ಮುಂದಿನ 5 ದಿನಗಳ ಕಾಲ ಮಳೆ ಸೂಚನೆ ಕೊಟ್ಟ ಹವಾಮಾನ ಇಲಾಖೆ
ನವದೆಹಲಿ, ಮಾರ್ಚ್ 16: ಮುಂದಿನ ಐದು ದಿನಗಳ ಕಾಲ ದೇಶದ ವಾಯವ್ಯ ರಾಜ್ಯಗಳು ಸೇರಿದಂತೆ ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಗುಡುಗುಸಹಿತ ಮಳೆಯಾಗುವ ಸಾಧ್ಯತೆ ಇರುವುದಾಗಿ ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ತೀವ್ರತೆ ಹೆಚ್ಚಿದ್ದು, ಉಷ್ಣವಲಯ ಪರಿಣಾಮ ಬೀರುತ್ತಿರುವ ಕಾರಣ ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಇನ್ನಷ್ಟು ಮಳೆಯಾಗುವ ಸಾಧ್ಯತೆಯಿರುವುದಾಗಿ ತಿಳಿಸಿದೆ. ಮಾರ್ಚ್ 20ರವರೆಗೂ ಮಳೆಯಾಗಲಿದ್ದು, ಮಾರ್ಚ್ 16ರ ರಾತ್ರಿಯಿಂದ ಹಿಮಾಲಯದ ಪಶ್ಚಿಮ ಭಾಗಗಳಲ್ಲಿ ಭಾರೀ ಮಳೆ ಆರಂಭವಾಗುವುದಾಗಿ ತಿಳಿಸಿದೆ. ಮುಂದೆ ಓದಿ...
ಉತ್ತರ ಭಾರತದಲ್ಲಿ ಗುಡುಗು ಸಹಿತ ಮಳೆ, ರಾಜ್ಯದಲ್ಲೂ ತುಂತುರು ಮಳೆ ಸೂಚನೆ
ಮುಂದಿನ ಐದು ದಿನಗಳವರೆಗೂ ಮಳೆ
ಮುಂದಿನ ಐದು ದಿನಗಳ ಕಾಲ ಪಶ್ಚಿಮ ಹಿಮಾಲಯ ಪ್ರದೇಶ ಹಾಗೂ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಚದುರಿದ ಮಳೆಯಾಗಲಿದ್ದು, ಜಮ್ಮು-ಕಾಶ್ಮೀರ, ಲಡಾಖ್, ಗಿಲ್ಗಿಟ್-ಬಾಲ್ಟಿಸ್ತಾನ ಹಾಗೂ ಮುಜಾಫರ್ಬಾದ್ನಲ್ಲಿ ಮಾರ್ಚ್ 16 ಹಾಗೂ 17ರಂದು ಮಳೆಯಾಗುವ ಎಲ್ಲಾ ಸಾಧ್ಯತೆಗಳಿರುವುದಾಗಿ ಇಲಾಖೆ ತಿಳಿಸಿದೆ. ಮಾರ್ಚ್ 18 ಹಾಗೂ 19ರಂದು ವಾಯವ್ಯ ರಾಜ್ಯಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಲಿರುವುದಾಗಿ ತಿಳಿದುಬಂದಿದೆ.
ಅರುಣಾಚಲದಲ್ಲಿ ಮೂರು ದಿನ ಮಳೆ
ಮಾರ್ಚ್ 18ರಿಂದ 20ರವರೆಗೆ ಮಧ್ಯ ಪ್ರದೇಶ, ಮಧ್ಯ ಮಹಾರಾಷ್ಟ್ರ, ಮರಾಠವಾಡ, ವಿದರ್ಭದಲ್ಲಿ ಮಳೆಯಾಗಲಿದೆ ಎಂದು ಇಲಾಖೆ ಸೂಚನೆ ನೀಡಿದೆ. ಮುಂದಿನ ಮೂರು ದಿನಗಳ ಕಾಲ ಅರುಣಾಚಲ ಪ್ರದೇಶದಲ್ಲಿ ಮಳೆಯಾಗಲಿದ್ದು, ಆನಂತರ ಬಿಸಿಲು ಆರಂಭವಾಗುವುದಾಗಿ ತಿಳಿಸಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯದಲ್ಲಿ ಮಾರ್ಚ್ 19ರವರೆಗೂ ಮಳೆಯಾಗುವುದಾಗಿ ತಿಳಿಸಿದೆ. ಮುಂದಿನ ಎರಡು ದಿನಗಳಲ್ಲಿ ಸೌರಾಷ್ಟ್ರ ಹಾಗೂ ಕಚ್ನಲ್ಲಿ ಬಿಸಿಗಾಳಿ ಹೆಚ್ಚಾಗುವುದಾಗಿ ತಿಳಿಸಿದೆ.
ಕಲ್ಯಾಣ ಕರ್ನಾಟಕದಲ್ಲಿ ಸುಡು ಬಿಸಿಲಿನ ತಾಪಮಾನ, ಎಲ್ಲೆಲ್ಲಿ ಎಷ್ಟು?
ದೆಹಲಿಯಲ್ಲಿ ಹೆಚ್ಚಾಗುತ್ತಿರುವ ಶಾಖ
ದೆಹಲಿಯಲ್ಲಿ ಮಾರ್ಚ್ 14ರಿಂದ ಬಿಸಿಗಾಳಿ ಹೆಚ್ಚಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಸೋಮವಾರ 32 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇನ್ನು ಎರಡು ಮೂರು ದಿನಗಳ ನಂತರ ತಾಪಮಾನ ಇನ್ನಷ್ಟು ಏರಿಕೆಯಾಗುವುದಾಗಿ ತಿಳಿಸಿದೆ. ಮುಂದಿನ 24 ಗಂಟೆಗಳಲ್ಲಿ ಪೂರ್ವ ಭಾರತದಲ್ಲಿ 2-3 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆಯಾಗುವುದಾಗಿ ತಿಳಿಸಿದೆ.
ಈ ರಾಜ್ಯಗಳಲ್ಲಿ ಬಿಸಿಲು ಹೆಚ್ಚಾಗಲಿದೆ
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ಝಳ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಲ್ಲಿ ಇನ್ನು ಎರಡು ದಿನಗಳ ನಂತರ ತಾಪಮಾನ ಏರಿಕೆಯಾಗಲಿದೆ. ಮೇ ಅಂತ್ಯದವರೆಗೂ ಒಣ ಹವೆ, ಬಿಸಿಲಿನ ಝಳ ಮುಂದುವರೆಯುತ್ತದೆ ಎಂದು ಮಾಹಿತಿ ನೀಡಿದೆ. ಪಂಜಾಬ್, ರಾಜಸ್ತಾನ, ಗುಜರಾತ್, ಹರಿಯಾಣ, ಚಂಡೀಗಢ, ದೆಹಲಿ, ಗೋವಾ, ಪಶ್ಚಿಮ ಬಂಗಾಳ, ತಮಿಳುನಾಡು, ಕರಾವಳಿ ಕರ್ನಾಟಕ, ಪುದುಚೆರಿ, ಅಸ್ಸಾಂ, ಮೇಘಾಲಯದಲ್ಲಿ ತಾಪಮಾನ ಹೆಚ್ಚಾಗುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.