ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಏಕಾಂಗಿಯಾದರೆ ಫಲಿತಾಂಶ ಏನಾಗಲಿದೆ?

ನವದೆಹಲಿ, ಜನವರಿ 05 : ಉತ್ತರ ಪ್ರದೇಶದಲ್ಲಿ ಎರಡು ವರ್ಷಗಳ ಹಿಂದೆ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಏನಾಗಿತ್ತೆಂಬುದು, ಉತ್ತರ ಪ್ರದೇಶದ ರಾಜಕಾರಣವನ್ನು ಬಲ್ಲವರ ಮನಸ್ಸಿನಲ್ಲಿ ಇನ್ನೂ ಹಸಿರಾಗಿರುತ್ತದೆ. ಅದಕ್ಕೂ ಮೊದಲು ಮುಖ್ಯಮಂತ್ರಿಯಾಗಿದ್ದ ಅಖಿಲೇಶ್ ಯಾದವ್ ಅವರು ಮರೆತಿರಲಿಕ್ಕೆ ಸಾಧ್ಯವೇ ಇಲ್ಲ.

ಅಂದು ಓರಿಸ್ಸಾ, ತಮಿಳುನಾಡು, ಆಂಧ್ರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ... ಎಲ್ಲೆಡೆಯಲ್ಲಿರೂ ಹೀನಾಯ ಸೋಲು ಕಂಡಿದ್ದ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಭಾರೀ ಮಹತ್ವಾಕಾಂಕ್ಷೆಯೊಂದಿಗೆ, ಬಿಜೆಪಿಯನ್ನು ಮಕಾಡೆ ಮಲಗಿಸುವ ಉದ್ದೇಶದಿಂದ, ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಕಂಡರಿಯದ ಸೋಲು ಅನುಭವಿಸಿತ್ತು.

ಅಕ್ಕ ಪ್ರಿಯಾಂಕಾ ವದ್ರಾ ಆದೇಶದಂತೆ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು, ಅಖಿಲೇಶ್ ಯಾದವ್ ಅವರ ಸೈಕಲ್ ಏರಿದ್ದ ರಾಹುಲ್ ಗಾಂಧಿ ಅವರು, ಅಖಿಲೇಶ್ ಅವರನ್ನೂ ಎಳೆದುಕೊಂಡು ಗುಂಡಿಗೆ ಬಿದ್ದಿದ್ದರು. ಆಗ ಕೂಡ ರಾಹುಲ್ ಗಾಂಧಿ ಅವರು, ತಾವು ಉತ್ತರ ಪ್ರದೇಶದಲ್ಲಿ ಮಾಡಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಬದಲಿಗೆ ಮೋದಿ ವಿರುದ್ಧ ಅಸಂಬದ್ಧ ಹೇಳಿಕೆಗಳನ್ನು ನೀಡಿದ್ದು ಮುಳುವಾಗಿತ್ತು.

ಆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಸಮಾಜವಾದಿ ಪಕ್ಷ 105 ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದ್ದರೂ ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಗೆದ್ದಿದ್ದು ಕೇವಲ 7 ಸೀಟುಗಳು ಮಾತ್ರ. ಅಂದು ತಿಂದ ಹೊಡೆತವನ್ನು ಅಖಿಲೇಶ್ ಯಾದವ್ ಅವರು ಇನ್ನೂ ಮರೆತಿಲ್ಲ. ಹಾಗಾಗಿಯೇ ಉತ್ತರ ಪ್ರದೇಶದಲ್ಲಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಅಖಿಲೇಶ್ ಹಿಂದೇಟು ಹಾಕಿದ್ದಾರೆ.

ರಾಹುಲ್ ರನ್ನು ಹೊರಗಿಟ್ಟ ಅಖಿಲೇಶ್

ರಾಹುಲ್ ರನ್ನು ಹೊರಗಿಟ್ಟ ಅಖಿಲೇಶ್

ಈ ಇತಿಹಾಸವನ್ನು ಬಲ್ಲ ಅಖಿಲೇಶ್ ಯಾದವ್ ಅವರು ಜಾಣತನದಿಂದ ರಾಹುಲ್ ಗಾಂಧಿ ಅವರನ್ನು ಉತ್ತರ ಪ್ರದೇಶದಲ್ಲಿ ಮಹಾಮೈತ್ರಿಯಿಂದ ಹೊರಗಿಟ್ಟಿದ್ದಾರೆ. ಅವರು ಕುಮಾರಿ ಮಾಯಾವತಿ ಅವರ ಬಹುಜನ ಸಮಾಜ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದು, ಕಾಂಗ್ರೆಸ್ಸಿಗೆ ಭಾರೀ ಮುಜುಗರವಾಗುವಂತೆ ಮಾಡಿದ್ದಾರೆ. ಇದರ ಪರಿಣಾಮ ಏನಾಗಲಿದೆ? ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎನ್ಡಿಎಯನ್ನು ಕಟ್ಟಿಹಾಕಲು ಯಶಸ್ವಿಯಾಗುವುದಾ? ಅಥವಾ ಈ ಮೈತ್ರಿಯೇ ಮುಳುವಾಗುವುದಾ?

ಬಿಜೆಪಿಗೆ ಸಿಕ್ಕಿತ್ತು ಅಭೂತಪೂರ್ವ ಯಶಸ್ಸು

ಬಿಜೆಪಿಗೆ ಸಿಕ್ಕಿತ್ತು ಅಭೂತಪೂರ್ವ ಯಶಸ್ಸು

ವಿಧಾನಸಭೆ ಚುನಾವಣೆ ಫಲಿತಾಂಶವನ್ನು ಬದಿಗಿಟ್ಟು, ಕಳೆದ ಲೋಕಸಭೆ ಚುನಾವಣೆಯ ಫಲಿತಾಂಶದತ್ತ ಹಿಂತಿರುಗಿ ನೋಡುವುದಾದರೆ, ಕಾಂಗ್ರೆಸ್ ಮುಖ ಎತ್ತಿಕೂಡ ನೋಡಲಾಗದಂಥ ಫಲಿತಾಂಶ ಬಂದಿತ್ತು. ಇರುವ 90 ಕ್ಷೇತ್ರಗಳಲ್ಲಿ ಬಿಜೆಪಿ 71ರಲ್ಲಿ ಜಯಭೇರಿ ಬಾರಿಸಿದ್ದರೆ, ಸಮಾಜವಾದಿ ಪಕ್ಷ 5 ಮತ್ತು ಕಾಂಗ್ರೆಸ್ ಕೇವಲ 2 ಸೀಟುಗಳನ್ನು ಗೆದ್ದು ಮುಖಭಂಗ ಅನುಭವಿಸಿತ್ತು. ಬಿಜೆಪಿ ಶೇ.61ರಷ್ಟು ಹೆಚ್ಚಿನ ಸೀಟುಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ ಶೇ.19ರಷ್ಟು ಕಳೆದುಕೊಂಡಿತ್ತು. ಆದರೆ, ಈ ಬಾರಿ ಅಂಥ ಪವಾಡ ಸಂಭವಿಸುವ ಸಾಧ್ಯತೆ ಕಡಿಮೆಯಿದೆ.

ಕಾಂಗ್ರೆಸ್ ಎಸ್ಪಿ ಬಿಎಸ್ಪಿ ಒಂದಾಗಿದ್ದರೆ

ಕಾಂಗ್ರೆಸ್ ಎಸ್ಪಿ ಬಿಎಸ್ಪಿ ಒಂದಾಗಿದ್ದರೆ

ಇತ್ತೀಚೆಗೆ ನಡೆದಿರುವ ಕೆಲ ಸಮೀಕ್ಷೆಯ ಪ್ರಕಾರ, ಒಂದು ವೇಳೆ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಒಟ್ಟಿಗೆ ಸ್ಪರ್ಧಿಸಿದ್ದರೆ ಬಿಜೆಪಿಗೆ ಭಾರೀ ಏಟು ಬೀಳುವ ಸಾಧ್ಯತೆ ಇತ್ತು. ಆಗ ಮಹಾಘಟಬಂಧನ 56 ಸೀಟುಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿತ್ತು. ಕಳೆದ ಬಾರಿ 71 ಸೀಟು ಗೆದ್ದಿದ್ದ ಬಿಜೆಪಿ ಕೇವಲ 24 ಸೀಟುಗಳಿಗೆ ಸಮಾಧಾನ ಪಡಬೇಕಾದ ಸಂಭವನೀಯತೆ ಎದುರಾಗುತ್ತಿತ್ತು. ಆದರೆ, ಎಸ್ಪಿ ಮತ್ತು ಬಿಎಸ್ಪಿಗಳು ತಾವಾಗಿಯೇ ಕಾಂಗ್ರೆಸ್ಸನ್ನು ಹೊರಗಿಟ್ಟಿರುವುದರಿಂದ ಕಾಂಗ್ರೆಸ್ಸಿಗೆ ಹೊಡೆತ ಬೀಳುವುದು ಖಚಿತ. ಬಿಜೆಪಿಯೂ ಇದರಿಂದ ನಷ್ಟ ಅನುಭವಿಸಲಿದೆ ಎಂದು ಸಮೀಕ್ಷೆ ಹೇಳುತ್ತದೆ.

ಜಾಣತನ ಮೆರೆದ ಮಾಯಾವತಿ

ಜಾಣತನ ಮೆರೆದ ಮಾಯಾವತಿ

ಒಂದು ವೇಳೆ ಮಾಯಾವತಿ ಅವರು ಮಧ್ಯ ಪ್ರದೇಶದಲ್ಲಿ ಮಾಡಿದಂತೆ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದರೆ, ಒಂದೂ ಸೀಟು ಗೆಲ್ಲುವುದಿಲ್ಲ ಎಂದು ಸಮೀಕ್ಷೆಗಳು ಹೇಳಿರುವುದರಿಂದ ತಮ್ಮ ಅಹಂಕಾರವನ್ನು ಬದಿಗಿಟ್ಟಿರುವ ಅವರು, ಸಮಾಜವಾದಿ ಪಕ್ಷದ ಜೊತೆ ಕೈಜೋಡಿಸಲು ನಿರ್ಧರಿಸಿದ್ದಾರೆ. ಒಂದು ವೇಳೆ ಅವರು ಏಕಾಂಗಿಯಾಗಿ ಸ್ಪರ್ಧಿಸಿದ್ದರೆ ಬಿಜೆಪಿ ಮತ್ತೆ 70 ಸೀಟು ಗೆಲ್ಲುವ ಸಾಧ್ಯತೆ ನಿಚ್ಚಳವಾಗಿತ್ತು. ಇದಾಗದಂತೆ ತಡೆಯಲು ಮಾಯಾವತಿ ಮತ್ತು ಅಖಿಲೇಶ್ ಯಾದವ್ ಜಂಟಿ ಚುನಾವಣಾ ಕಾರ್ಯಾಚರಣೆ ನಡೆಸಲಿದ್ದಾರೆ. ಇದು ಜಾಣತನದ ನಡೆ ಕೂಡ.

ಕಾಂಗ್ರೆಸ್ ಏಕಾಂಗಿಯಾದರೆ ಏನಾಗಲಿದೆ?

ಕಾಂಗ್ರೆಸ್ ಏಕಾಂಗಿಯಾದರೆ ಏನಾಗಲಿದೆ?

ಕಾಂಗ್ರೆಸ್ ಪಕ್ಷವನ್ನು ಮಹಾಘಟಬಂಧನದಿಂದ ಹೊರಗಿಟ್ಟು, ಎಸ್ಪಿ ಮತ್ತು ಬಿಎಸ್ಪಿಗಳು ಒಗ್ಗಟ್ಟಿನಿಂದ ಲೋಕಸಭೆ ಚುನಾವಣೆ ಎದುರಿಸಿದರೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಭಾರೀ ನಷ್ಟ ಅನುಭವಿಸುವುದು ಗ್ಯಾರಂಟಿ. ಪ್ರಧಾನಿ ಹುದ್ದೆಯ ಮೇಲೆ ನೆಟ್ಟ ಕಣ್ಣಿಟ್ಟಿರುವ ಮಾಯಾವತಿ ಅವರಿಗೆ ಕೂಡ ಬೇಕಾಗಿರುವುದು ಅದೇ. ಎಬಿಪಿ ನ್ಯೂಸ್ ಮತ್ತು ಸಿವೋಟರ್ ನಡೆಸಿದ್ದ ಚುನಾವಣಾ ಸಮೀಕ್ಷೆಯ ಪ್ರಕಾರ, ಎನ್ಡಿಎ ಕೇವಲ 36 ಸೀಟು ಗೆಲ್ಲಲಿದೆ ಮತ್ತು ಕಾಂಗ್ರೆಸ್ ಎಂದಿನಂತೆ 2ಕ್ಕೆ ತೃಪ್ತಿಪಡಬೇಕಾಗಿದೆ. ಉಳಿದವು ಮಹಾಘಟಬಂಧನದ ಪಾಲಾಗಲಿವೆ. ಈ ಲೆಕ್ಕಾಚಾರವೇ ನಿಜವಾದರೆ ಕಾಂಗ್ರೆಸ್ಸಿಗೆ ಮುಖಭಂಗ ಮಾತ್ರವಲ್ಲ, ಬಿಜೆಪಿಗೂ ಭಾರೀ ಹೊಡೆತ ಬೀಳುವುದು ಗ್ಯಾರಂಟಿ.

ಲೆಕ್ಕಾಚಾರಗಳು ತಲೆಕೆಳಗಾದರೂ ಅಚ್ಚರಿಯಿಲ್ಲ

ಲೆಕ್ಕಾಚಾರಗಳು ತಲೆಕೆಳಗಾದರೂ ಅಚ್ಚರಿಯಿಲ್ಲ

ಮಧ್ಯ ಪ್ರದೇಶ ಮತ್ತು ರಾಜಸ್ಥಾನದಲ್ಲಿ ರಾಹುಲ್ ಗಾಂಧಿ ಅವರು ಮಾಯಾವತಿ ಅವರ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳದೆ ಜಯಶಾಲಿಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಆಶಾದಾಯಕವಾಗಿ ಪರಿಣಮಿಸಿದೆ ಮತ್ತು ರಾಹುಲ್ ಅವರಲ್ಲಿ ಹೆಚ್ಚಿನ ವಿಶ್ವಾಸ ತುಂಬಿವೆ. ಉತ್ತರ ಪ್ರದೇಶದಲ್ಲಿ ಮೇಲಿನ ಈ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾದರೂ ಅಚ್ಚರಿಯಿಲ್ಲ. ಗುಜರಾತ್ ಚುನಾವಣೆಯಿಂದೀಚೆಗೆ ಸಾಕಷ್ಟು ಜನಪ್ರಿಯತೆ ಗಳಿಸಿರುವ ರಾಹುಲ್ ಗಾಂಧಿ ಅವರು ಈ ಸಾಧ್ಯಾಸಾಧ್ಯತೆಗಳನ್ನು ಅರಿಯದವರೇನಲ್ಲ. ಆದರೆ, ವಿಧಾನಸಭೆ ಚುನಾವಣೆಯ ತೂಕವೇ ಒಂದಾದರೆ, ಲೋಕಸಭೆ ಚುನಾವಣೆಯ ತೂಕವೇ ಬೇರೆ. ಎರಡನ್ನೂ ಹೋಲಿಸಲು ಸಾಧ್ಯವೇ ಇಲ್ಲ. ಹೀಗಾಗಿ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿದರೆ ಏನು ಬೇಕಾದರೂ ಆಗಬಹುದು.

ಅಮಿತ್ ಶಾ ಅವರ ಮನದಲ್ಲಿ ಏನೇನಿದೆ?

ಅಮಿತ್ ಶಾ ಅವರ ಮನದಲ್ಲಿ ಏನೇನಿದೆ?

ಈ ಮೈತ್ರಿಕೂಟಗಳು ಜರುಗುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಏಕಾಂಗಿಯಾಗಿಯೇ ಚುನಾವಣೆ ಎದುರಿಸಲು ಮಾನಸಿಕವಾಗಿ ಸಿದ್ಧವಾಗುತ್ತಿದೆ. ಆದರೆ, ಇದನ್ನು ಗಮನಿಸುತ್ತಿರುವ ಭಾರತೀಯ ಜನತಾ ಪಕ್ಷ ಯಾವ ತಂತ್ರಗಾರಿಕೆ ಹೂಡಲಿದೆ ಎಂದು ಕುತೂಹಲಕರ ಸಂಗತಿಯಾಗಿದೆ. ಏಕೆಂದರೆ, ಕೇಂದ್ರದಲ್ಲಿ ಮತ್ತೆ ಆಡಳಿತದ ಚುಕ್ಕಾಣಿ ನರೇಂದ್ರ ಮೋದಿಯವರು ಹಿಡಿಯಬೇಕಿದ್ದರೆ ಉತ್ತರ ಪ್ರದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಭಾರತೀಯ ಜನತಾ ಪಕ್ಷಕ್ಕಿದೆ. ಇದರ ಜೊತೆ ಅಯೋಧ್ಯೆ ವಿವಾದದಿಂದಾಗಿ ಬಿಜೆಪಿ ಅಡಕತ್ತರಿಯಲ್ಲಿ ಸಿಲುಕಿದೆ. ರಾಮ ಮಂದಿರ ಕಟ್ಟುತ್ತೇನೆಂದರೂ ಕಷ್ಟ, ಕಟ್ಟುವುದಿಲ್ಲ ಎಂದರೂ ಕಷ್ಟ! ಅಮಿತ್ ಶಾ ಮತ್ತು ನರೇಂದ್ರ ಮೋದಿ ಅವರ ಏನೇನು ಲೆಕ್ಕಾಚಾರ ಹಾಕುತ್ತಿದ್ದಾರೋ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+