ವಾಯುಪಡೆ ವಿಮಾನ ಅಪಘಾತ: ಎಲ್ಲ 13 ಶವಗಳು ಪತ್ತೆ
ನವದೆಹಲಿ, ಜೂನ್ 13: ತಿಂಗಳ ಆರಂಭದಲ್ಲಿ ಅಪಘಾತಕ್ಕೀಡಾಗಿದ್ದ ಎಎನ್ 32 ಸಾರಿಗೆ ವಿಮಾನದಲ್ಲಿದ್ದ ವಾಯುಪಡೆಯ ಎಲ್ಲ 13 ಮಂದಿಯ ಮೃತದೇಹ ಪತ್ತೆಯಾಗಿದೆ.
ವಿಮಾನದಲ್ಲಿ ತೆರಳಿದ್ದ ಸಿಬ್ಬಂದಿ ಹಾಗೂ ಪ್ರಯಾಣಿಕರ ಮೃತದೇಹದ ಜತೆಗೆ ವಿಮಾನದ ಕಪ್ಪು ಪೆಟ್ಟಿಗೆ ಸಹ ಪತ್ತೆಯಾಗಿದೆ. ಅರುಣಾಚಲ ಪ್ರದೇಶದಲ್ಲಿನ ಈ ದುರಂತ ನಡೆದ ಸ್ಥಳದಿಂದ ಮೃತದೇಹಗಳನ್ನು ಸಾಗಿಸಲು ಹೆಲಿಕಾಪ್ಟರ್ಗಳನ್ನು ಬಳಸಲಾಗುವುದು.
ಜೂನ್ 3ರಂದು ಅರುಣಾಚಲ ಪ್ರದೇಶದ ಮೆಂಚುಕಾ ವಾಯುನೆಲೆಯತ್ತ 13 ಸಿಬ್ಬಂದಿಯನ್ನು ಹೊತ್ತಿದ್ದ ಆಂಟೊನೊವ್ 32 ವಿಮಾನ ಕಣ್ಮರೆಯಾಗಿತ್ತು. ಅದರ ಅವಶೇಷ ಎಂಟು ದಿನಗಳ ಬಳಿಕ ಮಂಗಳವಾರ ಪತ್ತೆಯಾಗಿತ್ತು. ಹತ್ತು ದಿನಗಳ ಬಳಿಕವೂ ಅದರಲ್ಲಿದ್ದ ಪ್ರಯಾಣಿಕರು ಬದುಕುಳಿದಿರುವ ಆಶಯದೊಂದಿಗೆ ವಾಯುಪಡೆ ತೀವ್ರ ಕಾರ್ಯಾಚರಣೆ ನಡೆಸಿತ್ತು.

ಪ್ರತಿಕೂಲ ಹವಾಮಾನ ಮತ್ತು ದಟ್ಟಾರಣ್ಯದ ಪ್ರದೇಶದ ಕಾರಣದಿಂದ ಪತ್ತೆ ಕಾರ್ಯಾಚರಣೆಗೆ ತೊಡಕಾಗಿತ್ತು. ಗುರುವಾರ ಕೊನೆಗೂ ಅಪಘಾತ ನಡೆದ ಸ್ಥಳಕ್ಕೆ ತಲುಪುವಲ್ಲಿ ರಕ್ಷಣಾ ಕಾರ್ಯಪಡೆ ಯಶಸ್ವಿಯಾಗಿತ್ತು.
ಐಎಎಫ್ನ ಎಎನ್-32 ವಿಮಾನದ ಅವಶೇಷವು ಗುಡ್ಡಗಾಡಿನ ದಟ್ಟ ಅರಣ್ಯ ಪ್ರದೇಶದ ನಡುವೆ ಮಂಗಳವಾರ ಐಎಎಫ್ ಎಂಐ-17 ಹೆಲಿಕಾಪ್ಟರ್ ಕಣ್ಣಿಗೆ ಬಿದ್ದಿತ್ತು.
ದುರಂತದಲ್ಲಿ ಮೃತಪಟ್ಟವರು: ವಿಂಗ್ ಕಮಾಂಡರ್ ಜಿಎಂ ಚಾರ್ಲ್ಸ್, ಎಸ್/ಎಲ್ ಎಚ್ ವಿನೋದ್, ಎಫ್/ಎಲ್ ಆರ್ ಥಾಪಾ, ಎಫ್/ಎಲ್ ಎ ತನ್ವಾರ್, ಎಫ್/ಎಲ್ ಎಸ್ ಮೊಹಾಂತಿ, ಎಫ್/ಎಲ್ ಎಂಕೆ ಗರ್ಗ್, ಡಬ್ಲ್ಯೂಒ ಕೆಕೆ ಮಿಶ್ರಾ, ಎಸ್ಜಿಟಿ ಅನೂಪ್ ಕುಮಾರ್, ಸಿಪಿಎಲ್ ಶೆರಿನ್, ಎಲ್ಎಸಿ ಎಸ್ಕೆ ಸಿಂಗ್, ಎಲ್ಎಸಿ ಪಂಕಜ್, ಎನ್ಸಿ (ಇ) ಪುಟಾಲಿ ಮತ್ತು ಎನ್ಸಿ (ಇ) ರಾಜೇಶ್ ಕುಮಾರ್.












Click it and Unblock the Notifications