ಹಿಮಾಚಲದಲ್ಲಿ ಸೋತ ಕಾಂಗ್ರೆಸ್, ರಾಜೀನಾಮೆ ನೀಡಿದ ವೀರಭದ್ರ ಸಿಂಗ್
ಶಿಮ್ಲಾ, ಡಿಸೆಂಬರ್ 19: ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸಿನ ವೀರಭದ್ರ ಸಿಂಗ್ ರಾಜೀನಾಮೆ ನೀಡಿದ್ದಾರೆ.
ಸೋಮವಾರ ಹೊರಬಿದ್ದ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಸೋಲು ಕಂಡಿತ್ತು. 68 ಕ್ಷೇತ್ರಗಳಲ್ಲಿ ಬಿಜೆಪಿ 44 ಸ್ಥಾನಗಳಲ್ಲಿ ಗೆದ್ದು ಹಿಮಾಚಲ ಪ್ರದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬಂದಿತ್ತು. ಕಾಂಗ್ರೆಸ್ 21 ಸ್ಥಾನಗಳಲ್ಲಷ್ಟೇ ಗೆದ್ದು ಸೋಲು ಕಂಡಿತ್ತು. ಇತರರು ಮೂರು ಸ್ಥಾನಗಳಲ್ಲಿ ಗೆದ್ದಿದ್ದರು.
ಹಿಮಾಚಲದ ಸಿಎಂ ಅಭ್ಯರ್ಥಿ ಪ್ರೇಮ್ ಸೋಲಲು ಏನು ಕಾರಣ?
ಸೋಲು ಕಂಡ ಹಿನ್ನಲೆಯಲ್ಲಿ ಇಂದು ವೀರಭದ್ರ ಸಿಂಗ್ ರಾಜ್ಯಪಾಲ ಆಚಾರ್ಯ ದೇವರತ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆಯನ್ನು ಅಂಗೀಕರಿಸಿರುವ ರಾಜ್ಯಪಾಲರು ಹೊಸ ಸರಕಾರ ಅಧಿಕಾರಕ್ಕೆ ಬರುವವರೆಗೆ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವಂತೆ ವಿನಂತಿಸಿಕೊಂಡಿದ್ದಾರೆ.
ರಾಂಪುರ್ ಬುಶಾರ್ ರಾಜಮನೆತನಕ್ಕೆ ಸೇರಿದ 83 ವರ್ಷದ ವೀರಭದ್ರ ಸಿಂಗ್ 8 ಬಾರಿ ಹಿಮಾಚಲ ಪ್ರದೇಶ ವಿಧಾನಸಭೆ ಪ್ರವೇಶಿಸಿದ್ದಾರೆ. ಸೋಮವಾರ ಹೊರ ಬಿದ್ದ ಫಲಿತಾಂಶದಲ್ಲಿ ಅವರು 6,051 ಮತಗಳಿಂದ ಬಿಜೆಪಿಯ ರತನ್ ಸಿಂಗ್ ಪಾಲ್ ರನ್ನು ಸೋಲಿಸಿದ್ದಾರೆ.
1962ರಲ್ಲಿ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ ವೀರಭದ್ರ ಸಿಂಗ್ ರದ್ದು 55 ವರ್ಷಗಳ ರಾಜಕೀಯ ಜೀವನ. ಈ ಅವಧಿಯಲ್ಲಿ ಅವರು ನಾಲ್ಕು ಬಾರಿ ಲೋಕಸಭೆ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದು ಆರು ಬಾರಿ ಹಿಮಾಚಲ ಪ್ರದೇಶ ಮುಖ್ಯಮಂತ್ರಿಯಾಗಿದ್ದಾರೆ.
ಹಿಮಾಚಲ ಪ್ರದೇಶ : ಬಿಜೆಪಿ ಗೆದ್ದರೂ ಸಿಎಂ ಅಭ್ಯರ್ಥಿಗೆ ಸೋಲು!
ನಾಲ್ಕು ಬೇರೆ ಬೇರೆ ಕ್ಷೇತ್ರಗಳಿಂದ ವಿಧಾನಸಭೆ ಪ್ರವೇಶಿಸಿರುವ ವೀರಭದ್ರ ಸಿಂಗ್ ಈ ಬಾರಿ ತಮ್ಮ ಶಿಮ್ಲಾ ಗ್ರಾಮೀಣ ಕ್ಷೇತ್ರವನ್ನು ಪುತ್ರ ವಿಕ್ರಮಾದಿತ್ಯಸಿಂಗ್ ರಿಗೆ ಬಿಟ್ಟು ಅರ್ಕಿಗೆ ವಲಸೆ ಹೋಗಿದ್ದಾರೆ. ಅವರ ಪತ್ನಿ ಕೂಡ ಎರಡು ಬಾರಿ ಲೋಕಸಭೆ ಚುನಾವಣೆಗೆ ಆಯ್ಕೆಯಾಗಿದ್ದಾರೆ.