ಮುಂದಿನ 4-5 ದಿನ ಈ ರಾಜ್ಯಗಳಲ್ಲಿ ಅಧಿಕ ಮಳೆ ಮುನ್ಸೂಚನೆ
ನವದೆಹಲಿ, ಸೆಪ್ಟೆಂಬರ್ 17: ಚಂಡಮಾರುತ ಪ್ರಭಾವದಿಂದಾಗಿ ಮುಂದಿನ ನಾಲ್ಕೈದು ದಿನಗಳ ಕಾಲ ನೈಋತ್ಯ ಭಾರತದಲ್ಲಿ ಅಧಿಕ ಮಳೆಯಾಗುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಪ್ರದೇಶ, ಮಧ್ಯ ಪ್ರದೇಶದಲ್ಲಿ ಚಂಡಮಾರುತ ಪ್ರಭಾವದಿಂದ ಅಧಿಕ ಮಳೆಯಾಗುವುದಾಗಿ ತಿಳಿಸಿದೆ. ಚಂಡಮಾರುತ ಪ್ರಭಾವ ಮುಂದಿನ ಮೂರು ದಿನಗಳವರೆಗೂ ಮುಂದುವರೆಯುವ ಕಾರಣ ಈ ಅವಧಿಯಲ್ಲಿ ಹೆಚ್ಚಿನ ಮಳೆಯಾಗಲಿದೆ. ಮಧ್ಯ ಪ್ರದೇಶ, ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನದಲ್ಲಿ ಅತಿ ಹೆಚ್ಚಿನ ಮಳೆ ದಾಖಲಾಗುವುದು ಎಂದಿದೆ.
ಸೆಪ್ಟೆಂಬರ್ 17ರಂದು ಬಂಗಾಳ ಕೊಲ್ಲಿಯ ಉತ್ತರ ಭಾಗದಲ್ಲಿ ಚಂಡಮಾರುತ ಸೃಷ್ಟಿಯಾಗಲಿದ್ದು, ಇದರ ಪ್ರಭಾವದಿಂದ ಇದೇ ಶನಿವಾರ ಹಾಗೂ ಭಾನುವಾರ ದೇಶದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಲಿರುವುದಾಗಿ ಮುನ್ಸೂಚನೆ ನೀಡಿದೆ.

ಮುಂಗಾರು ಪ್ರಭಾವ ಸಾಮಾನ್ಯವಾಗಿರಲಿದೆ. ದಕ್ಷಿಣದೆಡೆಗೆ ಮುಂಗಾರು ಮುಖ ಮಾಡಲಿದೆ ಎಂದು ಹೇಳಿದೆ.
ಪೂರ್ವ ಬಂಗಾಳ ಕೊಲ್ಲಿ ಹಾಗೂ ಮ್ಯಾನ್ಮಾರ್ ಕರಾವಳಿಯಲ್ಲಿ ಚಂಡಮಾರುತದ ಪರಿಚಲನೆಯಿದ್ದು, ಇದು ಪಶ್ಚಿಮ- ವಾಯವ್ಯ ದಿಕ್ಕಿಗೆ ಚಲಿಸಲಿದೆ. ಶನಿವಾರದ ವೇಳೆಗೆ ಉತ್ತರ ಒಡಿಶಾ- ಪಶ್ಚಿಮ ಬಂಗಾಳ ಕರಾವಳಿ ಪ್ರದೇಶ ತಲುಪುವ ಸಾಧ್ಯತೆಯಿದೆ. ಈ ಕಾರಣವಾಗಿ ಪಶ್ಚಿಮ ಮಧ್ಯ ಪ್ರದೇಶದಲ್ಲಿ ಶನಿವಾರದವರೆಗೂ ವ್ಯಾಪಕ ಮಳೆಯಾಗುವ ಸಾಧ್ಯತೆಯಿರುವುದಾಗಿ ತಿಳಿಸಿದೆ. ಉತ್ತರ ಪ್ರದೇಶದಲ್ಲಿ ಶುಕ್ರವಾರ ಭಾರೀ ಮಳೆಯಾಗಲಿದೆ. ಉತ್ತರಾಖಂಡದಲ್ಲಿ ಸೆಪ್ಟೆಂಬರ್ 19ರಿಂದ 21ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಮುಂದಿನ ನಾಲ್ಕೈದು ದಿನಗಳಲ್ಲಿ ವಾಯವ್ಯ ಭಾರತದ ಉಳಿದ ಭಾಗಗಳಲ್ಲಿ ಸಾಧಾರಣ ಮಳೆಯಾಗಲಿದೆ. ಸೆಪ್ಟೆಂಬರ್ 21ರವರೆಗೆ ಪೂರ್ವ ರಾಜಸ್ಥಾನ ಹಾಗೂ ಗುಜರಾತ್ನಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ತಿಳಿಸಿದೆ.
ಚಂಡಮಾರುತದಿಂದಾಗಿ ಭಾರತದ ಪೂರ್ವ ಭಾಗದಲ್ಲಿ ಸೆಪ್ಟೆಂಬರ್ 18ರಂದು ಅಧಿಕ ಮಳೆಯಾಗಲಿದೆ. ಗುಜರಾತ್, ಮಧ್ಯ ಪ್ರದೇಶ, ಉತ್ತರ ಪ್ರದೇಶದಲ್ಲಿ ಸೆಪ್ಟೆಂಬರ್ 19ರ ನಂತರ ಮಳೆ ತಗ್ಗುವುದಾಗಿ ಮಾಹಿತಿ ನೀಡಿದೆ.
ಉತ್ತರ ಪ್ರದೇಶದಲ್ಲಿ ಮಳೆಯಿಂದ 13 ಮಂದಿ ಸಾವು: ಉತ್ತರ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ರಾಜ್ಯದ ಮೂವತ್ತು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಭಾರೀ ಮಳೆ ಕಾರಣವಾಗಿ ಶುಕ್ರವಾರ ಹಾಗೂ ಶನಿವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಭಾರೀ ಮಳೆಯಾಗಿದ್ದು, ಮಳೆ ಸಂಬಂಧ ಅವಘಡದಲ್ಲಿ ಹದಿಮೂರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರೈಲು ಸಂಚಾರವೂ ಅಸ್ತವ್ಯಸ್ಥವಾಗಿದೆ. 20 ವರ್ಷಗಳಲ್ಲೇ ಅಧಿಕ ಮಳೆಯನ್ನು ಲಖ್ನೋ ನಗರ ಪಡೆದುಕೊಂಡಿದೆ.
ಒಡಿಶಾದಲ್ಲಿ ಕೂಡ ಅಧಿಕ ಮಳೆ ಮುಂದುವರೆದಿದ್ದು, ನಾಲ್ಕು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ. ಒಡಿಶಾ, ಗುಜರಾತ್ ಹೊರತುಪಡಿಸಿ ಉತ್ತರಾಖಂಡ, ದೆಹಲಿ, ರಾಜಸ್ಥಾನದಲ್ಲಿ ಸೆಪ್ಟೆಂಬರ್ 18ರವರೆಗೂ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ.
ದೆಹಲಿಯಲ್ಲಿ ದಾಖಲೆಯ ಮಳೆ:
ಈ ಮುಂಗಾರು ಅವಧಿಯಲ್ಲಿ ದೆಹಲಿಯಲ್ಲಿ 1,146.4 ಎಂಎಂ ಮಳೆ ದಾಖಲಾಗಿದೆ. 46 ವರ್ಷಗಳಲ್ಲೇ ದಾಖಲಾದ ಅತಿ ಹೆಚ್ಚಿನ ಮಳೆ ಪ್ರಮಾಣ ಇದಾಗಿದೆ. 1975ರಲ್ಲಿ 1150 ಮಳೆ ಪ್ರಮಾಣ ದಾಖಲಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ 390 ಎಂಎಂ ಮಳೆ ಪ್ರಮಾಣ ದಾಖಲಾಗಿದೆ. 1901ರ ನಂತರ ದಾಖಲಾದ ಅತಿ ಹೆಚ್ಚಿನ ಮಳೆ ಪ್ರಮಾಣ ಇದಾಗಿದೆ. 1944ರಲ್ಲಿ ದೆಹಲಿಯಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ 417.3 ಎಂಎಂ ಮಳೆಯಾಗಿತ್ತು.
ಕರ್ನಾಟಕದ ಮಳೆ ವಿವರ:
ಸೆಪ್ಟೆಂಬರ್ 21ರವರೆಗೆ ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ಮತ್ತು ಮಲೆನಾಡು ಮಾತ್ರವಲ್ಲದೇ, ಉತ್ತರ ಕರ್ನಾಟಕದ ಕೊಪ್ಪಳ, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಬೆಳಗಾವಿ, ಗದಗ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.












Click it and Unblock the Notifications