ಮುಂದಿನ 5 ದಿನಗಳ ಕಾಲ ಈ ರಾಜ್ಯಗಳಲ್ಲಿ ಮಳೆ ಮುನ್ಸೂಚನೆ
ನವದೆಹಲಿ, ಆಗಸ್ಟ್ 16: ದೇಶದಲ್ಲಿ ಮುಂಗಾರು ಪ್ರಭಾವ ಮುಂದುವರೆದಿದ್ದು, ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಜಾರ್ಖಂಡ್, ಆಂಧ್ರ ಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್ಗಡ ಹಾಗೂ ವಿದರ್ಭಾದಲ್ಲಿ ಮುಂದಿನ ಐದು ದಿನಗಳ ಕಾಲ ಮಳೆ ಮುಂದುವರೆಯುವುದಾಗಿ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಈಶಾನ್ಯ ಭಾರತದಲ್ಲಿ ಇನ್ನೂ ಕೆಲವು ದಿನ ಮಳೆಯಾಗಲಿದೆ. ಹಿಮಾಲಯ, ಪಶ್ಚಿಮ ಬಂಗಾಳ ಹಾಗೂ ಸಿಕ್ಕಿಂನಲ್ಲಿ ನಾಲ್ಕೈದು ದಿನಗಳ ಕಾಲ ಅಧಿಕ ಪ್ರಮಾಣದ ಮಳೆಯಾಗಲಿದೆ ಎಂದು ಸೂಚನೆ ನೀಡಿದೆ.
ಅಸ್ಸಾಂ ಹಾಗೂ ಮೇಘಾಲಯದಲ್ಲಿ ಆಗಸ್ಟ್ 16 ಹಾಗೂ 17ರಂದು ಅಧಿಕ ಮಳೆಯಾಗಲಿದೆ. ಅರುಣಾಚಲ ಪ್ರದೇಶದಲ್ಲಿ ಆಗಸ್ಟ್ 17ರಂದು ಹಾಗೂ ನಾಗಾಲ್ಯಾಂಡ್, ಮಣಿಪುರ, ಮಿಝೋರಾಂ ಹಾಗೂ ತ್ರಿಪುರಾದಲ್ಲಿ ಆಗಸ್ಟ್ 16ರಂದು ಹೆಚ್ಚಿನ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಮಳೆ ಇನ್ನೆರಡು ದಿನ ಮುಂದುವರೆಯುವುದಾಗಿ ತಿಳಿಸಿದೆ.

ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಜಾರ್ಖಂಡ್, ಆಂಧ್ರದ ಕರಾವಳಿ ಪ್ರದೇಶಗಳು, ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್ಗಡ ಹಾಗೂ ವಿದರ್ಭಾದಲ್ಲಿ ಮುಂದಿನ ಐದು ದಿನಗಳವರೆಗೂ ಮಳೆಯಾಗಲಿದೆ ಎಂದು ಇಲಾಖೆ ಎಚ್ಚರಿಕೆ ರವಾನಿಸಿದೆ.
ಆಗಸ್ಟ್ 17 ರಂದು ಆಂಧ್ರದ ಕರಾವಳಿಯಲ್ಲಿ ಅತಿ ಹೆಚ್ಚಿನ ಮಳೆಯಾಗಲಿದೆ. ಜಾರ್ಖಂಡ್ನಲ್ಲಿ ಆಗಸ್ಟ್ 16, 17 ಹಾಗೂ 18ರಂದು, ಬಿಹಾರದಲ್ಲಿ ಆಗಸ್ಟ್ 16, ಪಶ್ಚಿಮ ಬಂಗಾಳ, ಸಿಕ್ಕಿಂನಲ್ಲಿ ಆಗಸ್ಟ್ 16-20ರವರೆಗೆ, ಚಂಡೀಗಢ-ವಿದರ್ಭಾದಲ್ಲಿ ಆಗಸ್ಟ್ 16-18ರವರೆಗೂ ಮಳೆ ಮುಂದುವರೆಯುವುದಾಗಿ ತಿಳಿಸಿದೆ.
ವಿದರ್ಭಾ ಹೊರತುಪಡಿಸಿ ಮಹಾರಾಷ್ಟ್ರದಲ್ಲಿ ಮುಂದಿನ ಮೂರು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ. ಆನಂತರ ಮಳೆ ತಗ್ಗಲಿದೆ ಎಂದು ಇಲಾಖೆ ತಿಳಿಸಿದೆ. ಈಶಾನ್ಯ ಭಾರತ ಹಾಗೂ ಗುಜರಾತ್ನಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆ ಮುಂದುವರೆಯುವುದಾಗಿ ತಿಳಿಸಿದೆ.

ವಾಯವ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಪ್ರಭಾವ ಹಾಗೂ ವಾಯುಭಾರ ಕುಸಿತದ ಪ್ರಭಾವದಿಂದ ಒಡಿಶಾ, ಆಂಧ್ರ ಕರಾವಳಿ ತೀರ, ತೆಲಂಗಾಣ, ವಿದರ್ಭ ಹಾಗೂ ಛತ್ತೀಸ್ಗಡದಲ್ಲಿ ಆಗಸ್ಟ್ 17ರವರೆಗೂ ವ್ಯಾಪಕ ಮಳೆ ಬೀಳುವ ಸೂಚನೆ ನೀಡಲಾಗಿದೆ. ಪಂಜಾಬ್, ಹರಿಯಾಣ, ರಾಜಸ್ಥಾನದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ. ಪಶ್ಚಿಮ ಬಂಗಾಳದಲ್ಲಿ ಮಳೆ ತಗ್ಗಿದ್ದು, ಜನಜೀವನ ಯಥಾಸ್ಥಿತಿಗೆ ಮರಳುತ್ತಿದೆ. ಜಲಾವೃತವಾಗಿದ್ದ ಗ್ರಾಮಗಳು ಮೊದಲಿನ ಸ್ಥಿತಿಯತ್ತ ಮರಳುತ್ತಿವೆ.
Recommended Video
ಭಾರೀ ಮಳೆಯಿಂದಾಗಿ ಉಕ್ಕಿ ಹರಿಯುತ್ತಿದ್ದ ಗಂಗಾ ನದಿ ನೀರಿನ ಮಟ್ಟ ಇಳಿಕೆಯಾಗಿದೆ. ಹಲವೆಡೆ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಪ್ರವಾಹದಿಂದ ತತ್ತರಿಸಿದ್ದ ಪ್ರಯಾಗ್ ರಾಜ್ನಲ್ಲಿ ಜನಜೀವನ ಸುಧಾರಿಸುತ್ತಿದೆ.
ಕೇರಳ ಹಾಗೂ ತಮಿಳುನಾಡಿನಲ್ಲಿ ಕೂಡ ಇನ್ನು ಮೂರು ದಿನಗಳ ಕಾಲ ಚದುರಿದ ಮಳೆಯಾಗಲಿದೆ. ಆನಂತರ ಇಲ್ಲಿ ಮಳೆ ಪ್ರಮಾಣ ತಗ್ಗಲಿದೆ ಎಂದು ತಿಳಿಸಿದೆ.
ಕರ್ನಾಟಕದಲ್ಲಿ ಮಳೆ: ರಾಜ್ಯದ ಮಲೆನಾಡು, ಕರಾವಳಿಯಲ್ಲಿ ಆಗಸ್ಟ್ 16ರಂದು ವ್ಯಾಪಕ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಲೆನಾಡು ಭಾಗದಲ್ಲಿ ಚದುರಿದ ಮಳೆಯಾಗಲಿದೆ. ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಮಳೆ ಮುಂದುವರೆಯಲಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಅಧಿಕ ಮಳೆಯಾಗುವ ಸಾಧ್ಯತೆಯಿರುವುದಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ.
ಬೆಂಗಳೂರು ನಗರ ಪ್ರದೇಶದಲ್ಲಿ ಮೋಡ ಕವಿದ ವಾತಾವರಣವಿದ್ದು, ಗುಡುಗು ಸಹಿತ ಮಳೆಯಾಗುವುದಾಗಿ ತಿಳಿಸಿದೆ.












Click it and Unblock the Notifications