ಚಂಡಮಾರುತ ಪ್ರಭಾವ; ಈ ರಾಜ್ಯಗಳಲ್ಲಿ ಮುಂದಿನ ಐದು ದಿನಗಳವರೆಗೂ ಭಾರೀ ಮಳೆ
ನವದೆಹಲಿ, ಸೆಪ್ಟೆಂಬರ್ 27: ಈ ಬಾರಿ ಮುಂಗಾರು ಅಂತ್ಯ ವಿಳಂಬವಾಗಲಿದ್ದು, ಸೆಪ್ಟೆಂಬರ್ ತಿಂಗಳ ನಂತರವೂ ದೇಶದ ಹಲವೆಡೆ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸೆಪ್ಟೆಂಬರ್ 30ರ ನಂತರ ದೇಶದಲ್ಲಿ ಮುಂಗಾರು ಮಳೆ ತಗ್ಗಲಿದೆ. ಇದಾಗ್ಯೂ ಅಕ್ಟೋಬರ್ ತಿಂಗಳ ಮಧ್ಯ ಭಾಗದವರೆಗೂ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಹಾನಿರ್ದೇಶಕ ಮೃತ್ಯುಂಜಯ ಮಹೋಪಾತ್ರ ತಿಳಿಸಿದ್ದಾರೆ. ವಾಯುಭಾರ ಕುಸಿತ ಹಾಗೂ ಚಂಡಮಾರುತ ಪ್ರಭಾವದಿಂದಾಗಿ ಮುಂಗಾರು ಅಂತ್ಯ ಈ ಬಾರಿ ವಿಳಂಬವಾಗಲಿದೆ. ಸೆಪ್ಟೆಂಬರ್ ವೇಳೆಗೆ ಮುಂಗಾರು ಅಂತ್ಯವಾಗಲು ಸದ್ಯ ದೇಶದಲ್ಲಿ ಹವಾಮಾನ ವ್ಯವಸ್ಥೆ ಸೂಕ್ತವಾಗಿಲ್ಲ ಎಂದು ಅವರು ಹೇಳಿದ್ದಾರೆ.
ಗುಲಾಬ್ ಚಂಡಮಾರುತ ಪ್ರಭಾವದಿಂದಾಗಿ ಆಂಧ್ರ ಹಾಗೂ ಒಡಿಶಾದಲ್ಲಿ ಭಾರೀ ಮಳೆಯಾಗುತ್ತಿದ್ದು, ಮಹಾರಾಷ್ಟ್ರದಲ್ಲಿಯೂ ಅಧಿಕ ಮಳೆ ಎಚ್ಚರಿಕೆ ನೀಡಲಾಗಿದೆ. ಒಡಿಶಾ, ಆಂಧ್ರ ಹಾಗೂ ಪಶ್ಚಿಮ ಬಂಗಾಳದಲ್ಲಿ ಮೂರು ದಿನಗಳ ಅವಧಿ ದಕ್ಷಿಣ ಕೇಂದ್ರ ವಿಭಾಗದ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಸೆಪ್ಟೆಂಬರ್ 27ರಿಂದ ಆರಂಭಗೊಂಡು ಅಕ್ಟೋಬರ್ 1ರವರೆಗೂ ಕೆಲವು ರಾಜ್ಯಗಳಲ್ಲಿ ಅಧಿಕ ಮಳೆಯಾಗಲಿದೆ. ಮುಂಗಾರಿನೊಂದಿಗೆ ವಾಯುಭಾರ ಕುಸಿತದ ಪ್ರಭಾವ ಅಧಿಕ ಮಳೆ ತರಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಸೆಪ್ಟೆಂಬರ್ 27ರಂದು ಆಂಧ್ರ ಕರಾವಳಿ ಪ್ರದೇಶದ ಉತ್ತರ ಭಾಗ, ದಕ್ಷಿಣ ಛತ್ತೀಸ್ಗಢ, ವಿದರ್ಭಾ, ಕೇರಳ ಹಾಗೂ ತೆಲಂಗಾಣದಲ್ಲಿ ಭಾರೀ ಮಳೆಯಾಗಲಿದೆ. ಒಡಿಶಾ, ಮಧ್ಯ ಮಹಾರಾಷ್ಟ್ರ, ಕೊಂಕಣ, ಗೋವಾ, ಗುಜರಾತ್, ಕರ್ನಾಟಕದ ಉತ್ತರ ಒಳನಾಡು, ತಮಿಳುನಾಡು, ಪುದುಚೇರಿ, ಕಾರೈಕಾಲ್ನಲ್ಲಿ ಅಧಿಕ ಮಳೆಯಾಗಲಿದೆ. ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಅಂಡಮಾನ್ ನಿಕೋಪಾರ್, ಕರ್ನಾಟಕದ ಕರಾವಳಿ ತೀರಗಳಲ್ಲಿ ಸೆಪ್ಟೆಂಬರ್ 27ರಂದು ವ್ಯಾಪಕ ಮಳೆಯಾಗುವುದಾಗಿ ಮುನ್ಸೂಚನೆ ದೊರೆತಿದೆ.
ವಿದರ್ಭಾ, ಛತ್ತೀಸ್ಗಡ, ಉತ್ತರಾಖಂಡ, ರಾಜಸ್ಥಾನ, ಮಧ್ಯಪ್ರದೇಶ, ಅಸ್ಸಾಂ ಮೇಘಾಲಯ, ಮಿಝೋರಾಂ, ಗುಜರಾತ್, ಕೊಂಕಣ, ಗೋವಾ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲಿ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಗುಡುಗು ಮಿಂಚು ಸಹಿತ ಮಳೆಯಾಗಲಿದೆ ಎಂದು ಸೂಚನೆ ನೀಡಿದೆ.

ನೈಋತ್ಯ ಹಾಗೂ ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಪ್ರಭಾವ ಮುಂದುವರೆಯಲಿದೆ. ಇದರಿಂದಾಗಿ ಅಕ್ಟೋಬರ್ 1ರವರೆಗೂ ಈ ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ.
ಸೌರಾಷ್ಟ್ರ, ಕಚ್ನಲ್ಲಿ ಸೆಪ್ಟೆಂಬರ್ 29ರಂದು ಭಾರೀ ಮಳೆಯಾಗಲಿದೆ. ಗುಜರಾತ್, ಕೊಂಕಣ, ಗೋವಾದಲ್ಲಿ ಕೂಡ ಅಧಿಕ ಮಳೆಯಾಗಲಿದ್ದು, ಪಶ್ಚಿಮ ಬಂಗಾಳ, ಒಡಿಶಾ, ಮಧ್ಯ ಮಹಾರಾಷ್ಟ್ರದಲ್ಲಿ ಮಿಂಚು ಗುಡುಗು ಸಹಿತ ಮಳೆಯಾಗಲಿದೆ ಎಂದು ತಿಳಿಸಿದೆ.
ಅಬ್ಬರಿಸುತ್ತಿರುವ ಗುಲಾಬ್ ಚಂಡಮಾರುತ
ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಗುಲಾಬ್ ಚಂಡಮಾರುತವು ಭಾನುವಾರ ರಾತ್ರಿ ಒಡಿಶಾ-ಆಂಧ್ರಪ್ರದೇಶ ಗಡಿಭಾಗಕ್ಕೆ ತಲುಪಿದ್ದು ತೀವ್ರ ಅನಾಹುತ ಸೃಷ್ಟಿಸಿದೆ. ಚಂಡಮಾರುತದಿಂದಾಗಿ ಒಡಿಶಾ ಹಾಗೂ ಆಂಧ್ರಪ್ರದೇಶ ಎರಡೂ ಕಡೆಯೂ ಅಧಿಕ ಮಳೆಯಾಗಿದೆ. ಒಡಿಶಾ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಪ್ರವಾಹ ಆತಂಕವಿದ್ದ ಪ್ರದೇಶಗಳಿಂದ ಒಂದು ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಗುಲಾಬ್ ಚಂಡಮಾರುತದ ಪ್ರಭಾವದಡಿಯಲ್ಲಿ ಮಹಾರಾಷ್ಟ್ರದ ಎಲ್ಲಾ 36 ಜಿಲ್ಲೆಗಳಿಗೆ ಸೋಮವಾರ ಮತ್ತು ಮಂಗಳವಾರ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ.
ಆಂಧ್ರಪ್ರದೇಶದ ಉತ್ತರ ಕರಾವಳಿ ಶ್ರೀಕಾಕುಳಂ ಜಿಲ್ಲೆಯಲ್ಲಿ ಗುಲಾಬ್ ಚಂಡಮಾರುತದ ಅಬ್ಬರಕ್ಕೆ ಹಡಗು ಸಮತೋಲನ ಕಳೆದುಕೊಂಡಿದ್ದು, ಬೋಟ್ನಲ್ಲಿದ್ದ ಆರು ಮೀನುಗಾರರ ಪೈಕಿ, ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮುಂದಿನ ಐದಾರು ಗಂಟೆಗಳಲ್ಲಿ ಗುಲಾಬ್ ಚಂಡಮಾರುತ ತೀವ್ರತೆ ಸ್ವಲ್ಪ ಕಡಿಮೆಯಾಗಲಿದೆ ಎಂದು ತಿಳಿದುಬಂದಿದೆ.











Click it and Unblock the Notifications