಜಾಬ್ ಕಾಂಗ್ರೆಸ್ನ ಬೆಳವಣಿಗೆಗಳು
ಕೆಲವು ದಿನಗಳ ಹಿಂದೆ ಪಂಜಾಬ್ ಮುಖ್ಯಮಂತ್ರಿ ಬದಲಾಗಿದ್ದರು. ಹೈಕಮಾಂಡ್ ಸೂಚನೆಂತೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮಂಗಳವಾರ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ಸರ್ಕಾರ ವಿರುವ ಪಂಜಾಬ್ನಲ್ಲಿನ ಬೆಳವಣಿಗೆ ಬಗ್ಗೆ ಹಿರಿಯ ನಾಯಕ ಕಪಿಲ್ ಸಿಬಲ್ ಮಾತನಾಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರ ನೇಮಕದ ಚರ್ಚೆ
ಎಐಸಿಸಿ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಇದ್ದಾರೆ. ಆದರೆ ಆಗಸ್ಟ್ ತಿಂಗಳಿನಲ್ಲಿ ಕಪಿಲ್ ಸಿಬಲ್ ವರಿಷ್ಠರಿಗೆ ಪತ್ರ ಬರೆದಿದ್ದರು. ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣೆ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಸುವುದು, ಕೇಂದ್ರಿಯ ಚುನಾವಣಾ ಸಮಿತಿ ಸಭೆ ನಡೆಸುವ ಕುರಿತು ಅವರು ವಿಚಾರ ಪ್ರಸ್ತಾಪಿಸಿದ್ದರು. ಆದರೆ ವರಿಷ್ಠರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ.

ಪಕ್ಷ ತೊರೆದು ಹೋಗುವವರಲ್ಲ
"ನಾವು (ಜಿ 23 ಮುಖಂಡರು) ಪಕ್ಷ ತೊರೆದು ಬೇರೆ ಎಲ್ಲೂ ಹೋಗುವವರಲ್ಲ. ಯಾರು ಪಕ್ಷದ ನಾಯಕತ್ವಕ್ಕೆ ಹತ್ತಿರದಲ್ಲಿದ್ದಾರೋ ಅವರು ಪಕ್ಷ ತೊರೆದರು. ಯಾರನ್ನು ಹತ್ತಿರದವರು ಎಂದು ಭಾವಿಸಲಿಲ್ಲವೋ ಅವರು ಇನ್ನೂ ಜೊತೆಗೆ ನಿಂತಿದ್ದಾರೆ" ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.
ಕಪಿಲ್ ಸಿಬಲ್ ಹೇಳಿಕೆ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ. ಅದರಲ್ಲೂ ಪಕ್ಷದ ಅಧ್ಯಕ್ಷರ ಬಗ್ಗೆ ಅವರು ಮಾತನಾಡಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಪತ್ರ ಬರೆಯುತ್ತಿರಬಹುದು
"ಪಕ್ಷದ ಸ್ಥಿತಿಯ ಬಗ್ಗೆ ಚರ್ಚಿಸಲು ಕೂಡಲೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯನ್ನು ನಡೆಸುವಂತೆ ನನ್ನ ಸಹೋದ್ಯೋಗಿ ಒಬ್ಬರು ಈಗಾಗಲೇ ಕಾಂಗ್ರೆಸ್ ಅಧ್ಯಕ್ಷರಿಗೆ ಪತ್ರ ಬರೆದಿರಬಹುದು ಅಥವ ಬರೆಯುತ್ತಿರಬಹುದು" ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.
ಕಪಿಲ್ ಸಿಬಲ್ ಅತ್ತ ಹೇಳಿಕೆ ನೀಡುತ್ತಿದ್ದರೆ ಇತ್ತ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದು, ತಕ್ಷಣ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಕರೆಯುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications