ನಿರುದ್ಯೋಗಿಗಳಿಗೆ 3,000 ರು. ಭತ್ಯೆ ಘೋಷಿಸಿದ ಕೇಜ್ರಿವಾಲ್
ಶಿಮ್ಲಾ, ಸೆಪ್ಟೆಂಬರ್ 09: ಹಿಮಾಚಲ ಪ್ರದೇಶದಲ್ಲಿ ಚುನಾವಣೆ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ಭರಪೂರ ಘೋಷಣೆಗಳನ್ನು ಮಾಡಿದ್ದು, ರಾಜ್ಯದಲ್ಲಿ ದೆಹಲಿ ಮಾದರಿ ಬದಲಾವಣೆಗಳನ್ನು ತರುವುದಾಗಿ ಭರವಸೆಗಳನ್ನು ನೀಡಿದೆ.
ಹಿಮಾಚಲ ಪ್ರದೇಶದಲ್ಲಿ 6 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಎಎಪಿ ಶುಕ್ರವಾರ ಭರವಸೆ ನೀಡಿದೆ. ಅಲ್ಲದೆ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೆ ಕೆಲಸ ಹುಡುಕುವವರೆಗೆ ನಿರುದ್ಯೋಗಿ ಯುವಕರಿಗೆ ತಿಂಗಳಿಗೆ ₹ 3,000 ನಿರುದ್ಯೋಗ ಭತ್ಯೆ ನೀಡುವುದಾಗಿ ಭರವಸೆ ನೀಡಿದೆ.
ರಾಜ್ಯದಲ್ಲಿ "ಇನ್ಸ್ಪೆಕ್ಟರ್ ರಾಜ್" ಮತ್ತು "ರಾಜಕೀಯ ಭ್ರಷ್ಟಾಚಾರ" ಕೊನೆಗೊಳಿಸಲು ವ್ಯಾಪಾರಿಗಳು ಮತ್ತು ಪ್ರವಾಸೋದ್ಯಮಕ್ಕಾಗಿ ಸಮಾಲೋಚನಾ ಮಂಡಳಿಯನ್ನು ರಚಿಸಲಾಗುವುದು ಎಂದು ಪಕ್ಷ ಹೇಳಿದೆ. ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರ ತವರು ಜಿಲ್ಲೆ ಮಂಡಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಈ ಘೋಷಣೆ ಮಾಡಿದರು.

ಆಮ್ ಆದ್ಮಿ ಪಕ್ಷ (ಎಎಪಿ) ಹಿರಿಯ ನಾಗರಿಕರಿಗೆ ಅವರ ಧಾರ್ಮಿಕ ಸ್ಥಳದ ಆಯ್ಕೆಗೆ ಉಚಿತ ತೀರ್ಥಯಾತ್ರೆಗೆ ಭರವಸೆ ನೀಡಿದೆ. ದೆಹಲಿಯ ಮಾದರಿಯಲ್ಲಿ ಹಿಮಾಚಲ ಪ್ರದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸಲಾಗುವುದು ಎಂದು ಪಕ್ಷ ಹೇಳಿದೆ. ಪ್ರತಿ ಪಂಚಾಯಿತಿ ಅಭಿವೃದ್ಧಿಗೆ ₹ 10 ಲಕ್ಷ ಅನುದಾನ ಹಾಗೂ ಪಂಚಾಯಿತಿ ಅಧ್ಯಕ್ಷರಿಗೆ ₹ 10,000 ಮಾಸಿಕ ವೇತನ ನೀಡುವುದಾಗಿ ಎಎಪಿ ಮುಖಂಡರು ಭರವಸೆ ನೀಡಿದರು.

ರೈತರು ಮತ್ತು ತೋಟಗಾರರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಮತ್ತು ಕೀಟನಾಶಕಗಳು, ರಸಗೊಬ್ಬರಗಳು ಮತ್ತು ಬೀಜಗಳ ಮೇಲೆ ಸಬ್ಸಿಡಿಯನ್ನು ಖಾತರಿಪಡಿಸಲಾಗುವುದು ಎಂದು ಇಬ್ಬರು ಮುಖಂಡರು ಹೇಳಿದರು. ತನ್ನ ಚುನಾವಣಾ ಭರವಸೆಗಳ ಭಾಗವಾಗಿ ಎಎಪಿ ಈಗಾಗಲೇ ಹಿಮಾಚಲ ನಿವಾಸಿಗಳಿಗೆ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ಭರವಸೆ ನೀಡಿದೆ. ರಾಜ್ಯದ ರಾಜಕೀಯ ಕ್ಷೇತ್ರಕ್ಕೆ ಕಾಲಿಡಲು ಯತ್ನಿಸುತ್ತಿರುವ ಎಎಪಿ ಸದ್ಯ ನೆರೆಯ ಪಂಜಾಬ್ ಮತ್ತು ದೆಹಲಿಯಲ್ಲಿ ಆಡಳಿತ ನಡೆಸುತ್ತಿದೆ.












Click it and Unblock the Notifications