ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆಯಲ್ಲಿ ತೇರು ಧರೆಗುರುಳಿ ಇಬ್ಬರು ಸಾವು, ಮತ್ತಿಬ್ಬರಿಗೆ ಗಂಭೀರ ಗಾಯ
ತೇರು ಧರೆಗುರುಳಿ ಇಬ್ಬರು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆಯಲ್ಲಿ ನಡೆದಿದೆ. ತೇರಿನ ಕೆಳಗೆ ಸಿಲುಕಿ ನಾಲ್ವರು ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ತಮಿಳುನಾಡಿನ ಹೊಸೂರು ಮೂಲದ ಲೋಹಿತ್(24), ಕೆಂಗೇರಿ ಮೂಲದ ಜ್ಯೋತಿ(14) ಎಂಬುವವರು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.ಇತಿಹಾಸ ಪ್ರಸಿದ್ಧ ಹುಸ್ಕೂರು ಮದ್ದೂರಮ್ಮ ಜಾತ್ರೆ ನೋಡಲು ಬಂದಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಸಂಜೆ ದೇವಾಲಯದ ಬಳಿ ರಾಯಸಂದ್ರ ತೇರನ್ನು ನಿಲ್ಲಿಸಲಾಗಿತ್ತು. ಬಿರುಗಾಳಿ ಮಳೆ ಸುರಿದ ಹಿನ್ನೆಲೆ ನಿಯಂತ್ರಣಕ್ಕೆ ಸಿಗದೆ ತೇರು ಧರೆಗೆ ಉರುಳಿದೆ. ಈ ವೇಳೆ ನಾಲ್ವರು ತೇರಿನ ಕೆಳಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ, ಲೋಹಿತ್ ಮತ್ತು ಜ್ಯೋತಿ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನು ರಾಯಸಂದ್ರ ಗ್ರಾಮದ ರಾಕೇಶ್ ಮತ್ತು ಮತ್ತೋರ್ವ ಮಹಿಳೆಗೆ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಸಾವನ್ನಪ್ಪಿದ ಜ್ಯೋತಿ ಎಂಬುವವರು ಕುಟುಂಬದವರ ಜೊತೆ ಜಾತ್ರೆಯಲ್ಲಿ ಸಮೋಸ ಮಾರಲು ಬಂದಿದ್ದರು ಎಂದು ತಿಳಿದುಬಂದಿದೆ. ಸದ್ಯ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
ಘಟನೆಯಲ್ಲು ಸಾವನ್ನಪ್ಪಿದ 24 ವರ್ಷದ ಈ ಲೋಹಿತ್ ತಮಿಳುನಾಡಿನ ಹೊಸೂರು ಮೂಲದವರು. ಇನ್ಸ್ಟಾಗ್ರಾಮ್ ವಿಡಿಯೋ ನೋಡಿ ಹುಸ್ಕೂರು ಜಾತ್ರೆಗೆ ಬಂದಿದ್ದರು. ಇತ್ತೀಚೆಗಷ್ಟೇ ಲೋಹಿತ್ ಎಂಜಿನಿಯರಿಂಗ್ ಮುಗಿಸಿದ್ದು, ವೈಟ್ ಫೀಲ್ಡ್ನ ಸಾಫ್ಟ್ವೇರ್ ಕಂಪನಿಯಲ್ಲಿ ಟ್ರೈನಿ ಆಗಿ ಕೆಲಸ ಮಾಡ್ತಿದ್ದ. ಆರು ತಿಂಗಳು ಕಳೆದಿದ್ದರೆ ಕೆಲಸ ಕನ್ಫರ್ಮ್ ಆಗುತ್ತಿತ್ತು. ಮನೆ ಮತ್ತು ತಂಗಿ ವಿದ್ಯಾಭ್ಯಾಸಕ್ಕೆ ಹಣ ನೀಡುತ್ತಿದ್ದ ಲೋಹಿತ್ ಕುಟುಂಬಕ್ಕೆ ಆಧಾರ ಸ್ತಂಬ ಆಗಿದ್ದ.
ಮಕ್ಕಳನ್ನ ನೆನೆದು ಕುಟುಂಬಸ್ಥರು ಕಣ್ಣೀರು ಇಡುತ್ತಿದ್ದಾರೆ. ಸರ್ಕಾರ ಮುಂಜಾಗ್ರತಾ ಕ್ರಮ ವಹಿಸಬೇಕಿತ್ತು. ಸರ್ಕಾರ ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮೃತ ಲೋಹಿತ್ ತಂದೆ ಷಣ್ಮುಖ ಮನವಿ ಮಾಡಿದ್ದಾರೆ.
ಕೆಂಗೇರಿಯಿಂದ ಗೊಂಬೆಗಳ ಮಾರಾಟಕ್ಕಾಗಿ ಜ್ಯೋತಿ ಕುಟುಂಬ ಹುಸ್ಕೂರಿನ ಆಗಮಿಸಿತ್ತು. ಜ್ಯೋತಿ ಒಬ್ಬಳೇ ಮನೆಯಲ್ಲಿರಬೇಕು ಅಂತ ತಂದೆ ಜೊತೆಯಲ್ಲೇ ಕರೆ ತಂದಿದ್ದರು. ಕೆಂಗೇರಿ ಸರ್ಕಾರಿ ಶಾಲೆಯಲ್ಲಿ ಜ್ಯೋತಿ 6ನೇ ತರಗತಿ ಓದುತ್ತಿದ್ದಳು. ಮದ್ದೂರಮ್ಮ ಜಾತ್ರೆಯಲ್ಲಿ ಮಳೆ ಬಂದಿದ್ರಿಂದ ಜ್ಯೋತಿ ಗೊಂಬೆಗಳನ್ನ ಬೇರೆಡೆ ಇಡಲು ಹೋಗಿದ್ದಳು. ಜ್ಯೋತಿ, ಆಕೆಯ ಸ್ನೇಹಿತೆ ಪಾನಿಪೂರಿ ಅಂಗಡಿ ಹತ್ತಿರ ನಿಂತಿದ್ದ. ಈ ವೇಳೆ ಜ್ಯೋತಿ ಹಾಗೂ ಆಕೆ ಸ್ನೇಹಿತೆ ಮೇಲೆ ತೇರು ಉರುಳಿ ಬಿದ್ದಿದ್ದು, ಜ್ಯೋತಿ ಸಾವನ್ನಪ್ಪಿದ್ದಾಳೆ.












Click it and Unblock the Notifications