ಆಗಸ್ಟ್ 20ರವರೆಗೂ ಈ ರಾಜ್ಯಗಳಲ್ಲಿ ಅಧಿಕ ಮಳೆ ಸೂಚನೆ; IMD
ನವದೆಹಲಿ, ಆಗಸ್ಟ್ 17: ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯಲ್ಲಿನ ಮೇಲ್ಮೈ ಸುಳಿಗಾಳಿಯ ಪ್ರಭಾವದಿಂದಾಗಿ ದೇಶದ ಕೆಲವು ಭಾಗಗಳಲ್ಲಿ ಮುಂದಿನ ಮೂರು ದಿನ ಮಳೆಯಾಗುವುದಾಗಿ ತಿಳಿದುಬಂದಿದೆ.
ಮುಖ್ಯವಾಗಿ ತೆಲಂಗಾಣದಲ್ಲಿ ಅಧಿಕ ಮಳೆ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ತೆಲಂಗಾಣದಲ್ಲಿ ಮುಂದಿನ ಮೂರು ದಿನಗಳ ಕಾಲ, ಅಂದರೆ ಆಗಸ್ಟ್ 20ರವರೆಗೂ ಅಧಿಕ ಮಳೆಯಾಗುವುದು ಎಂದು ತಿಳಿಸಿದೆ.
ತೆಲಂಗಾಣ ಮಧ್ಯ, ಉತ್ತರ ಹಾಗೂ ಈಶಾನ್ಯ ಭಾಗಗಳಲ್ಲಿ ಸಾಧಾರಣದಿಂದ ಅಧಿಕ ಮಟ್ಟದ ಮಳೆಯಾಗುವುದಾಗಿ ಮುನ್ಸೂಚನೆ ನೀಡಿದೆ. ಒಡಿಶಾದ ಕರಾವಳಿ ಹಾಗೂ ಆಂಧ್ರಪ್ರದೇಶದ ಉತ್ತರ ಭಾಗದಲ್ಲಿ, ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಚಂಡಮಾರುತದ ಪ್ರಭಾವ ಮೂರು ದಿನ ಮುಂದುವರೆಯುವುದಾಗಿ ಹೈದರಾಬಾದ್ನ ಭಾರತೀಯ ಹವಾಮಾನ ಇಲಾಖೆ ನಿರ್ದೇಶಕಿ ಡಾ. ಕೆ. ನಾಗರತ್ನ ತಿಳಿಸಿದ್ದಾರೆ.

ಈ ಚಂಡಮಾರುತದ ಪ್ರಭಾವದಿಂದಾಗಿ ತೆಲಂಗಾಣದ ಹಲವು ಭಾಗಗಳಲ್ಲಿ ಅಧಿಕ ಮಳೆಯಾಗಲಿದೆ. ಮುಂದಿನ 24 ಗಂಟೆಗಳಲ್ಲಿ ಉತ್ತರ, ವಾಯವ್ಯ, ಮಧ್ಯ ಭಾಗಗಳಲ್ಲಿ ಭಾರೀ ಮಳೆಯಾಗುವುದಾಗಿ ಎಚ್ಚರಿಕೆ ನೀಡಲಾಗಿದೆ. ಆಗಸ್ಟ್ 18ರಂದು ಹೈದರಾಬಾದ್ನಲ್ಲಿ ಕೂಡ ಸಾಧಾರಣದಿಂದ ಅಧಿಕ ಪ್ರಮಾಣದ ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಕೆಲವು ದಿನಗಳ ವಿರಾಮದ ನಂತರ ನೈಋತ್ಯ ಮುಂಗಾರು ಮತ್ತೆ ಚುರುಕುಪಡೆಯುತ್ತಿದೆ. ದಕ್ಷಿಣ ಭಾರತದಲ್ಲಿ ಈ ಅವಧಿಯಲ್ಲಿ ಹೆಚ್ಚಿನ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ 24 ಗಂಟೆಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪ್ರಭಾವ ಒಡಿಶಾ ಹಾಗೂ ಆಂಧ್ರಪ್ರದೇಶದ ಕರಾವಳಿಯಲ್ಲಿ ಗೋಚರಿಸಲಿದೆ ಎಂದು ಐಎಂಡಿ ನಿರ್ದೇಶಕ ಮೃತ್ಯುಂಜಯ ಮಹೋಪಾತ್ರ ತಿಳಿಸಿದ್ದಾರೆ.
"ಮತ್ತೆ ಮುಂಗಾರು ಚುರುಕು ಪಡೆದಿದ್ದು, ಭಾರತದ ಹಲವು ರಾಜ್ಯಗಳಲ್ಲಿ ಮತ್ತೆ ಮಳೆ ಆರಂಭವಾಗಲಿದೆ. ಇದಾಗ್ಯೂ ಉತ್ತರ ಭಾರತ ಹಾಗೂ ಗುಜರಾತ್ನಲ್ಲಿ ಮಳೆ ಕಡಿಮೆಯಾಗುವ ಸಾಧ್ಯತೆ ಇದೆ" ಎಂದು ಅವರು ಹೇಳಿದ್ದಾರೆ.
ಜುಲೈನ ಮಧ್ಯದಿಂದ ದೇಶದ ಹಲವು ಭಾಗಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿತ್ತು. ಆನಂತರ ಮಳೆ ಚಟುವಟಿಕೆ ತಗ್ಗಿತ್ತು. ಇದೀಗ ಮತ್ತೆ ಚುರುಕುಪಡೆಯಲಿದೆ.

ಪಶ್ಚಿಮ ಬಂಗಾಳದಲ್ಲಿ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಅಧಿಕ ಮಳೆಯಾಗುವ ಸೂಚನೆ ನೀಡಲಾಗಿದೆ. ತೆಲಂಗಾಣ, ವಿದರ್ಭಾ, ಛತ್ತೀಸ್ಗಡ, ಮಧ್ಯಪ್ರದೇಶದಲ್ಲಿ ಆಗಸ್ಟ್ 16ರಿಂದ 18ರವರೆಗೂ ಮಳೆ ಮುಂದುವರೆಯುತ್ತದೆ ಎಂದು ಇಲಾಖೆ ಸೂಚನೆ ನೀಡಿದೆ. ಆಗಸ್ಟ್ 16-17ರವರೆಗೂ ಒಡಿಶಾದಲ್ಲಿ, ತೆಲಂಗಾಣದಲ್ಲಿ ಆಗಸ್ಟ್ 17-18ರವರೆಗೂ ಮಳೆಯಾಗುತ್ತದೆ. ದೇಶದ ಉಳಿದ ಭಾಗಗಳಲ್ಲಿ ಚದುರಿದ ಮಳೆಯಾಗುವ ಸಂಭವವಿದೆ ಎಂದು ತಿಳಿಸಿದೆ.
ಛತ್ತೀಸ್ಗಡದಲ್ಲಿ ಮತ್ತೊಂದು ಚಂಡಮಾರುತದ ಪ್ರಭಾವದಿಂದಾಗಿ ಮಳೆಯಾಗಲಿದೆ. ಆಗಸ್ಟ್ 17ರವರೆಗೂ ವ್ಯಾಪಕ ಮಳೆ ಬೀಳುವ ಸೂಚನೆ ನೀಡಲಾಗಿದೆ. ಮುಂದಿನ ಕೆಲವು ದಿನಗಳವರೆಗೂ ದೇಶದಲ್ಲಿ ದುರ್ಬಲ ಮುಂಗಾರು ಮುಂದುವರೆಯಲಿದೆ. ಈಶಾನ್ಯ ಹಾಗೂ ಪೂರ್ವ ಭಾರತದಲ್ಲಿ, ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ, ಪಂಜಾಬ್, ಹರಿಯಾಣ, ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್ನಲ್ಲಿ ಇನ್ನೂ ಕೆಲವು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದಲ್ಲಿ ಎಲ್ಲೆಲ್ಲಿ ಮಳೆ?
ರಾಜ್ಯದ ಉತ್ತರ ಒಳನಾಡಿನಲ್ಲಿ ಮುಂಗಾರು ಚುರುಕುಗೊಂಡಿದ್ದು, ಆಗಸ್ಟ್ 17ರಿಂದ 18ರವರೆಗೂ ಈ ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಬಾಗಲಕೋಟೆ, ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿರುವುದಾಗಿ ತಿಳಿಸಿದೆ.












Click it and Unblock the Notifications