ಗಂಡ ಹೆಂಡತಿಯ ಯಜಮಾನನಲ್ಲ : ಐಪಿಸಿ ಸೆಕ್ಷನ್ 497 ಕಸದಬುಟ್ಟಿಗೆ
Recommended Video

ನವದೆಹಲಿ, ಸೆಪ್ಟೆಂಬರ್ 27 : ಎರಡೂ ಕೈ ಹೊಡೆದರೆ ಮಾತ್ರ ಚಪ್ಪಾಳೆ ಅಲ್ಲವೆ? ತಪ್ಪು ಇಬ್ಬರಲ್ಲೂ ಇದ್ದಾಗ, ಒಬ್ಬರನ್ನೇ ಶಿಕ್ಷಿಸುವುದು ಕಾನೂನಿಗೆ ವಿರುದ್ಧವಾದದ್ದು. ಇಲ್ಲಿ ಗಂಡ ಹೆಂಡತಿಯ ಯಜಮಾನನೂ ಅಲ್ಲ, ಹೆಂಡತಿ ಗಂಡನ ಗುಲಾಮಳೂ ಅಲ್ಲ.
ಅನೈತಿಕ ಸಂಬಂಧ ಅಥವಾ ವ್ಯಭಿಚಾರವನ್ನು ಅಪರಾಧವೆಂದು ಪರಿಗಣಿಸಿ 158 ವರ್ಷಗಳ ಹಿಂದೆ ಬ್ರಿಟಿಷರ ಕಾಲದಲ್ಲಿ ರೂಪಿಸಲಾಗಿದ್ದ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 497 ಅನ್ನು ಅಸಾಂವಿಧಾನಿಕ ಎಂದು ಸರ್ವಾನುಮತದಿಂದ ಸಾರಿ ಸರ್ವೋಚ್ಚ ನ್ಯಾಯಾಲಯ ಗುರುವಾರ ಮಹತ್ವದ ತೀರ್ಪು ನೀಡಿದೆ.
ಸಂಸಾರದಲ್ಲಿನ ಅನೈತಿಕ ಸಂಬಂಧದಿಂದಾಗಿ ಅತಿಹೆಚ್ಚು ಅನಾಚಾರಕ್ಕೆ, ದಮನಕ್ಕೆ, ಅನ್ಯಾಯಕ್ಕೆ ಒಳಗಾಗುತ್ತಿದ್ದುದೇ ಮಹಿಳೆ. ಗಂಡ ಏನು ಮಾಡಿದರೂ ತಪ್ಪಿಸಿಕೊಳ್ಳುತ್ತಿದ್ದ. ಈಗ ಕಾನೂನಿನ ಅಡಿಯಲ್ಲಿ ಗಂಡ ಹೆಂಡತಿಯರಿಬ್ಬರೂ ಸಮಾನರು ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ.
"ವೈಯಕ್ತಿಕ ಘನತೆಗೆ ಮತ್ತು ಮಹಿಳೆಯ ಸಮಾನತೆಗೆ ಧಕ್ಕೆ ತಂದರೆ ಸಂವಿಧಾನ ಮಧ್ಯ ಪ್ರವೇಶಿಸಲೇಬೇಕಾಗುತ್ತದೆ. ಗಂಡ ಹೆಂಡತಿಯ ಯಜಮಾನನಲ್ಲ ಎಂದು ಸಾರಿಸಾರಿ ಹೇಳುವ ಸಮಯ ಬಂದಿದೆ. ಗಂಡ ಮತ್ತು ಹೆಂಡತಿಯ ನಡುವೆ ಲಿಂಗ ತಾರತಮ್ಯ ಮಾಡುವುದು ಕಾನೂನಿನ ಸಾರ್ವಭೌಮತ್ವಕ್ಕೆ ವಿರುದ್ಧವಾದದ್ದು" ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಮತ್ತು ಇತರ ನಾಲ್ವರು ನ್ಯಾಯಮೂರ್ತಿಗಳು ಷರಾ ಬರೆದಿದ್ದಾರೆ.

ನಿವೃತ್ತಿಗೂ ಮುನ್ನ ಸಿಜೆಐಯಿಂದ ಮಹತ್ವದ ತೀರ್ಪು
ಅಕ್ಟೋಬರ್ 2ರಂದು ಗಾಂಧಿ ಜಯಂತಿಯಂದು ನಿವೃತ್ತರಾಗುತ್ತಿರುವ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ. ಚಂದ್ರಚೂಡ್, ನ್ಯಾ. ನಾರಿಮನ್, ನ್ಯಾ. ಖಾನ್ವಿಲ್ಕರ್ ಅವರ ಅಭಿಪ್ರಾಯಕ್ಕೆ ದನಿಗೂಡಿಸಿದ ವಿಭಾಗೀಯ ಪೀಠದಲ್ಲಿನ ಏಕೈಕ ಮಹಿಳಾ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಕೂಡ ವ್ಯಭಿಚಾರ ಅಪರಾಧವಲ್ಲ ಎಂಬ ತೀರ್ಪು ನೀಡಿದ್ದಾರೆ. ಮಹಿಳೆಯ ದನಿಗೆ, ಸ್ವಾಯತ್ತತೆಗೆ ವಿರುದ್ಧವಾಗಿದ್ದ ಈ ಕಾನೂನಿಗೆ ವಿರುದ್ಧವಾಗಿ ನೀಡಲಾಗಿರುವ ಈ ತೀರ್ಪಿಗೆ ಎಲ್ಲೆಡೆಯಿಂದ ಭಾರೀ ಹರೋಷೋದ್ಘಾರಗಳು ಕೇಳಿಬರುತ್ತಿವೆ.

ಐಪಿಸಿ ಸೆಕ್ಷನ್ 497 ಏನು ಹೇಳುತ್ತದೆ?
ಅಷ್ಟಕ್ಕೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 497 ಹೇಳುವುದೇನು? "ಯಾವುದೇ ವ್ಯಕ್ತಿ (ಪುರುಷ) ಮತ್ತೊಬ್ಬ ಪುರುಷನ ಹೆಂಡತಿಯೊಂದಿಗೆ ಅನುಮತಿಯಿಲ್ಲದೆ ಲೈಂಗಿಕ ಸಂಬಂಧ ಬೆಳೆಸಿದ್ದರೆ ಅಥವಾ ಅದು ಅತ್ಯಾಚಾರವಾಗದಿದ್ದರೆ ಅದನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ. ಇದಕ್ಕೆ 5 ವರ್ಷಗಳ ವರೆಗೆ ಜೈಲು ಶಿಕ್ಷೆಯನ್ನು ಮತ್ತು ದಂಡವನ್ನು ವಿಧಿಸಬಹುದು. ಅಪರಾಧದಲ್ಲಿ ವ್ಯಭಿಚಾರದಲ್ಲಿ ಪಾಲ್ಗೊಂಡಿದ್ದ ಮಹಿಳೆಯನ್ನು ಶಿಕ್ಷಿಸುವಂತಿಲ್ಲ."

ಇದೆಂಥಾ ಕಾನೂನು ಎಂದ ಸರ್ವೋಚ್ಚ ನ್ಯಾಯಾಲಯ
ಐಪಿಸಿ ಸೆಕ್ಷನ್ 497 ಅಡಿಯಲ್ಲಿ ಪರಸ್ತ್ರೀಯೊಂದಿಗೆ ವ್ಯಭಿಚಾರ ನಡೆಸುವ ಗಂಡನಿಗೆ ಶಿಕ್ಷೆ ನೀಡಲಾಗುತ್ತಿತ್ತು. ಆದರೆ, ಪರಪುರುಷನ ಅನುಮತಿಯೊಂದಿಗೆ ಆ ಪುರುಷನ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ್ದರೆ ಅದು ಅಪರಾಧದಿಂದ ಹೊರತಾಗುತ್ತಿತ್ತು. ಅಲ್ಲದೆ, ವ್ಯಭಿಚಾರಕ್ಕೆ ಉತ್ತೇಜನ ನೀಡಿದ್ದಾಳೆ ಎಂದು ಆ ಪರಸ್ತ್ರೀ ಅಥವಾ ವ್ಯಭಿಚಾರದಲ್ಲಿ ಪಾಲ್ಗೊಂಡ ಆ ಮಹಿಳೆಯ ಮೇಲೆ ಯಾವುದೇ ಕ್ರಮವನ್ನು ಕೈಗೊಳ್ಳುವ ಹಾಗಿರಲಿಲ್ಲ. ಈಗ ಇದೇ ಸೆಕ್ಷನ್ ಅನ್ನು ಅಸಾಂವಿಧಾನಿಕ ಎಂದು ಪರಿಗಣಿಸಲಾಗಿದೆ.

ಖಡಾಖಂಡಿತವಾಗಿ ಅಲ್ಲಗಳೆದ ಸುಪ್ರೀಂ ಕೋರ್ಟ್
ಈ ಪ್ರಕರಣದಲ್ಲಿ ಅರ್ಜಿ ಹಾಕಿದವರು, ವ್ಯಭಿಚಾರದಲ್ಲಿ ಅಥವಾ ಅನೈತಿಕ ಸಂಬಂಧದಲ್ಲಿ ತೊಡಗಿದ ಪುರುಷನ ಮೇಲೆ ಮಾತ್ರ ಏಕೆ ಕಾನೂನು ಕ್ರಮ ಜರುಗಿಸಬೇಕು? ಮಹಿಳೆಯ ಮೇಲೂ ಕ್ರಮ ಜರುಗಿಸಬೇಕು ಎಂದು ಕೋರಲಾಗಿತ್ತು. ಆದರೆ, ಇನ್ನು ಖಡಾಖಂಡಿತವಾಗಿ ಅಲ್ಲಗಳೆದಿರುವ ಸರ್ವೋಚ್ಚ ನ್ಯಾಯಾಲಯ, ಮೊದಲಿನಿಂದಲೂ ಮಹಿಳೆಯನ್ನು ದಬ್ಬಾಳಿಕೆಗೆ ತಳ್ಳಲಾಗುತ್ತಿದೆ, ಸ್ವಾಯತ್ತತೆಯನ್ನು ದಮನಿಸಲಾಗುತ್ತಿದೆ, ಸಮಾಜ ಹೇಳಿದಂತೆ ಆಕೆ ಕೇಳಬೇಕು ಎಂದು ಒತ್ತಾಯಿಸಲಾಗುತ್ತಿದೆ, ಇದರಿಂದ ಮಹಿಳೆಯ ಘನತೆಗೆ ಧಕ್ಕೆಯಾಗುತ್ತಿದೆ. ಹೀಗಾಗಿ ಈ ಕಾನೂನೇ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಆತ್ಮಹತ್ಯೆಗೆ ಪ್ರೇರೇಪಿಸಿದರೆ ಶಿಕ್ಷೆ ಖಂಡಿತ
ಈ ಐತಿಹಾಸಿಕ ತೀರ್ಪಿನಲ್ಲಿ ಮತ್ತೊಂದು ಮಹತ್ವದ ಅಂಶವನ್ನು ನ್ಯಾಯಾಲಯ ಹೈಲೈಟ್ ಮಾಡಿದೆ. ಅದೇನೆಂದರೆ, ವ್ಯಭಿಚಾರ ಅಪರಾಧವೆಂದು ಪರಿಗಣಿಸಲಾಗದಿದ್ದರೂ, ಈ ಅನೈತಿಕ ಸಂಬಂಧದಿಂದ ಗಂಡ ಹೆಂಡತಿಯ ನಡುವಿನ ಸಂಬಂಧವೇ ಹಳಸಿಹೋಗಿ, ತುಳಿತಕ್ಕೊಳಗಾದ ವ್ಯಕ್ತಿ ಗಂಡನೇ ಆಗಿರಬಹುದು ಹೆಂಡತಿಯೇ ಆಗಿರಬಹುದು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮತ್ತೊಬ್ಬ ವ್ಯಕ್ತಿ ಪ್ರೇರೇಪಿಸಿದರೆ ಅಥವಾ ಕಾರಣವಾದರೆ ಅದು ಖಂಡಿತ ಅಪರಾಧವಾಗುತ್ತದೆ. ಐಪಿಸಿಯ ಸೆಕ್ಷನ್ 306ರ ಅಡಿಯಲ್ಲಿ ಅಂತಹ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು. ಐಪಿಸಿ ಸೆಕ್ಷನ್ 497 ಹೊಡೆದುಹಾಕಿದ್ದರಿಂದ ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್ ಪಿಸಿ)ಯ198(2) ಕೂಡ ಅಸಾಂವಿಧಾನಿಕವಾಗಿದೆ.

ದಾಂಪತ್ಯ ನಿಷ್ಠೆ ಕಾಪಾಡಿದಂತಾಗುತ್ತದೆಯೆ?
ಸೆಕ್ಷನ್ 497 ಮದುವೆಯ ಪಾವಿತ್ರ್ಯತೆಯನ್ನು ಕಾಪಾಡುತ್ತದೆ ಎಂಬುದು ಅರ್ಜಿದಾರನ ವಾದವಾಗಿತ್ತು. ಆದರೆ, ನ್ಯಾಯಮೂರ್ತಿಗಳು ಹೇಳಿದ್ದೇನೆಂದರೆ, ಒಂದು ವೇಳೆ ಗಂಡ ತನ್ನ ಮದುವೆಯಿಂದ ಆಚೆಗೆ ಮದುವೆಯಾಗದ ಪರಸ್ತ್ರೀಯೊಂದಿಗೆ ವ್ಯಭಿಚಾರ ನಡೆಸಿದರೆ ಅಥವಾ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರೆ ಇದರಿಂದ ಮದುವೆಯ ಪಾವಿತ್ರ್ಯತೆಗೆ ಧಕ್ಕೆ ಬರುವುದಿಲ್ಲವೆ? ಏಕಾಂಗಿ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರೆ ಗಂಡ ದಾಂಪತ್ಯ ನಿಷ್ಠೆ ಕಾಪಾಡಿದಂತಾಗುತ್ತದೆಯೆ? ಎಂದು ನ್ಯಾಯಮೂರ್ತಿ ಚಂದ್ರಚೂಡ್ ಅವರು ಪ್ರಶ್ನಿಸಿದ್ದಾರೆ.

ಕುಲಗೆಟ್ಟು ಹೋದ ಕಾನೂನೇ ಬೇಡ
ಎಲ್ಲಕ್ಕಿಂತ ಪ್ರಮುಖವಾಗಿ, ಅನೈತಿಕ ಸಂಬಂಧ ಇಟ್ಟುಕೊಂಡಿದ್ದಂಥ ವ್ಯಕ್ತಿ (ಗಂಡ), ಮತ್ತೊಬ್ಬ ಪುರುಷನ ಅನುಮತಿಯೊಂದಿಗೆ ಆತನ ಹೆಂಡತಿಯೊಂದಿಗೆ ವ್ಯಭಿಚಾರ ನಡೆಸುವುದು ಹೇಗೆ ಕಾನೂನಿಗೆ ಮಾನ್ಯವಾಗುತ್ತದೆ? ಪರಸ್ತ್ರೀಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡ ಮೊದಲನೇ ವ್ಯಕ್ತಿ (ಗಂಡ) ಮತ್ತೊಬ್ಬ ಪುರುಷನೊಂದಿಗೆ ತನ್ನ ಹೆಂಡತಿಯನ್ನೇ ವ್ಯಭಿಚಾರಕ್ಕೆ ಇಳಿಯಲು ಪುಸಲಾಯಿಸಿದರೆ ಅದು ಕೂಡ ಹೇಗೆ ಮಾನ್ಯವಾಗುತ್ತದೆ? ಎಂದು ನ್ಯಾಯಮೂರ್ತಿ ಚಂದ್ರಚೂಡ್ ಅವರು ಖಾರವಾಗಿ ಪ್ರಶ್ನಿಸಿದ್ದಾರೆ. ಈ ವಾದ ಸರಣಿಯ ಪರಿಣಾಮವಾಗಿ, ಈ ಕುಲಗೆಟ್ಟು ಹೋದ ಕಾನೂನೇ ಬೇಡವೆಂದು, ನ್ಯಾಯಮೂರ್ತಿಗಳು ಸರ್ವಾನುಮತದಿಂದ ವ್ಯಭಿಚಾರ ಅಪರಾಧವಲ್ಲ ಎಂದು ತೀರ್ಪು ನೀಡಿದ್ದಾರೆ.

ಪರಸ್ತ್ರೀಯ ಗಂಡನೇ ದೂರು ನೀಡಬೇಕಿತ್ತು
ಕ್ರಿಮಿನಲ್ ಪ್ರೊಸೀಜರ್ ಕೋಡ್ ಪ್ರಕಾರ, ಐಪಿಸಿ ಸೆಕ್ಷನ್ 497ರ ಅಡಿಯಲ್ಲಿ ವ್ಯಭಿಚಾರದಲ್ಲಿ ತೊಡಗಿದ ಗಂಡನ ವಿರುದ್ಧ ಮಾತ್ರ ಕ್ರಮ ಜರುಗಿಸಲು ಅವಕಾಶವಿತ್ತು ಮತ್ತು ವ್ಯಭಿಚಾರದಲ್ಲಿ ತೊಡಗಿದ ಗಂಡ ದೂರು ನೀಡಿದರೆ ಮಾತ್ರ ಸಾಧ್ಯವಿತ್ತು. ಆದರೆ, ವ್ಯಭಿಚಾರದಲ್ಲಿ ತೊಡಗಿದ ಗಂಡನ ಹೆಂಡತಿ ದೂರು ನೀಡುವಂತಿರಲಿಲ್ಲ. ಗಂಡನ ಚೆಲ್ಲಾಟ, ಹೆಂಡತಿಗೆ ಪ್ರಾಣ ಸಂಕಟ, ಅಲ್ಲದೆ, ವ್ಯಭಿಚಾರಕ್ಕೆ ಅನುವು ಮಾಡಿಕೊಟ್ಟ ಮಹಿಳೆಯ ಗಂಡನಿಗೂ ಯಾವುದೇ ಶಿಕ್ಷೆಯಿಲ್ಲ. ಇದೆಂಥ ಕಾನೂನು ಎಂತು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications