ಮಣಿಪುರ ಹಿಂಸಾಚಾರ ಪರಿಸ್ಥಿತಿ ಕುರಿತು ಚರ್ಚಿಸಲು ಜೂನ್ 24 ರಂದು ಸರ್ವಪಕ್ಷ ಸಭೆ ಕರೆದ ಅಮಿತ್ ಶಾ
ಗುವಾಹಟಿ, ಜೂನ್. 23: ಮಣಿಪುರದ ಪರಿಸ್ಥಿತಿಯನ್ನು ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜೂನ್ 24 ರಂದು (ಶನಿವಾರ) ಸರ್ವಪಕ್ಷ ಸಭೆಯನ್ನು ಕರೆದಿದ್ದಾರೆ. ಈಶಾನ್ಯ ರಾಜ್ಯದಲ್ಲಿ ಘರ್ಷಣೆ ನಡೆದ ನಂತರ ಇದು ಮೊದಲ ಸರ್ವಪಕ್ಷ ಸಭೆಯಾಗಿದೆ. ಇದರ ನಡುವೆಯೇ ಮಣಿಪುರಲ್ಲಿ ಮತ್ತೆ ಹಿಂಸಾಚಾರದ ಘಟನೆ ವರದಿಯಾಗಿದೆ.
ಶನಿವಾರ ನವದೆಹಲಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಸಭೆ ನಡೆಯಲಿದೆ. ಸರ್ವಪಕ್ಷ ಸಭೆಯ ಉದ್ದೇಶವು ಪ್ರಸ್ತುತ ಪರಿಸ್ಥಿತಿ ಮತ್ತು ಹಿಂಸಾಚಾರದಿಂದ ಹಾನಿಗೊಳಗಾದ ರಾಜ್ಯದಲ್ಲಿ ಸಹಜತೆಯನ್ನು ಮರುಸ್ಥಾಪಿಸುವ ಮಾರ್ಗಗಳ ಕುರಿತು ಯೋಚಿಸುವುದು ಪ್ರಮುಖ ಉದ್ದೇಶ ಎಂದು ಹೇಳಲಾಗಿದೆ. ಹಿಂದಿನ ದಿನ, ಹಿಂಸಾಚಾರ ಪೀಡಿತ ಮಣಿಪುರದ ಒಂಬತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ರಾಜ್ಯದ ಜನರು ನೋಂಗ್ತೋಂಬಮ್ ಬಿರೇನ್ ಸಿಂಗ್ ನೇತೃತ್ವದ ಸರ್ಕಾರದ ಮೇಲೆ ಸಂಪೂರ್ಣ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದ್ದರು.

ಪ್ರಧಾನಿ ಮೋದಿಗೆ ಐದು ಅಂಶಗಳ ಜ್ಞಾಪಕ ಪತ್ರವನ್ನು ಸಲ್ಲಿಸಿದ ಶಾಸಕರು, ಸರ್ಕಾರ ಮತ್ತು ಆಡಳಿತದ ಮೇಲೆ ಯಾವುದೇ ನಂಬಿಕೆ ಮತ್ತು ವಿಶ್ವಾಸವಿಲ್ಲ ಎಂದು ಹೇಳಿದ್ದರು. "ಕಾನೂನಿನ ನಿಯಮವನ್ನು ಅನುಸರಿಸುವ ಮೂಲಕ ಸರಿಯಾದ ಆಡಳಿತ ಮತ್ತು ಸರ್ಕಾರದ ಕಾರ್ಯಕ್ಕಾಗಿ ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದರಿಂದ ಜನರ ನಂಬಿಕೆ ಮತ್ತು ವಿಶ್ವಾಸವನ್ನು ಮತ್ತೆ ಪಡೆಯಬಹುದು" ಎಂದು ಜ್ಞಾಪಕ ಪತ್ರದಲ್ಲಿ ಹೇಳಲಾಗಿದೆ.\
ಇದಕ್ಕೆ ಬಿಜೆಪಿಯ ಒಂಬತ್ತು ಶಾಸಕರಾದ ಕರಮ್ ಶ್ಯಾಮ್ ಸಿಂಗ್, ತೊಕ್ಚೋಮ್ ರಾಧೇಶ್ಯಾಮ್ ಸಿಂಗ್, ನಿಶಿಕಾಂತ್ ಸಿಂಗ್ ಸಪಮ್, ಖ್ವೈರಕ್ಪಾಮ್ ರಘುಮಣಿ ಸಿಂಗ್, ಎಸ್ ಬ್ರೋಜೆನ್ ಸಿಂಗ್, ಟಿ ರಬಿಂದ್ರೋ ಸಿಂಗ್, ಎಸ್ ರಾಜೇನ್ ಸಿಂಗ್, ಎಸ್ ಕೆಬಿ ದೇವಿ ಮತ್ತು ವೈ ರಾಧೇಶ್ಯಾಮ್ ಸಹಿ ಹಾಕಿದ್ದಾರೆ. ಈ ಶಾಸಕರೆಲ್ಲರೂ ಮೈತಿಯಿ ಸಮುದಾಯಕ್ಕೆ ಸೇರಿದವರು.
ಪರಿಶಿಷ್ಟ ಪಂಗಡದ (ಎಸ್ಟಿ) ಸ್ಥಾನಮಾನಕ್ಕಾಗಿ ಮೈತಿಯಿ ಮತ್ತು ಕುಕಿ ಸಮುದಾಯಗಳ ನಡುವಿನ ಹಿಂಸಾಚಾರದಲ್ಲಿ 100 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರ ನಡುವೆ ಪ್ರಕ್ಷುಬ್ಧ ಮಣಿಪುರದಲ್ಲಿ ಶುಕ್ರವಾರ ಮಧ್ಯಾಹ್ನ ಭದ್ರತಾ ಪಡೆಗಳು ಮತ್ತು ಶಸ್ತ್ರಸಜ್ಜಿತ ದುಷ್ಕರ್ಮಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.
ಇಂಫಾಲ್ ಪೂರ್ವ ಮತ್ತು ಕಾಂಗ್ಪೋಕ್ಪಿ ಜಿಲ್ಲೆಗಳ ನಡುವಿನ ತಪ್ಪಲಿನ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಯಾವುದೇ ಪ್ರಾಣಹಾನಿ ಸಂಭವಿಸಿದೆಯೇ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ದುಷ್ಕರ್ಮಿಗಳು ಯಂಗಂಗ್ಪೋಕ್ಪಿಯಿಂದ ಬೆಟ್ಟದ ಕಡೆಗೆ ನುಸುಳಿ ಉರಂಗ್ಪತ್ ಮತ್ತು ಗ್ವಾಲ್ಟಾಬಿ ಗ್ರಾಮಗಳನ್ನು ಗುರಿಯಾಗಿಸಿಕೊಂಡು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications