ಪ್ರವಾಹ ಪೀಡಿತ ಕೇರಳಕ್ಕೆ ಸಹಾಯಹಸ್ತ ಚಾಚಿದ ಇಮ್ರಾನ್ ಖಾನ್
ನವದೆಹಲಿ, ಆಗಸ್ಟ್ 24: ಕೇರಳದಲ್ಲಿ ಪ್ರವಾಹದಿಂದ ಉಂಟಾದ ಅನಾಹುತದ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಯಾವುದೇ ರೀತಿಯ ನೆರವು ನೀಡುವುದಾಗಿ ಸಿದ್ಧರಿರುವುದಾಗಿ ತಿಳಿಸಿದ್ದಾರೆ.
'ಕೇರಳದಲ್ಲಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವವರ ಒಳಿತಿಗಾಗಿ ಪಾಕಿಸ್ತಾನದ ಜನತೆಯ ಪರವಾಗಿ ನಾವು ನಮ್ಮ ಪ್ರಾರ್ಥನೆಯನ್ನು ಸಲ್ಲಿಸುತ್ತೇವೆ. ಅಗತ್ಯವಿರುವ ಯಾವುದೇ ಮಾನವೀಯ ನೆರವುಗಳನ್ನು ಒದಗಿಸಲು ನಾವು ಸಿದ್ಧರಿದ್ದೇವೆ' ಎಂದು ಇಮ್ರಾನ್ ಖಾನ್ ಅವರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
ಎಲ್ಲ ರೀತಿಯ ಸಹಾಯ ನೀಡಲು ಸಿದ್ಧರಿರುವುದಾಗಿ ಜಪಾನ್ನ ಪ್ರಧಾನಿ ಶಿಂಜೊ ಅಬೆ ಅವರೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂದೇಶ ರವಾನಿಸಿದ್ದಾರೆ.

'ಮಾತುಕತೆ ನಡೆದಿಲ್ಲ'
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಿಖಾಯಲ್ ಆರ್. ಪೊಂಪೆ ನಡುವಣ ಮಾತುಕತೆ ಸಂದರ್ಭದಲ್ಲಿ ಭಯೋತ್ಪಾದನೆ ವಿರುದ್ಧ ಪಾಕಿಸ್ತಾನವು 'ನಿರ್ಣಾಯಕ ಕ್ರಮ' ತೆಗೆದುಕೊಳ್ಳುವಂತೆ ಅಮೆರಿಕ ಸಲಹೆ ನೀಡಿದೆ ಎಂಬ ವರದಿಗಳನ್ನು ಪಾಕಿಸ್ತಾನ ತಳ್ಳಿಹಾಕಿದೆ.
ಅಮೆರಿಕ ಕಾರ್ಯದರ್ಶಿ ಮತ್ತು ಪ್ರಧಾನಿ ನಡುವೆ ನಡೆದ ದೂರವಾಣಿ ಸಂಭಾಷಣೆ ವೇಳೆ, ಈ ರೀತಿ ಮಾತುಕತೆ ನಡೆದಿದೆ ಎನ್ನುವುದು ತಪ್ಪು ಮಾಹಿತಿ. ಪಾಕಿಸ್ತಾನದಿಂದ ಭಯೋತ್ಪಾದಕರು ಕಾರ್ಯಾಚರಣೆ ನಡೆಸುತ್ತಿರುವುದರ ಕುರಿತು ಮಾತುಕತೆಯಲ್ಲಿ ಯಾವುದೇ ಪ್ರಸ್ತಾಪವಾಗಿಲ್ಲ.
ಅಮೆರಿಕದ ವಿದೇಶಾಂಗ ಸಚಿವಾಲಯವು ಬಿಡುಗಡೆ ಮಾಡಿರುವ ಹೇಳಿಕೆಯನ್ನು ಕೂಡಲೇ ಸರಿಪಡಿಸಬೇಕು ಎಂದು ಪಾಕ್ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಮೊಹಮ್ಮದ್ ಫೈಸಲ್ ಟ್ವೀಟ್ ಮಾಡಿದ್ದಾರೆ.












Click it and Unblock the Notifications