2020ರಲ್ಲಿ ಪ್ರಧಾನಿ ಮೋದಿ ಮಾತಿಗೆ ಭಾರತೀಯರು ಅಭೂತಪೂರ್ವವಾಗಿ ಸ್ಪಂದಿಸಿದ್ದು ಹೀಗೆ..
ಅಬ್ಬಾ.. ನಮಗೆ ಬುದ್ದಿ ತಿಳಿದ ಹಾಗೇ ಇಂತಹ ವರ್ಷವನ್ನು ನೋಡಿರಲಿಲ್ಲ, ಹೇಗೂ ಮುಗೀತಾ ಬಂತು ಎನ್ನುವುದು ಸಾಮಾನ್ಯವಾಗಿ ಪ್ರಸಕ್ತ ವರ್ಷದ ಬಗ್ಗೆ ಜನಸಾಮಾನ್ಯರು ಆಡುವ ಮಾತು. ಯಾಕೆಂದರೆ, ಈ ವರ್ಷದಲ್ಲಿ ಜನರು ಪಟ್ಟ ಪರಿಪಾಡು ಅಷ್ಟಿಷ್ಟಲ್ಲ.
ವಿಶ್ವಕ್ಕೆ ಮಾರಣಾಂತಿಕವಾಗಿ ಕಾಡಿದ ಕೊರೊನಾ ಹಾವಳಿ ಕಮ್ಮಿಯಾಗುತ್ತಾ ಬಂತು ಎನ್ನುವಷ್ಟರಲ್ಲಿ ಹೊಸ ರೂಪಾಂತರದಲ್ಲಿ ಈ ವೈರಸ್ ದಾಳಿ ಇಡಲು ಆರಂಭಿಸಿದೆ. ಬ್ರಿಟನ್ ಸೇರಿದಂತೆ ಯುರೋಪ್ ದೇಶಗಳಲ್ಲಿ ಇದರ ಅಬ್ಬರ ಜೋರಾಗುತ್ತಾ ಸಾಗುತ್ತಿದೆ.
ಮಾರ್ಚ್ ತಿಂಗಳಲ್ಲಿ ಪ್ರಧಾನಿ ಮೋದಿ ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಮಾಡಿದ ನಂತರ ಇಂತಹ ಯಾತನೆ ಎದುರಿಸಬೇಕಾಗಿ ಬರಬಹುದು ಎನ್ನುವ ಊಹೆಯೂ ಯಾರಿಗೂ ಇರಲಿಲ್ಲ. ಅದನ್ನೆಲ್ಲವನ್ನೂ ದಾಟಿ ಜನಜೀವನ ಒಂದು ಹಂತಕ್ಕೆ ಸರಿದಾರಿಗೆ ಬರುತ್ತಿದೆ ಎನ್ನುವಷ್ಟರಲ್ಲಿ ಮತ್ತೆ ಭಯದ ಕಾರ್ಮೋಡ ಎದುರಾಗುತ್ತಿದೆ.
ಪ್ರಮುಖವಾಗಿ ಮಾರ್ಚ್ ತಿಂಗಳಿನಿಂದ ಈಗಿನ ವರೆಗಿನ ಮೆಡಿಕಲ್ ಎಮರ್ಜೆನ್ಸಿಯ ಕಷ್ಟ ಕಾಲದಲ್ಲಿ ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ದುಡಿದವರು ಎಂದರೆ ಅವರು ಕೊರೊನಾ ವಾರಿಯರ್ಸ್. ಇವರಿಗೆ ಬೆಲೆ ಕೊಡಲು ಮೋದಿ ಕೊಟ್ಟ ಕರೆಗೆ ಜನರು ಅಭೂತಪೂರ್ವವಾಗಿ ಸ್ಪಂದಿಸಿದ್ದರು. ಅದರ ಒಂದು ಹಿನ್ನೋಟ ಹೀಗಿದೆ:

ಮಾರ್ಚ್ 24ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ
ಮಾರ್ಚ್ 24ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, 21 ದಿನಗಳ ಕಟ್ಟುನಿಟ್ಟಿನ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದ್ದರು. "ಈ 21 ದಿನ ಅತ್ಯಂತ ನಿರ್ಣಾಯಕವಾಗಿದ್ದು, ಈ ಅವಧಿಯಲ್ಲಿ ಸಾರ್ವಜನಿಕರು, ಮಾರ್ಗಸೂಚಿಯನ್ನು ಪಾಲಿಸದೇ ಇದ್ದರೆ, ದೇಶ 21 ವರ್ಷಕ್ಕೆ ಹಿಂದಕ್ಕೆ ಹೋಗುತ್ತದೆ. ಜನಸಾಮಾನ್ಯರು ಮಾಡಬೇಕಾಗಿರುವುದು ಇಷ್ಟೇ ಮನೆಯಲ್ಲೇ ಸೇಫ್ ಆಗಿ ಇರುವುದು"ಎಂದು ಮೋದಿ ಹೇಳಿದ್ದರು.

ಮನೆಯಿಂದ ಹೊರಗೆ ಬಂದು ಲೈಟ್, ದೀಪ ಟಾರ್ಚ್ ಅನ್ನು ಬೆಳಗಿಸಿ
ಏಪ್ರಿಲ್ ಮೂರಕ್ಕೆ ವಿಡಿಯೋ ಸಂದೇಶವನ್ನು ಕಳುಹಿಸಿದ ಮೋದಿ, "ಕೊರೊನಾ ವಿರುದ್ದ ಹೋರಾಟಕ್ಕೆ ನಿಮ್ಮ ಒಂಬತ್ತು ನಿಮಿಷವನ್ನು ಮೀಸಲಾಗಿಡಿ. ಏಪ್ರಿಲ್ ಐದರಂದು ಭಾನುವಾರ ರಾತ್ರಿ ಒಂಬತ್ತು ಘಂಟೆಗೆ ಒಂಬತ್ತು ನಿಮಿಷಗಳ ಕಾಲ ಮನೆಯಿಂದ ಹೊರಗೆ ಬಂದು ಲೈಟ್, ದೀಪ, ಟಾರ್ಚ್ ಅನ್ನು ಬೆಳಗಿಸಿ"ಎಂದು ಕರೆ ನೀಡಿದರು. ಮೋದಿಯ ಈ ಕರೆಗೆ ಜನರು ಅಭೂತಪೂರ್ವವಾಗಿ ಸ್ಪಂದಿಸಿದ್ದು ಗೊತ್ತೇ ಇದೆ. ವಿರೋಧ ಪಕ್ಷಗಳ ಮುಖಂಡರೂ ಮೋದಿ ಕರೆಗೆ ಓಗೂಡಿದ್ದರು.

ಚಪ್ಪಾಳೆ, ಗಂಟೆ ಜಾಗಟೆ ಮೂಲಕ, ವಾರಿಯರ್ಸ್ ನಿಸ್ವಾರ್ಥ ಸೇವೆಗೆ ಅಭಿನಂದಿಸೋಣ
ಏಪ್ರಿಲ್ ಹನ್ನೆರಡರಂದು ಮತ್ತೆ ವಿಡಿಯೋ ಸಂದೇಶ ಕಳುಹಿಸಿದ ಮೋದಿ ಕೊರೊನಾ ವಾರಿಯರ್ಸ್ ಅವರ ಕರ್ತವ್ಯ ನಿಷ್ಠೆಯನ್ನು ಹಾಡಿ ಹೊಗಳಿದ್ದರು. "ಇಂದು ಎಲ್ಲಾ ನನ್ನ ಪ್ರೀತಿಯ ನಾಗರೀಕರು ಮನೆಯಿಂದ ಹೊರಗೆ ಬಂದು ಚಪ್ಪಾಳೆ, ಗಂಟೆ ಜಾಗಟೆ ಬಾರಿಸುವುದು, ಶಂಖ ಊದುವ ಮೂಲಕ, ಕೊರೊನಾ ವಾರಿಯರ್ಸ್ ಅವರ ನಿಸ್ವಾರ್ಥ ಸೇವೆಗೆ ಅವರನ್ನು ಅಭಿನಂದಿಸೋಣ"ಎಂದು ಕರೆ ನೀಡಿದ್ದರು. ಜನರು ಇದಕ್ಕೆ ಯಾವರೀತಿ ಸ್ಪಂದಿಸಿದ್ದರು ಎಂದರೆ, ಊಟದ ಬಟ್ಟಲು, ಪಾತ್ರೆಗಳನ್ನು ರಸ್ತೆಗೆ ತಂದು ಬಾರಿಸಿ ಸ್ಪಂದಿಸಿದ್ದರು.

ದೇಶದ ವಿವಿದೆಡೆ ಜನರು ಅಗತ್ಯಕ್ಕಿಂತ ಜಾಸ್ತಿ ಸ್ಪಂದಿಸಿದ್ದರು
ಇದಾದ ನಂತರ ಹಲವು ಬಾರಿ ಲಾಕ್ ಡೌನ್ ವಿವಿಧ ಹಂತದಲ್ಲಿ ಮುಂದುವರಿದಿದ್ದರೂ ಪ್ರಧಾನಿ ಮೋದಿ ಮತ್ತೆ ದೀಪ ಹಚ್ಚುವ, ಗಂಟೆ ಬಾರಿಸುವ ಟಾಸ್ಕ್ ಅನ್ನು ನೀಡಿರಲಿಲ್ಲ. ಮೋದಿ ತಮ್ಮ ಪ್ರತೀ ಭಾಷಣದಲ್ಲೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೇಳುತ್ತಿದ್ದರು. ಆದರೆ, ಗಂಟೆ ಹೊಡೆಯಲು ಹೇಳಿದಾಗ, ದೇಶದ ವಿವಿದೆಡೆ ಜನರು ಅಗತ್ಯಕ್ಕಿಂತ ಜಾಸ್ತಿ ಸ್ಪಂದಿಸಿದ್ದರು. ಕೆಲವೊಂದು ಕಡೆ, ಸಾರ್ವಜನಿಕ ಅಂತರಕ್ಕೆ ತಿಲಾಂಜಲಿಯಿಟ್ಟು ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು.












Click it and Unblock the Notifications