"ನಾನು ಶರಣಾಗುತ್ತಿಲ್ಲ": ಯೂಟ್ಯೂಬ್ ವಿಡಿಯೋ ಹಂಚಿಕೊಂಡ ಪರಾರಿಯಾದ ಅಮೃತಪಾಲ್ ಸಿಂಗ್
ಹೊಸದಿಲ್ಲಿ ಮಾರ್ಚ್ 31: ಕಳೆದ 13 ದಿನಗಳಿಂದ ತಲೆಮರಿಸಿಕೊಂಡಿರುವ ಸಿಖ್ ಧರ್ಮ ಪ್ರಚಾರಕ ಅಮೃತಪಾಲ್ ಸಿಂಗ್ ಸತತ ಎರಡನೇ ದಿನವೂ ಯೂಟ್ಯೂಬ್ನಲ್ಲಿ ವೀಡಿಯೋ ಬಿಡುಗಡೆ ಮಾಡಿದ್ದು, ಶರಣಾಗುವುದಿಲ್ಲ ಎಂದು ಹೇಳಿದ್ದಾರೆ. ಅಮೃತಪಾಲ್ ಸಿಂಗ್ ಪೊಲೀಸರ ಕಣ್ಣು ತಪ್ಪಿಸಿ ವೇಷ ಬದಲಾಯಿಸಿ ಓಡಾಡುತ್ತಿದ್ದಾನೆ.
ಅಪಹರಣಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಬಂಧಿಯಾಗಿದ್ದ ತನ್ನ ಆಪ್ತನನ್ನು ಬಿಡುಗಡೆಗೆ ಒತ್ತಾಯಿಸಿ ಖಲಿಸ್ತಾನ್ ಪರ 'ವಾರಿಸ್ ಪಂಜಾಬ್ ದೇ' ಸಂಘಟನೆಯ ಸದಸ್ಯರು ಹಾಗೂ ಅಮೃತಪಾಲ್ ಸಿಂಗ್ ಮಾರ್ಚ್ 18ರಂದು ಅಜ್ನಾಲಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು. ಲಾಂಗ್, ಬಂದೂಕು ಹಿಡಿದು ಪೊಲೀಸರಿಗೆ ಬೆದರಿಕೆ ಹಾಕಿದ್ದರು. ಕೆಲ ಪೊಲೀಸರ ಮೇಲೆ ಹಲ್ಲೆ ಕೂಡ ಮಾಡಲಾಗಿತ್ತು. ಈ ಘಟನೆಯ ರೂವಾರಿ ಅಮೃತಪಾಲ್ ಸಿಂಗ್ ಬಂಧನಕ್ಕೆ ಪೊಲೀಸರು ಮುಂದಾಗುತ್ತಿದ್ದಂತೆ ಆತ ಕಾಣೆಯಾಗಿದ್ದಾನೆ.

ತಲೆಮರಿಸಿಕೊಂಡಿರುವ ಅಮೃತಪಾಲ್ ಸಿಂಗ್
ಘಟನೆ ನಡೆದು ಎರಡು ವಾರಗಳು ಕಳೆದರೂ ಅಮೃತಪಾಲ್ ಸಿಂಗ್ ಪತ್ತೆಯಾಗಿಲ್ಲ. ಪೊಲೀಸರ ಕಣ್ಣು ತಪ್ಪಿಸಿ ವೇಷ ಬದಲಾಯಿಸಿಕೊಂಡು ಸ್ಥಳ ಬದಲಾಯಿಸುತ್ತಿದ್ದಾನೆ. ಜೊತೆಗೆ ಆತ ಬೇರೆ ಬೇರೆ ವೇಷದಲ್ಲಿ ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ವಾರ್ಗಾವಣೆಯಾಗಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡು ಬಂದಿದೆ.
ಈ ನಡುವೆ ಅಕಾಲ್ ತಖ್ತ್ನ ಜತೇದಾರ್ (ಸಿಖ್ಖರ ಅತ್ಯುನ್ನತ ತಾತ್ಕಾಲಿಕ ಸ್ಥಾನ) ಅವರು ಪರಾರಿಯಾದ ಅಮೃತಪಾಲ್ ಸಿಂಗ್ ಅವರನ್ನು ಪೊಲೀಸರ ಮುಂದೆ ಶರಣಾಗುವಂತೆ ಮತ್ತು ತನಿಖೆಗೆ ಸಹಕರಿಸುವಂತೆ ಕೇಳಿಕೊಂಡಿದ್ದಾರೆ. ಆದರೆ ಅಮೃತಪಾಲ್ ಸಿಂಗ್ ಶರಣಾಗಲು ನಿರಾಕರಿಸಿದ್ದಾರೆ. ಜೊತೆಗೆ ತಾವು ಶರಣಾಗುವುದಿಲ್ಲ ಎಂಬ ಹೇಳಿಕೆಯೊಂದಿಗೆ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ.

ಪಂಜಾಬ್ ಸರ್ಕಾರವನ್ನು ಹೈಕೋರ್ಟ್ ತರಾಟೆ
ಕಳೆದ ವಾರ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಪಂಜಾಬ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತು ಮತ್ತು ಅಮೃತಪಾಲ್ ಸಿಂಗ್ ಅವರಿಗೆ ತಪ್ಪಿಸಿಕೊಳ್ಳಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿತ್ತು. "ನಿಮ್ಮಲ್ಲಿ 80,000 ಪೊಲೀಸರಿದ್ದಾರೆ. ಅವರು ಏನು ಮಾಡುತ್ತಿದ್ದರು. ಅಮೃತಪಾಲ್ ಸಿಂಗ್ ಹೇಗೆ ತಪ್ಪಿಸಿಕೊಂಡರು?" ಇದು ಗುಪ್ತಚರ ವೈಫಲ್ಯ ಎಂದು ಪಂಜಾಬ್ ಸರ್ಕಾರವನ್ನು ಹೈಕೋರ್ಟ್ ಪ್ರಶ್ನಿಸಿತು.
ಆದರೂ ಅಮೃತಪಾಲ್ ಸಿಂಗ್ ಅವರನ್ನು ಹಿಡಿಯಲು ನಾವು ನಿರತವಾಗಿದ್ದೇವೆ ಎಂದು ಪಂಜಾಬ್ ಸರ್ಕಾರ ಮಂಗಳವಾರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ಗೆ ತಿಳಿಸಿದೆ.
ಸೋಮವಾರ, ಅಮೃತಪಾಲ್ ಸಿಂಗ್ ಅವರ ಪ್ರಮುಖ ಸಹಾಯಕ ಪಾಪಲ್ಪ್ರೀತ್ ಸಿಂಗ್ ಅವರ ಹೊಸ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಮೂಲಭೂತವಾದಿ ಸಿಖ್ ಬೋಧಕನ ವಿರುದ್ಧ ಪೊಲೀಸ್ ಕಾರ್ಯಾಚರಣೆ ಪ್ರಾರಂಭವಾದ ಒಂದು ದಿನದ ನಂತರ ಚಿತ್ರವನ್ನು ತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಯೋತ್ಪಾದಕ ಗುಂಪುಗಳೊಂದಿಗೆ ಅಮೃತಪಾಲ್ ಸಿಂಗ್ ನಂಟು
ಅಧಿಕೃತ ಮೂಲಗಳ ಪ್ರಕಾರ, ಅಮೃತಪಾಲ್ ಸಿಂಗ್ ಅವರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಮತ್ತು ವಿದೇಶದಲ್ಲಿರುವ ಕೆಲವು ಭಯೋತ್ಪಾದಕ ಗುಂಪುಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಅಮೃತಪಾಲ್ ಸಿಂಗ್ ಯುಕೆ ಮೂಲದ ಖಲಿಸ್ತಾನಿ ಭಯೋತ್ಪಾದಕ ಅವತಾರ್ ಸಿಂಗ್ ಖಾಂಡಾಗೆ ನಿಕಟ ವ್ಯಕ್ತಿ ಎಂದು ನಂಬಲಾಗಿದೆ. ಇವರು ಹಿಂಸಾತ್ಮಕ ಪ್ರತಿಭಟನೆಗಳಿಗೆ ಬಳಸಿಕೊಳ್ಳಲು ಮಾದಕ ವ್ಯಸನ ಕೇಂದ್ರಗಳಿಂದ ಯುವಕರ "ಖಾಸಗಿ ಸೇನಾಪಡೆ"ಯನ್ನು ನಿರ್ಮಿಸುತ್ತಿದ್ದರು.
ಅಮೃತಪಾಲ್ ಸಿಂಗ್ ಮತ್ತು ಅವರ ಸಹಚರರ ಮೇಲೆ ವರ್ಗಗಳ ನಡುವೆ ವೈಮನಸ್ಸು ಹರಡುವುದು, ಕೊಲೆ ಯತ್ನ, ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಮತ್ತು ಸಾರ್ವಜನಿಕ ಸೇವಕರ ಕಾನೂನುಬದ್ಧ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವುದು ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.












Click it and Unblock the Notifications