ಬಾಲಕಿ ಮೇಲೆ ಪ್ರಿನ್ಸಿಪಾಲ್, ಡ್ರೈವರ್ನಿಂದ ಅತ್ಯಾಚಾರ: ಶಾಲೆ ಮಾನ್ಯತೆ ರದ್ದತಿಗೆ ಆದೇಶ
ಹೈದರಾಬಾದ್, ಅ. 21: ಹೈದರಾಬಾದ್ನ ಬಂಜಾರ ಹಿಲ್ಸ್ ಪ್ರದೇಶದಲ್ಲಿ 4 ವರ್ಷದ ಬಾಲಕಿಯ ಮೇಲೆ ಶಾಲಾ ಪ್ರಿನ್ಸಿಪಾಲ್ ಹಾಗೂ ಡ್ರೈವರ್ ಎರಡು ತಿಂಗಳ ಕಾಲ ಅತ್ಯಾಚಾರವೆಸಗಿದ ಆರೋಪ ಕೇಳಿ ಬಂದಿದೆ. ಆರೋಪದ ಬೆನ್ನಲ್ಲೇ ಖಾಸಗಿ ಶಾಲೆಗೆ ನೀಡಿರುವ ಸರ್ಕಾರಿ ಮಾನ್ಯತೆಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಶಿಕ್ಷಣ ಸಚಿವರು ಆದೇಶಿಸಿದ್ದಾರೆ.
ಹೈದರಾಬಾದ್ನ ಖಾಸಗಿ ಶಾಲೆಗೆ ನೀಡಿರುವ ಸರ್ಕಾರಿ ಮಾನ್ಯತೆಯನ್ನು ಕೂಡಲೇ ರದ್ದುಪಡಿಸಬೇಕು ಮತ್ತು ವಿದ್ಯಾರ್ಥಿಗಳಿಗೆ ಬೇರೆ ಶಾಲೆಗಳಲ್ಲಿ ವಸತಿ ಕಲ್ಪಿಸಬೇಕು ಎಂದು ತೆಲಂಗಾಣದ ಶಿಕ್ಷಣ ಸಚಿವೆ ಸಬಿತಾ ಇಂದ್ರಾ ರೆಡ್ಡಿ ಆದೇಶಿಸಿದ್ದಾರೆ.
ಇಂತಹ ಘಟನೆಗಳು ಮರುಕಳಿಸದಂತೆ ಯಾವ ಯಾವ ಭದ್ರತಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ತೆಲಂಗಾಣದ ಶಿಕ್ಷಣ ಕಾರ್ಯದರ್ಶಿ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಸಚಿವೆ ಆದೇಶಿಸಿದ್ದಾರೆ.
ಶಿಕ್ಷಣ ಕಾರ್ಯದರ್ಶಿ ನೇತೃತ್ವದ ಸಮಿತಿಯ ಸದಸ್ಯರಾಗಿ ಶಾಲಾ ಶಿಕ್ಷಣ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮತ್ತು ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆಗೆ (ಪೋಕ್ಸೊ) ವ್ಯವಹರಿಸುವ ಹಿರಿಯ ಅಧಿಕಾರಿಯನ್ನು ಹೊಂದಿರುತ್ತದೆ. ಈ ಸಮಿತಿಯು ವಾರದೊಳಗೆ ವರದಿ ಸಲ್ಲಿಸಬೇಕು.

ಎರಡು ತಿಂಗಳಿಂದ ಪುಟ್ಟ ಕಂದನ ಮೇಲೆ ಲೈಂಗಿಕ ದೌರ್ಜನ್ಯ
ಅತ್ಯಾಚಾರ ಘಟನೆ ಬಹಿರಂಗವಾದ ನಂತರ ಬಂಜಾರಾ ಹಿಲ್ಸ್ನ ಖಾಸಗಿ ಶಾಲೆಯನ್ನು ಮುಚ್ಚಲಾಗಿದೆ. ಎರಡು ತಿಂಗಳಿನಿಂದ ಮಗುವಿನ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಶಾಲಾ ಪ್ರಾಂಶುಪಾಲ ಮತ್ತು ಚಾಲಕನನ್ನು ಬುಧವಾರ ಬಂಧಿಸಲಾಗಿದೆ.
ಲೈಂಗಿಕ ದೌರ್ಜನ್ಯದ ಬಗೆಗಿನ ದೂರನ್ನು ಕಂಡು ಶಾಲೆಯ ಪ್ರಾಂಶುಪಾಲರು ನಕ್ಕು ಸುಮ್ಮನಾಗಿರುವುದು ಮತ್ತು ಅದರ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ ಎಂಬುದು ಬೆಳಕಿಗೆ ಬಂದಿದೆ. ಪೋಷಕರ ಪ್ರತಿಭಟನೆಯ ನಂತರ ಆರೋಪಿಗಳನ್ನು ಬಂಧಿಸಲಾಗಿದೆ.

ಪೊಲೀಸ್ ಠಾಣೆ ಬಳಿ ಪ್ರತಿಭಟನೆ ನಡೆಸಿದ ಬಳಿಕ ಎಫ್ಐಆರ್
ಪುಟ್ಟ ಮಗುವಿನ ವರ್ತನೆಯಲ್ಲಿ ಆದ ಬದಲಾವಣೆಯನ್ನು ಗಮನಿಸಿದ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಬಳಿಕ ಮಗುವಿನ ತಾಯಿ ನಿಧಾನವಾಗಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಶಾಲೆಯೊಳಗೆ ಬರುತ್ತಿದ್ದ ಚಾಲಕನ ಕಡೆಗೆ ಮಗು ಬೊಟ್ಟು ಮಾಡಿ ತೋರಿಸಿದೆ ಎಂದು ವರದಿಯಾಗಿದೆ.
ಇದರಿಂದ ಕೋಪಗೊಂಡ ಪೋಷಕರು ಚಾಲಕನ ಮೇಲೆ ಹಲ್ಲೆ ನಡೆಸಿ ಆತನನ್ನು ಬಂಧಿಸುವಂತೆ ಬಂಜಾರ ಹಿಲ್ಸ್ ಪೊಲೀಸ್ ಠಾಣೆ ಎದುರು ಧರಣಿ ಕುಳಿತಿದ್ದರು. ಪೋಷಕರ ಪ್ರತಿಭಟನೆ ಬಳಿಕ ಎಫ್ಐಆರ್ ದಾಖಲಿಸಲಾಗಿದೆ.

ಶಿಕ್ಷಕರ ಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಚಾಲಕ!
ಈ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿನ ಸಿಸಿಟಿವಿಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ತನಿಖೆಯಲ್ಲಿ ಕಂಡು ಬಂದಿದೆ. ಇದಷ್ಟೆ ಅಲ್ಲದೇ ಚಾಲಕನು ಆಗಾಗ್ಗೆ ಪುಟ್ಟ ಮಕ್ಕಳ ವಿಭಾಗದ ಶಿಕ್ಷಕರ ಕೆಲಸವನ್ನು ಕೂಡ ಮಾಡುತ್ತಿದ್ದದ್ದು ತನಿಖೆಯಲ್ಲಿ ಕಂಡುಬಂದಿದೆ.
ಮಕ್ಕಳ ಸುರಕ್ಷತೆಗೆ ನೀಡಬೇಕಾದ ಪ್ರಾಮುಖ್ಯತೆಯ ಬಗ್ಗೆ ಶಾಲಾ ಆಡಳಿತ ಮಂಡಳಿಗಳಿಗೆ ಖಡಕ್ ಸಂದೇಶ ನೀಡಲು ಸಚಿವರು ನಿರ್ಧರಿಸಿದ್ದಾರೆ. ಶಾಲೆಯನ್ನು ಮುಚ್ಚಿ ಮಕ್ಕಳನ್ನು ಸ್ಥಳಾಂತರಿಸುವ ಆದೇಶವು ಪೋಷಕರು ಮತ್ತು ಸರ್ಕಾರಿ ಅಧಿಕಾರಿಗಳಲ್ಲಿ ಸಾಕಷ್ಟು ಆತಂಕವನ್ನು ಉಂಟುಮಾಡಿದೆ.
ಶಾಲೆಯಲ್ಲಿ ಪ್ರಸ್ತುತ 700 ವಿದ್ಯಾರ್ಥಿಗಳು ಓದುತ್ತಿದ್ದು, ಅವರಿಗೆ ಬೇರೆ ಶಾಲೆಗಳಲ್ಲಿ ಸೀಟು ಹುಡುಕುವುದು ಅದು ಕೂಡ ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ. ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಲಿದೆ.

ಶಾಲೆ ಮಾನ್ಯತೆ ರದ್ದುಗೊಳಿಸುವುದು ಪ್ರಾಯೋಗಿಕವಲ್ಲ!
ವಿದ್ಯಾರ್ಥಿಗಳು ಮತ್ತು ಪೋಷಕರ ಎಲ್ಲಾ ಸಮಸ್ಯೆಗಳನ್ನು ಜಿಲ್ಲಾ ಶಿಕ್ಷಣಾಧಿಕಾರಿಗಳು ಪರಿಹರಿಸುವುದಾಗಿ ಸಚಿವರು ಹೇಳಿದ್ದಾರೆ. ಆದರೆ ಶಾಲೆಯನ್ನು ಮುಚ್ಚಿ ಬೇರೆಡೆಗೆ ಸ್ಥಳಾಂತರಿಸುವುದು ಪ್ರಾಯೋಗಿಕ ಆಯ್ಕೆಯಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸುನೀತಾ ಕೃಷ್ಣನ್ ಅವರು ಲೈಂಗಿಕ ಅಪರಾಧಿಗಳ ಸಾರ್ವಜನಿಕ ನೋಂದಣಿಯ ಅಗತ್ಯತೆಯ ಬಗ್ಗೆ ವರ್ಷಗಳಿಂದ ಪ್ರತಿಪಾದಿಸುತ್ತಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ತಮ್ಮ ಬೇಡಿಕೆಯನ್ನು ಮತ್ತೊಮ್ಮೆ ಮುಂದಿಟ್ಟಿದ್ದಾರೆ. ಶಾಲೆಗಳು ಮತ್ತು ಇತರ ಸಂಸ್ಥೆಗಳಲ್ಲಿ ನೇಮಕಾತಿಗಳನ್ನು ಮಾಡುವಾಗ ಡೇಟಾಬೇಸ್ ಅನ್ನು ಬಳಸಬೇಕು ಎಂದು ಅವರು ಹೇಳುತ್ತಿದ್ದಾರೆ.
ತೆಲಂಗಾಣ ಸಚಿವ ಕೆಟಿ ರಾಮರಾವ್ ಅವರು ಸುನೀತಾ ಕೃಷ್ಣನ್ ಅವರ ಟ್ವೀಟ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ಈ ವಿಷಯದ ಬಗ್ಗೆ ತ್ವರಿತವಾಗಿ ಕಾರ್ಯನಿರ್ವಹಿಸಲು ಸರ್ಕಾರಕ್ಕೂ ಆಸಕ್ತಿಯಿದೆ ಎಂದು ಹೇಳಿದ್ದಾರೆ.












Click it and Unblock the Notifications