Breaking: ಹಿಮಾಚಲ ಭೂಕುಸಿತ: ಸಂತ್ರಸ್ತ ಪ್ರದೇಶಗಳಿಗೆ ಸಿಎಂ ಭೇಟಿ
ಶಿಮ್ಲಾ, ಆಗಸ್ಟ್ 22: ವರುಣನ ಅರ್ಭಟಕ್ಕೆ ಹಿಮಾಚಲ ಪ್ರದೇಶ ಅಕ್ಷರಶಃ ತತ್ತರಿಸಿದೆ. ಭೂಕುಸಿತಗಳಲ್ಲಿ ಈವರೆಗೆ 22 ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆ ಸೋಮವಾರ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಠಾತ್ ಪ್ರವಾಹದಿಂದಾಗಿ ಮಂಡಿ ಜಿಲ್ಲೆಯಲ್ಲಿ ಹೆಚ್ಚು ಹಾನಿಗೊಳಗಾಗಿದೆ. ಇದರ ಜೊತೆಗೆ ಭೂಕುಸಿತ ಮತ್ತು ಪ್ರವಾಹದ 36 ಘಟನೆಗಳಲ್ಲಿ 22 ಜನರು ಸಾವನ್ನಪ್ಪಿದ್ದಾರೆ ಮತ್ತು ಹನ್ನೆರಡು ಜನರು ಗಾಯಗೊಂಡಿದ್ದಾರೆ. ದುರಂತದಲ್ಲಿ ಒಂದೇ ಕುಟುಂಬದ ಎಂಟು ಸದಸ್ಯರು ಮೃತಪಟ್ಟಿದ್ದಾರೆ.
ಹಿಮಾಚಲ ಪ್ರದೇಶ ಭೂಕುಸಿತ, ಸಾವಿನ ಸಂಖ್ಯೆ 22ಕ್ಕೆ ಏರಿಕೆ
ಮುಖ್ಯಮಂತ್ರಿಗಳ ತವರು ಜಿಲ್ಲೆಯಾಗಿರುವ ಮಂಡಿಯಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ. ಐವರು ನಾಪತ್ತೆಯಾಗಿದ್ದು, ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮಂಡಿಯಲ್ಲಿ ಹಠಾತ್ ಪ್ರವಾಹ ಮತ್ತು ಭೂಕುಸಿತ ಉಂಟಾಗಿತ್ತು ಈ ವೇಳೆ ಒಬ್ಬರು ಗಾಯಗೊಂಡಿದ್ದಾರೆ.
ಅಧಿಕಾರಿಗಳ ಹೇಳಿಕೆ ಪ್ರಕಾರ, ಮುಖ್ಯಮಂತ್ರಿ ಶಿಮ್ಲಾದಿಂದ ಹೆಲಿಕಾಪ್ಟರ್ನಲ್ಲಿ ಬೆಳಗ್ಗೆ ಮಂಡಿಗೆ ತಲುಪಿದ್ದಾರೆ. ಗೋಹರ್ ಡೆವಲಪ್ಮೆಂಟ್ ಬ್ಲಾಕ್ನಲ್ಲಿರುವ ಕಶನ್ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.
ಗೋಹರ್ ಡೆವಲಪ್ಮೆಂಟ್ ಬ್ಲಾಕ್ನಲ್ಲಿರುವ ಕಶನ್ ಗ್ರಾಮದಲ್ಲಿ ಆಗಸ್ಟ್ 20 ರಂದು ಭೂಕುಸಿತ ಸಂಭವಿಸಿದ ವೇಳೆ ಖೇಮ್ ಸಿಂಗ್ ಮತ್ತು ಅವರ ಕುಟುಂಬದ ಏಳು ಸದಸ್ಯರು ಅವರದ್ದೇ ಮನೆಯ ಅವಶೇಷಗಳ ಅಡಿಯಲ್ಲಿ ಜೀವಂತವಾಗಿ ಸಮಾಧಿಯಾಗಿದ್ದರು. ಇಲ್ಲಿ ಮಧ್ಯಾಹ್ನ 12.15ರವರೆಗೆ ಮುಖ್ಯಮಂತ್ರಿ ಪರಿಸ್ಥಿತಿ ಅವಲೋಕಿಸಲಿದ್ದಾರೆ.
ಮಧ್ಯಾಹ್ನ 1.10 ರ ಸುಮಾರಿಗೆ ಸಿಎಂ ಜೈ ರಾಮ್ ಠಾಕೂರ್ ಶಿಮ್ಲಾವನ್ನು ತಲುಪಲಿದ್ದಾರೆ.
ಇನ್ನು, ಮಂಡಿಯಲ್ಲಿಯೇ,ಶನಿವಾರ ಮಂಡಿ-ಕಟೋಲಾ-ಪ್ರಶಾರ್ ರಸ್ತೆಯ ಬಾಘಿ ನುಲ್ಲಾದಲ್ಲಿ ಹಠಾತ್ ಪ್ರವಾಹ ಉಂಟಾಗಿ ಒಂದೇ ಕುಟುಂಬದ ಆರು ಸದಸ್ಯರು ನಾಪತ್ತೆಯಾಗಿದ್ದಾರೆ. ಬಾಲಕಿಯ ಮೃತದೇಹ ಆಕೆಯ ಮನೆಯಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ. ಆಕೆಯ ಕುಟುಂಬದ ಇತರ ಐದು ಸದಸ್ಯರು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.
ಮಂಡಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಬಾಘಿ ಮತ್ತು ಓಲ್ಡ್ ಕಟೋಲಾ ಪ್ರದೇಶಗಳ ನಡುವಿನ ಹಲವಾರು ಕುಟುಂಬಗಳು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದಿವೆ. ಇದಲ್ಲದೆ, ಹಲವಾರು ರಸ್ತೆಗಳು, ವಿದ್ಯುತ್ ಟ್ರಾನ್ಸ್ಫಾರ್ಮರ್ಗಳು ಮತ್ತು ನೀರು ಸರಬರಾಜು ಪೈಪ್ಗಳು ಸಹ ಹಠಾತ್ ಪ್ರವಾಹದಲ್ಲಿ ಹಾನಿಗೊಳಗಾಗಿವೆ.
ಐಎಂಡಿ ರಾಜ್ಯ ಉಪ ನಿರ್ದೇಶಕ ಬುಯಿ ಲಾಲ್, "ಮುಂದಿನ 5 ದಿನಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಲಿದೆ. ಇಡೀ ರಾಜ್ಯಕ್ಕೆ ಮುಂದಿನ 12 ಗಂಟೆಗಳ ಕಾಲ ಆರೆಂಜ್ ಅಲರ್ಟ್, ಆಗಸ್ಟ್ 24 ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ" ಎಂದು ಹೇಳಿದರು. ಈ ವಾತಾವರಣದಲ್ಲಿ ಜನರು ನದಿಗಳು ಮತ್ತು ತೊರೆಗಳ ಬಳಿ ಹೋಗದಂತೆ ಸೂಚಿಸಲಾಗಿದೆ. ಇದಲ್ಲದೆ, ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯು ಆಗಸ್ಟ್ 25 ರವರೆಗೆ ಭೂಕುಸಿತದ ಎಚ್ಚರಿಕೆಯನ್ನು ನೀಡಿದೆ.
Recommended Video