ಡಿಜಿಟಲ್ ಪೇಮೆಂಟ್ ಮಾಡಿ, 1 ಕೋಟಿ ಜಾಕ್ ಪಾಟ್ ಗೆಲ್ಲಿರಿ
ಡಿಜಿಟಲ್ ಪೇಮೆಂಟ್ ಮಾಡಿ, ಮಾಡಿ ಎಂದು ಕೇಂದ್ರ ಸರಕಾರಕ್ಕೂ ಹೇಳಿ ಹೇಳಿ ರೋಸಿದಂತಾಗಿ, ಡಿಜಿಟಲ್ ಪೇಮೆಂಟ್ ಮಾಡಿ, ಪ್ರೈಜ್ ಗೆಲ್ಲಿ ಎಂದು ಯೋಜನೆಯೊಂದನ್ನು ಬಿಟ್ಟಿದೆ. ಇನ್ನೇಕೆ ತಡ, ಶುರು ಮಾಡಿ ಡಿಜಿಟಲ್ ಪೇಮೆಂಟ್. ಅದಕ್ಕೂ ಮುಂಚೆ ಈ ವರದಿ ಓದಿ.
ನವದೆಹಲಿ, ಡಿಸೆಂಬರ್ 15: ಡಿಜಿಟಲ್ ವ್ಯವಹಾರಗಳನ್ನು ಉತ್ತೇಜಿಸಬೇಕು ಎಂಬ ಉದ್ದೇಶದಿಂದ ನೀತಿ ಆಯೋಗವು ಬಹುಮಾನಗಳನ್ನು ನೀಡಲು ನಿರ್ಧರಿಸಿದೆ. ಲಕ್ಕಿ ಡ್ರಾ ಮೂಲಕ ವಿಜೇತರನ್ನು ಆರಿಸಲಾಗುತ್ತದೆ. 'ಲಕ್ಕಿ ಗ್ರಾಹಕ್ ಯೋಜನಾ ಮತ್ತು ಡಿಜಿ-ಧನ್ ವ್ಯಾಪಾರಿ ಯೋಜನಾ' ಎಂಬುದನ್ನು ಪರಿಚಯಿಸಲು ನಿರ್ಧರಿಸಿದೆ ಆಯೋಗ. ಏನಿದು ಯೋಜನೆ ಅನ್ನೋದು ಗೊತ್ತಾಯಿತಾ?
ಈ ಯೋಜನೆಗೆ ಅಂದಾಜು ಮಾಡಿ ನಿರೀಕ್ಷಿಸಿರುವ ವೆಚ್ಚ 340 ಕೋಟಿ ರುಪಾಯಿ. ದೈನಂದಿನ, ಸಾಪ್ತಾಹಿಕ ಹಾಗೂ ಮೆಗಾ ಬಹುಮಾನಗಳು ಈ ಯೋಜನೆಯಲ್ಲಿವೆ. ಮೆಗಾ ಬಹುಮಾನವನ್ನು ಮುಂದಿನ ವರ್ಷ ಏಪ್ರಿಲ್ 14ಕ್ಕೆ ಘೋಷಿಸಲಾಗುತ್ತದೆ. ಲಕ್ಕಿ ಗ್ರಾಹಕ್ ಯೋಜನಾದಲ್ಲಿ ಇರುವ ಮೆಗಾ ಬಹುಮಾನದ ಮೊತ್ತ 1 ಕೋಟಿ, 50 ಲಕ್ಷ ಹಾಗೂ 25 ಲಕ್ಷ ರುಪಾಯಿ ಗ್ರಾಹಕರಿಗೆ ಮೀಸಲು.[ನಗದು ಬದಲು ಕಾರ್ಡ್ ಬಳಸುವವರಿಗೆ ಭರ್ಜರಿ ರಿಯಾಯಿತಿ]

ಅದೇ ರೀತಿ 50 ಲಕ್ಷ, 25 ಲಕ್ಷ ಹಾಗೂ 5 ಲಕ್ಷದ ಬಹುಮಾನ ವ್ಯಾಪಾರಿಗಳಿಗೆ ಅಂತಲೇ ನಿಗದಿ ಮಾಡಲಾಗಿದೆ. ನೀತಿ ಆಯೋಗದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೇಳಿರುವ ಪ್ರಕಾರ, ಮುಂದಿನ ನೂರು ದಿನಗಳ ಕಾಲ ದಿನಕ್ಕೆ ಒಂದು ಸಾವಿರದಂತೆ ಹದಿನೈದು ಸಾವಿರ ಮಂದಿಗೆ ಬಹುಮಾನ ಕೊಡಲಾಗುತ್ತೆ. ಅದು ಡಿಸೆಂಬರ್ 25ರಿಂದ ಆರಂಭವಾಗುತ್ತದೆ.
ಅಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾದ್ದರಿಂದ ಅದೇ ದಿನ ಆಯ್ಕೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಇನ್ನು ಏಳು ಸಾವಿರ ಗ್ರಾಹಕರಿಗೆ ವಾರಕ್ಕೆ ಒಮ್ಮೆ ಗರಿಷ್ಠ ಒಂದು ಲಕ್ಷದವರೆಗೆ ಬಹುಮಾನ ನೀಡಲಾಗುತ್ತದೆ. ಇನ್ನು ಏಳು ಸಾವಿರ ಸಾಪ್ತಾಹಿಕ ಬಹುಮಾನವಾಗಿ ಗರಿಷ್ಠ 50 ಸಾವಿರ ರುಪಾಯಿಯನ್ನು ವ್ಯಾಪಾರಿಗಳಿಗೆ ಡಿಜಿ ಧನ್ ವ್ಯಾಪಾರಿ ಯೋಜನಾ ಅಡಿ ನೀಡಲಾಗುತ್ತದೆ.[ತೆರಿಗೆ ಹೊರೆ ಕಡಿಮೆ ಆಗುತ್ತೆ: ವಿತ್ತ ಸಚಿವ ಅರುಣ್ ಜೇಟ್ಲಿ ಇಶಾರೆ]
ಗ್ರಾಹಕರು ನವೆಂಬರ್ 8ರ ನಂತರ ಮಾಡಿರುವ ವ್ಯವಹಾರ ಹಾಗೂ ವ್ಯಾಪಾರಿಗಳಿ ಡಿಸೆಂಬರ್ 25ರ ನಂತರ ಮಾಡುವ ಡಿಜಿಟಲ್ ವ್ಯವಹಾರವನ್ನು ಪರಿಗಣಿಸಲಾಗುತ್ತದೆ.
ಯಾವುದೆಲ್ಲ ಒಳಗೊಳ್ಳುತ್ತವೆ?
ರುಪೆ ಕಾರ್ಡ್ ಮೂಲಕ ಮಾಡಿದ ವ್ಯವಹಾರಗಳು, ಅನ್ ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವೀಸ್ ಡೇಟಾ (ಯುಎಸ್ ಎಸ್ ಡಿ), ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್ (ಯುಪಿಐ) ಮತ್ತು ಆಧಾರ್ ಮೂಲಕ ಪಾವತಿಸುವ ವ್ಯವಸ್ಥೆಯಿರುವುದೆಲ್ಲವನ್ನು ಬಹುಮಾನಕ್ಕೆ ಪರಿಗಣಿಸಲಾಗುತ್ತದೆ.
ಯಾವುದು ಒಳಗೊಳ್ಳುವುದಿಲ್ಲ?
3 ಸಾವಿರ ಮೇಲ್ಪಟ್ಟ ಹಾಗೂ 50 ರುಪಾಯಿಯೊಳಗಿನ ವ್ಯವಹಾರಕ್ಕೆ ಅನ್ವಯವಾಗೋದಿಲ್ಲ. ವ್ಯಕ್ತಿಯಿಂದ ವ್ಯಕ್ತಿಯ ಹಾಗೂ ವ್ಯಾಪಾರದಿಂದ ವ್ಯಾಪಾರದ ಮಧ್ಯೆ ನಡೆದ ವ್ಯವಹಾರ ಪರಿಗಣಿಸುವುದಿಲ್ಲ. ಕ್ರೆಡಿಟ್ ಕಾರ್ಡ್ ಮತ್ತು ಇ ವ್ಯಾಲೆಟ್ ವ್ಯವಹಾರಗಳಿಗೆ ಅನ್ವಯಿಸುವುದಿಲ್ಲ.
ಈ ರೀತಿ ಪ್ರೋತ್ಸಾಹ ಧನ ಕೊಡುವ ಯೋಜನೆಯು ಮೂಲತಃ ಬಡವರು ಹಾಗೂ ಸಣ್ಣ ಪ್ರಮಾಣದ ವ್ಯಾಪಾರಿಗಳಿಗೆ ಡಿಜಿಟಲ್ ವ್ಯವಹಾರ ಆರಂಭಿಸಲು ಉತ್ತೇಜಿಸುವ ಕಾರಣಕ್ಕಾಗಿ ಮಾಡಲಾಗಿದೆ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಬ್ ಕಂಠ್ ಹೇಳಿದ್ದಾರೆ.












Click it and Unblock the Notifications