6 ತಿಂಗಳ ಅವಧಿ ನಾಗಾಲ್ಯಾಂಡ್ "ಕ್ಷೋಭೆಗೊಳಗಾದ ಪ್ರದೇಶ"
ಕೊಹಿಮಾ, ಡಿಸೆಂಬರ್ 30: 1958ರ ಸಶಸ್ತ್ರ ಪಡೆ (ವಿಶೇಷ ಅಧಿಕಾರ) ಕಾಯ್ದೆಯಡಿಯಲ್ಲಿ ಮುಂದಿನ ಆರು ತಿಂಗಳ ಅವಧಿ ನಾಗಾಲ್ಯಾಂಡ್ ಅನ್ನು "ಕ್ಷೋಭೆಗೊಳಗಾದ ಪ್ರದೇಶ" ಎಂದು ಬುಧವಾರ ಕೇಂದ್ರ ಗೃಹ ಸಚಿವಾಲಯ ಘೋಷಿಸಿದೆ. "ನಾಗರಿಕರ ನೆರವಿಗೆ ಸಶಸ್ತ್ರ ಪಡೆಗಳ ಬಳಕೆ ಅಗತ್ಯ" ಎಂದು ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.
"ನಾಗಾಲ್ಯಾಂಡ್ ಪ್ರದೇಶದ ತುಂಬ ಗೊಂದಲದ ಪರಿಸ್ಥಿತಿಯಿದ್ದು, ಅಪಾಯದಲ್ಲಿದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ. ಇಂಥ ಸಂದರ್ಭದಲ್ಲಿ ನಾಗರಿಕ ಶಕ್ತಿಯ ನೆರಿಗೆ ಸಶಸ್ತ್ರ ಪಡೆಗಳ ಬಳಕೆ ಅಗತ್ಯವಾಗಿದೆ" ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇಂಥ ಪರಿಸ್ಥಿತಿಯಲ್ಲಿ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ 1958 ಸೆಕ್ಷನ್ 3ರ ಅಡಿಯಲ್ಲಿ ಕೇಂದ್ರ ಸರ್ಕಾರವು ನಾಗಾಲ್ಯಾಂಡ್ ಅನ್ನು "ಕ್ಷೋಭೆಗೊಳಗಾದ ಪ್ರದೇಶ" ಎಂದು ಘೋಷಿಸುತ್ತಿದೆ. ಡಿ.30ರಿಂದ ಮುಂದಿನ ಆರು ತಿಂಗಳು ಈ ಆದೇಶ ಮುಂದುವರೆಯಲಿದೆ ಎಂದು ಅಧಿಸೂಚನೆ ತಿಳಿಸಿದೆ. ಇದೇ ವರ್ಷದ ಜೂನ್ ತಿಂಗಳಿನಲ್ಲಿ, ನಾಗಾಲ್ಯಾಂಡ್ ಅನ್ನು ಆರು ತಿಂಗಳ ಅವಧಿಗೆ "ಕ್ಷೋಭೆಗೊಳಗಾದ ಪ್ರದೇಶ" ಎಂದು ಘೋಷಿಸಲಾಗಿತ್ತು. ರಾಜ್ಯದಲ್ಲಿ ಕಳೆದ ಆರು ದಶಕಗಳಿಂದಲೂ ಇದೇ ಪರಿಸ್ಥಿತಿ ಮುಂದುವರೆದಿದೆ.

2015ರಲ್ಲಿ ನಾಗಾಲ್ಯಾಂಡ್ ರಾಷ್ಟ್ರೀಯ ಸಮಾಜವಾದಿ ಮಂಡಳಿ ಪ್ರಧಾನ ಕಾರ್ಯದರ್ಶಿ ತೂಯಿಂಗಲೆಂಗ್ ಮುಯಿವ್ ಹಾಗೂ ಸರ್ಕಾರ ಸಂವಾದಕ ಆರ್ ಎನ್ ರವಿ ನಡುವೆ ಒಪ್ಪಂದಕ್ಕೆ ಸಹಿ ಹಾಕಿದ ನಂತರವೂ ಈ ಕಾಯ್ದೆಯನ್ನು ಹಿಂಪಡೆಯಲಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನೊಳಗೊಂಡಂತೆ ಹಿರಿಯ ಮುಖಂಡರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.
ಈ ದಶಕಗಳ ಸಮಸ್ಯೆಯ ಇತ್ಯರ್ಥಕ್ಕೆ ಎನ್ ಎಸ್ ಸಿಎನ್ ಜೊತೆ ಮಾತುಕತೆ ಮುಂದುವರೆದಿದೆ ಎಂದು ಕೇಂದ್ರ ಸರ್ಕಾರ ನವೆಂಬರ್ ನಲ್ಲಿ ತಿಳಿಸಿತ್ತು. ಈ ಪ್ರದೇಶದ ಬಂಡಾಯದ ಸಂಘಟನೆಗಳನ್ನು ಎದುರಿಸಲು ರಾಜ್ಯಕ್ಕೆ ಕೇಂದ್ರ ನೆರವು ನೀಡುವುದಾಗಿಯೂ ತಿಳಿಸಿತ್ತು. ಇದೀಗ ಮತ್ತೆ "ಕ್ಷೋಭೆಗೊಳಗಾದ ಪ್ರದೇಶ" ಎಂದು ಘೋಷಿಸಲಾಗಿದೆ.












Click it and Unblock the Notifications