ಗುಜರಾತ್ನ ಕೆಲವು ಭಾಗಗಳಲ್ಲಿ ಭಾರೀ ಮಳೆ; ಮುಂದಿನ 2 ದಿನ ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
ಅಹಮದಾಬಾದ್, ಜುಲೈ. 21: ಗುಜರಾತ್ನ ಹಲವೆಡೆ ವರುಣನ ಆರ್ಭಟ ಮುಂದುವರೆದಿದ್ದು, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ಗುಜರಾತ್ಗೆ ಶನಿವಾರ ಮತ್ತು ಭಾನುವಾರದಂದು 'ರೆಡ್' ಅಲರ್ಟ್ ನೀಡಿದೆ. ಈ ಎರಡು ದಿನಗಳಲ್ಲಿ ರಾಜ್ಯವು "ಭಾರೀ ಮಳೆಯಿಂದ ಅತಿ ಹೆಚ್ಚು (204.4 ಮಿಮೀಗಿಂತ ಹೆಚ್ಚು)" ಮಳೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಶುಕ್ರವಾರ ರಾಜ್ಯದಲ್ಲಿ ಆರೆಂಜ್ ಅಲರ್ಟ್ ಜಾರಿಯಿದ್ದು, 'ಭಾರಿಯಿಂದ ಅತಿ ಭಾರೀ' ಮಳೆಯಾಗುವ ಮುನ್ಸೂಚನೆ ಇದೆ. ಭಾರೀ ಮಳೆಯಿಂದಾಗಿ ರಾಜ್ಯದ ಕೆಲವು ಭಾಗಗಳಲ್ಲಿ, ಸೌರಾಷ್ಟ್ರ ಮತ್ತು ಕಚ್ನ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಗುರುವಾರ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಕೋಟ್ನಲ್ಲಿ ತೀವ್ರ ಜಲಾವೃತ ವರದಿಯಾಗಿದೆ.

ಈ ವಾರದ ಆರಂಭದಲ್ಲಿ, ಸೌರಾಷ್ಟ್ರದ ಕೆಲವು ಭಾಗಗಳಲ್ಲಿ ಮಳೆಯು ಮುಂದುವರಿದಿದ್ದರಿಂದ ಬುಧವರಾ ಮೂರು ಜನರು ಸಾವನ್ನಪ್ಪಿದ್ದಾರೆ. ಮಳೆಯಿಂದ ತತ್ತರಿಸಿದ್ದ ಸುಮಾರು 300 ಜನರನ್ನು ರಕ್ಷಿಸಲಾಗಿದೆ. ಮಳೆ ಸಂಬಂಧಿತ ಘಟನೆಗಳಲ್ಲಿ ಸುರೇಂದ್ರನಗರ ಜಿಲ್ಲೆಯಲ್ಲಿ ಎರಡು ಸಾವುಗಳು ವರದಿಯಾಗಿದ್ದು, ರಾಜ್ಕೋಟ್ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
⚠️ #RedAlert⚠️
— India Meteorological Department (@Indiametdept) July 21, 2023
Gujarat State is likely to get Heavy to Very heavy with Extremely heavy rainfall (more than 204.4 mm) on 22nd July#monsoon2023 #weather #WeatherUpdate #rain #monsoonseason #HeavyRainfallAlert #GujaratRains@moesgoi @DDNewslive @ndmaindia @airnewsalerts pic.twitter.com/Nh3em5c7yv
ಭಾರೀ ಮಳೆಯ ನಂತರ ವೆರಾವಲ್ ಪಟ್ಟಣದ ಹೆಚ್ಚಿನ ಭಾಗವು ಜಲಾವೃತಗೊಂಡಿದೆ. ಪ್ರವಾಹದಲ್ಲಿ ಸಿಲುಕಿದ್ದ 270 ಜನರನ್ನು ಎನ್ಡಿಆರ್ಎಫ್ ರಕ್ಷಿಸಿದರೆ, ಸೋಮನಾಥ ಬೈಪಾಸ್ ಬಳಿ ಗಿರ್ ಸೋಮನಾಥ್ ಪೊಲೀಸರು 30 ಜನರನ್ನು ರಕ್ಷಿಸಿದ್ದಾರೆ. ಮಳೆಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ತಂಡಗಳನ್ನು ಅಲರ್ಟ್ ಮಾಡಲಾಗಿದೆ.

ಗುಜರಾತಿನ 206 ಜಲಾಶಯಗಳ ಪೈಕಿ 43 ಜಲಾಶಯಗಳಲ್ಲಿ ಭಾರೀ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. 18 ಜಲಾಶಯಗಳ ಬಳಿ ಇರುವವರಿಗೆ ಅಲರ್ಟ್ ನೀಡಲಾಗಿದ್ದು, ಇನ್ನೂ 19 ಜಲಾಶಯಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ, ಒಡಿಶಾ, ಪ್ರವಾಹ ಪೀಡಿತ ಹಿಮಾಚಲ ಪ್ರದೇಶ ರಾಜ್ಯಗಳಿಗೆ ಹವಾಮಾನ ಇಲಾಖೆ ಭಾರೀ ಮಳೆಯ ಎಚ್ಚರಿಕೆ ನೀಡಿದೆ. ಇದಲ್ಲದೆ, ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಇರ್ಶಲ್ವಾಡಿಯ ಗುಡ್ಡಗಾಡು ಬುಡಕಟ್ಟು ಕುಗ್ರಾಮದಲ್ಲಿ ಭೂಕುಸಿತ ಸಂಭವಿಸಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ. ಹಲವಾರು ಮನೆಗಳು ಕುಸಿದಿದ್ದು, ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಗ್ರಾಮದ 228 ನಿವಾಸಿಗಳ ಪೈಕಿ 16 ಮಂದಿಯ ಮೃತದೇಹಗಳು ಪತ್ತೆಯಾಗಿದ್ದು, 93 ನಿವಾಸಿಗಳನ್ನು ಪತ್ತೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.












Click it and Unblock the Notifications