ಮೊರ್ಬಿ ದುರಂತ ಪ್ರಕರಣ: ಮಹತ್ವದ ಹೆಜ್ಜೆ ಇಟ್ಟ ಗುಜರಾತ್ ಸರ್ಕಾರ
ಕಳೆದ ವರ್ಷ ಗುಜರಾತ್ನಲ್ಲಿ ಇಡೀ ವಿಶ್ವವೇ ಬೆಚ್ಚಿ ಬೀಳಿಸುವಂತ ಘಟನೆ ನಡೆದಿತ್ತು. ಗುಜರಾತ್ನ ಮೊರ್ಬಿಯಲ್ಲಿ ಸೇತುವೆ ಕುಸಿದು ಅನೇಕರು ಸಾವನ್ನಪ್ಪಿದ್ದರು. ಇದೀಗ ಈ ವಿಚಾರದಲ್ಲಿ ದೊಡ್ಡ ಮಾಹಿತಿಯೊಂದು ಹೊರಬಿದ್ದಿದೆ. ಅದೇನೆಂದರೆ ಗುಜರಾತ್ ಸರ್ಕಾರ ಮೊರ್ಬಿ ನಾಗರಿಕ ಸಂಸ್ಥೆಯನ್ನು ವಿಸರ್ಜಿಸಿದೆ.
ಕಳೆದ ವರ್ಷ ಅಕ್ಟೋಬರ್ 30 ರಂದು ಗುಜರಾತ್ನ ಮೊರ್ಬಿಯಲ್ಲಿ ಸೇತುವೆ ಕುಸಿದು 135 ಜನರು ಸಾವನ್ನಪ್ಪಿದ್ದರು. ಮಾತ್ರವಲ್ಲದೆ ಅನೇಕ ಜನರು ಗಾಯಗೊಂಡಿದ್ದರು. ಹೀಗಾಗಿ ವಿರೋಧ ಪಕ್ಷಗಳು ಆಡಳಿತ ಪಕ್ಷ ಬಿಜೆಪಿ ವಿರುದ್ಧ ಆಕ್ರೋಶಗೊಂಡಿದ್ದವು. ಮೊರ್ಬಿಯಲ್ಲಿ ಸೇತುವೆ ದುರಂತಕ್ಕೆ ಬಿಜೆಪಿಯ ನಿರ್ಲಕ್ಷ್ಯದ ಆಡಳಿತವೇ ಕಾರಣ ಎಂದು ಕಾಂಗ್ರೆಸ್ ದೂರಿತ್ತು. ಜೊತೆಗೆ ದುರಂತದ ಹೊಣೆ ಹೊತ್ತಿ ಅಧಿಕಾರದಿಂದ ಕೆಳಗಿಳಿಯುವಂತೆ ಒತ್ತಾಯಿಸಲಾಗಿತ್ತು. ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಲಾಗಿತ್ತು.

ಇದರ ಬೆನ್ನಲ್ಲೇ ಮೊರ್ಬಿಯಲ್ಲಿ ಅಪಘಾತ ಸಂಭವಿಸಿದ ಐದು ತಿಂಗಳ ನಂತರ, ರಾಜ್ಯ ಸರ್ಕಾರವು ಮೋರ್ಬಿ ನಾಗರಿಕ ಸಂಸ್ಥೆಯನ್ನು ವಿಸರ್ಜಿಸಲು ನಿರ್ಧರಿಸಿದೆ. ರಾಜ್ಯ ಸರ್ಕಾರ ಮೊರ್ಬಿ ನಾಗರಿಕ ಸಂಸ್ಥೆಯನ್ನು ವಿಸರ್ಜಿಸಿದೆ ಎಂದು ಮೊರ್ಬಿಯ ಡಿಎಂ ಮಾಹಿತಿ ನೀಡಿದ್ದಾರೆ.
ಅಂದಹಾಗೆ ಮೊರ್ಬಿ ಸೇತುವೆಯನ್ನು ದುರಸ್ತಿ ಮಾಡಲು ಓರೆವಾ ಗ್ರೂಪ್ ನಾಗರಿಕ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಈ ಅಪಘಾತದ ನಂತರ, ಓರೆವಾ ಗ್ರೂಪ್ ನಾಗರಿಕ ಸಂಸ್ಥೆ ಮೇಲೆ ನಿರಂತರವಾಗಿ ಪ್ರಶ್ನೆಗಳನ್ನು ಎತ್ತಲಾಯಿತು. ಜನವರಿ ತಿಂಗಳಲ್ಲಿ ರಾಜ್ಯ ನಗರಾಭಿವೃದ್ಧಿ ಇಲಾಖೆಯು ಈ ಕುರಿತು ಪಾಲಿಕೆಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ತನ್ನ ಜವಾಬ್ದಾರಿಯನ್ನು ನಿಭಾಯಿಸಲು ಸಾಧ್ಯವಾಗದಿರುವಾಗ ಪಾಲಿಕೆಯನ್ನು ಏಕೆ ವಿಸರ್ಜಿಸಬಾರದು ಎಂದು ಕೇಳಿತ್ತು.

ಈ ಅಪಘಾತದ ನಂತರ, ಅದರ ತನಿಖೆಯಲ್ಲಿ ಅನೇಕ ರೀತಿಯ ನ್ಯೂನತೆಗಳು ಬಹಿರಂಗಗೊಂಡಿವೆ. ಪೌರಕಾರ್ಮಿಕರ ನಿರ್ಲಕ್ಷ್ಯದ ವಿಚಾರವೂ ಮುನ್ನೆಲೆಗೆ ಬಂದಿದೆ. ವರದಿಯ ಪ್ರಕಾರ, ಓರೆವಾ ಗ್ರೂಪ್ ನೀಡಿದ ಎಚ್ಚರಿಕೆಯನ್ನು ನಾಗರಿಕ ಸಂಸ್ಥೆ ಲೆಕ್ಕಿಸಲಿಲ್ಲ. ಓರೆವಾ ಗ್ರೂಪ್ ನಾಗರಿಕ ಸಂಸ್ಥೆಗೆ ಹಲವಾರು ಪತ್ರಗಳನ್ನು ಬರೆದಿದೆ. ಈ ಪತ್ರವನ್ನು 2018 ಮತ್ತು 2020 ರ ನಡುವೆ ಬರೆಯಲಾಗಿದೆ. ಪತ್ರದಲ್ಲಿ ಸೇತುವೆಯನ್ನು ಸಾರ್ವಜನಿಕರಿಗೆ ತೆರೆದರೆ ಅನೇಕ ಅಪಘಾತಗಳು ಸಂಭವಿಸಬಹುದು ಎಂದು ಎಚ್ಚರಿಸಿದ್ದಾರೆ.
ಎಚ್ಚರಿಕೆ ನೀಡಿದ ನಂತರವೂ ಪೌರಕಾರ್ಮಿಕರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿ ಹೇಳಿದೆ. ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಮಾಡಲಾಗಿದೆ. ಆದರೆ ನಾವು ನಿರಪರಾಧಿಗಳು, ನಾವು ಸೇತುವೆಯನ್ನು ಒರೆವ ಗ್ರೂಪ್ಗೆ ಹಸ್ತಾಂತರಿಸಿಲ್ಲ ಎಂದು ನಾಗರಿಕ ಸಂಸ್ಥೆ ತನ್ನ ಉತ್ತರದಲ್ಲಿ ಹೇಳಿದೆ. 52 ಕೌನ್ಸಿಲರ್ಗಳಲ್ಲಿ 41 ಮಂದಿ ವೈಯಕ್ತಿಕ ಉತ್ತರಗಳನ್ನು ನೀಡಿದ್ದು, ಇದರಲ್ಲಿ ಬಹುತೇಕ ಕೌನ್ಸಿಲರ್ಗಳು ಒರೆವ ಗ್ರೂಪ್ಗೆ ಸೇತುವೆಯನ್ನು ನೀಡಿದ ಒಪ್ಪಂದದ ಬಗ್ಗೆ ನಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಎಲ್ಲಾ 52 ಕಾರ್ಪೊರೇಟರ್ಗಳು ಬಿಜೆಪಿ ಕಾರ್ಪೊರೇಟರ್ಗಳು ಎಂದು ತಿಳಿಸುಬಂದಿದೆ.

ದುರಂತಕ್ಕೆ ಕಾರಣವೇನು?
ಲಂಬ ಸಸ್ಪೆಂಡರ್ಗಳು ಸೇತುವೆಯ ಡೆಕ್ ಅನ್ನು ಸಂಧಿಸುವ ಸಂಪರ್ಕ ಬಿಂದುಗಳ ದೌರ್ಬಲ್ಯತೆ ದುರಂತಕ್ಕೆ ಕಾರಣ ಎನ್ನಬಹುದು. ಈ ಬಿಂದುಗಳ ಮೂಲಕ ಡೆಕ್ ಮತ್ತು ಜನರ ಲೋಡ್ಗಳನ್ನು ಒಟ್ಟಿಗೆ ಸಸ್ಪೆಂಡರ್ಗಳಿಗೆ ವರ್ಗಾಯಿಸುತ್ತವೆ. ಸಸ್ಪೆಂಡರ್ ಗಳು ಪ್ರತಿಯಾಗಿ, ಲೋಡ್ಗಳನ್ನು ಮುಖ್ಯ ಕೇಬಲ್ಗೆ ವರ್ಗಾಯಿಸುತ್ತವೆ ಎಂದು ದೆಹಲಿ ಮೂಲದ ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಟ್ರಕ್ಚರಲ್ ಇಂಜಿನಿಯರ್ ಸಪ್ತದೀಪ್ ಸರ್ಕಾರ್ ಹೇಳಿದರು.












Click it and Unblock the Notifications