Smile Designing Surgery: ಹಲ್ಲು ಚಂದ ಕಾಣಿಸಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ!
ಹೈದರಾಬಾದ್ ಫೆಬ್ರವರಿ 20: ಚಂದ ಕಾಣಿಸಬೇಕು ಅನ್ನೋ ಆಸೆ ಯಾರಿಗೆ ತಾನೆ ಇರೋದಿಲ್ಲ ಹೇಳಿ. ಭೂಮಿ ಮೇಲೆ ಇರುವ ಪ್ರತಿಯೊಬ್ಬ ಮನುಷ್ಯನಿಗೂ ಚಂದವಾಗಿ ಕಾಣಬೇಕು ಅನ್ನೋ ಆಸೆ ಇರುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಹಲ್ಲು ಚಂದಕಾಣಿಸಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಹೌದು... ಹೈದರಾಬಾದಿನ ದಂತ ಚಿಕಿತ್ಸಾಲಯದಲ್ಲಿ 28 ವರ್ಷದ ಯುವಕನೊಬ್ಬ ಸ್ಮೈಲ್ ಡಿಸೈನಿಂಗ್ ಶಸ್ತ್ರಚಿಕಿತ್ಸೆಯ (Smile Designing Surgery) ಸಮಯದಲ್ಲಿ ಸಾವನ್ನಪ್ಪಿದ್ದಾನೆ. ಲಕ್ಷ್ಮಿ ನಾರಾಯಣ ಮೃತ ದುರ್ದೈವಿ. ಫೆಬ್ರವರಿ 16 ರಂದು ಈ ಘಟನೆ ಸಂಭವಿಸಿದೆ. ಅನಸ್ತೇಷಿಯಾ ಮಿತಿಮೀರಿದ ಸೇವನೆಯಿಂದ ಲಕ್ಷ್ಮಿ ನಾರಾಯಣ ನಿಧನರಾಗಿದ್ದಾರೆ.

ತಮ್ಮ ಮದುವೆಗೆ ತಾವು ಚಂದ ಕಾಣಿಸಬೇಕು ಎಂದು ಮದುವೆಗೆ ಮುಂಚಿತವಾಗಿ ತನ್ನ ನಗುವಿನ ಸೌಂದರ್ಯ ಹೆಚ್ಚಿಸಲು ಅವರು ಯೋಚಿಸಿದ್ದಾರೆ. ಇದಕ್ಕಾಗಿ ದಂತ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ್ದಾರೆ. ಹಲ್ಲಿನ ಸೌಂದರ್ಯ ಹೆಚ್ಚಳಕ್ಕೆ ಸ್ಮೈಲ್ ಡಿಸೈನಿಂಗ್ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ.
ಸ್ಮೈಲ್ ಡಿಸೈನಿಂಗ್ ಶಸ್ತ್ರಚಿಕಿತ್ಸೆ ವೇಳೆ ಲಕ್ಷ್ಮಿ ನಾರಾಯಣ ಒಬ್ಬರೇ ಕ್ಲಿನಿಕ್ಗೆ ಹೋಗಿದ್ದರು. ಸ್ಮೈಲ್ ಡಿಸೈನಿಂಗ್ ಶಸ್ತ್ರಚಿಕಿತ್ಸೆ ಮಾಡಿಸುವ ಅದೇ ದಿನ ಸಂಜೆ ತಂದೆ ವಿಂಜಂ ರಾಮುಲು ಅವರು ಲಕ್ಷ್ಮಿ ನಾರಾಯಣ ಫೋನ್ಗೆ ಕರೆ ಮಾಡಿದ್ದಾರೆ. ಆಗ ಕರೆಯನ್ನು ಕ್ಲಿನಿಕ್ ಸಿಬ್ಬಂದಿ ಸ್ವೀಕರಿಸಿದ್ದಾರೆ.
ಸಿಬ್ಬಂದಿ ನಿಮ್ಮ ಮಗ ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ ಎಂದು ನಾರಾಯಣ್ ಅವರ ತಂದೆಗೆ ತಿಳಿಸಿದ್ದಾರೆ. ತಕ್ಷಣ ನಾರಾಯಣ್ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ತಲುಪುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು ಎಂದು ಅವರ ಕುಟುಂಬದವರು ಹೇಳಿದ್ದಾರೆ.
ಕುಟುಂಬ ದಂತ ಚಿಕಿತ್ಸಾಲಯದ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 ಎ ಅಡಿಯಲ್ಲಿ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ದೂರು ದಾಖಲಿಸಿದೆ. ಶಶ್ತ್ರಚಿಕಿತ್ಸೆಯ ಸಮಯದಲ್ಲಿ ನಾರಾಯಣ್ ಅವರಿಗೆ ಹೆಚ್ಚಿನ ಪ್ರಮಾಣದಲ್ಲಿ ಅರಿವಳಿಕೆ ನೀಡಲಾಗಿತ್ತು. ಇದು ಅವರ ಸಾವಿಗೆ ಕಾರಣವಾಯಿತು ಎಂದು ಕುಟುಂಬದವರು ದೂರಿನಲ್ಲಿ ಆರೋಪಿಸಿದ್ದಾರೆ. ಪೊಲೀಸರು ಕ್ಲಿನಿಕ್ನಿಂದ ಸಿಸಿಟಿವಿ ಪುರಾವೆಗಳನ್ನು ಸಂಗ್ರಹಿಸಿದ್ದು, ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications