ಕಮರಿಗೆ ಉರುಳಿದ ಬಸ್: ಕನಿಷ್ಠ 25 ಪ್ರಯಾಣಿಕರು ಸಾವು
ಕಮರಿಗೆ ಉರುಳಿದ ಬಸ್: ಕನಿಷ್ಠ 32 ಪ್ರಯಾಣಿಕರು ಸಾವುಕುಲ್ಲು, ಜೂನ್ 20: ಸುಮಾರು 60 ಜನ ಪ್ರಯಾಣಿಕರಿದ್ದ ಬಸ್ ಹಿಮಾಚಲ ಪ್ರದೇಶದ ಕುಲ್ಲು ಪ್ರದೇಶದ ಬಂಜಾರ್ ಎಂಬಲ್ಲಿ ಕಮರಿಗೆ ಉರುಳಿ 32 ಮಂದಿ ದುರ್ಮರಣ ಹೊಂದಿದ್ದಾರೆ. ಬಸ್ನಲ್ಲಿದ್ದ ಉಳಿದವರು ಸುಮಾರು 35 ಮಂದಿ ತೀವ್ರ ಗಾಯಗೊಂಡಿದ್ದಾರೆ.
ಈ ಖಾಸಗಿ ಬಸ್ನ ಟಾಪ್ನಲ್ಲಿಯೂ ಜನರು ಕುಳಿತಿದ್ದರು. ಕೆಲವರಿಗೆ ಗಂಭೀರ ಗಾಯಗಳಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಸ್ ಬಂಜಾರ್ನಿಂದ ಗಡಗೂಶನಿ ಪ್ರದೇಶಕ್ಕೆ ತೆರಳುತ್ತಿತ್ತು. ಪೊಲೀಸರು ಮತ್ತು ಸ್ಥಳೀಯರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಗಾಯಾಳುಗಳನ್ನು ಸಮೀಪದ ಕುಲ್ಲು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಂಜಾರ ತಾಲ್ಲೂಕಿನ ಧೋತ್ ಮೋರ್ಹ್ ಸಮೀಪದಲ್ಲಿ ಸುಮಾರು 300 ಮೀಟರ್ ಆಳದ ಕಮರಿಗೆ ಬಿದ್ದಿದೆ. ಬಸ್ನ ಮೇಲ್ಭಾಗ ಸಂಪೂರ್ಣ ಪುಡಿಯಾಗಿದೆ. ಕಲ್ಲುಗಳಿಂದ ಕೂಡಿದ ಕಮರಿಯ ಭಾಗದಲ್ಲಿ ನೀರು ಹರಿಯುತ್ತಿತ್ತು. ಹೀಗಾಗಿ ಹಾನಿ ಪ್ರಮಾಣ ಹೆಚ್ಚಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ತೊಡಕುಂಟುಮಾಡಿದೆ.

ಕಿರಿದಾದ ತಿರುವಿನಲ್ಲಿ ಪಲ್ಟಿ
ಸುಮಾರು 12 ಮಹಿಳೆಯರು, 10 ಮಕ್ಕಳು ಮತ್ತು ಪುರುಷರನ್ನು ರಕ್ಷಿಸಲಾಗಿದೆ ಎಂದು ಕುಲ್ಲು ಪೊಲೀಸ್ ವರಿಷ್ಠಾಧಿಕಾರಿ ಶಾಲಿನಿ ಅಗ್ನಿಹೋತ್ರಿ ತಿಳಿಸಿದ್ದಾರೆ. ನಿಲ್ದಾಣದಿಂದ ಹೊರಟ ಬಸ್ ಹೆಚ್ಚೆಂದರೆ ಎರಡು ಕಿ.ಮೀ. ದೂರ ಸಾಗಿತ್ತು. ಟಾಪ್ನಲ್ಲಿಯೂ ಪ್ರಯಾಣಿಕರು ಕುಳಿತಿದ್ದರಿಂದ ಭಿಯೋತ್ ಎಂಬಲ್ಲಿ ಕಿರಿದಾದ ತಿರುವಿನಲ್ಲಿ ತಿರುಗಿಸುವ ವೇಳೆ ನಿಯಂತ್ರಣ ತಪ್ಪಿ ಕಮರಿಗೆ ಉರುಳಿದೆ ಎನ್ನಲಾಗಿದೆ.

ಪ್ರಧಾನಿ ಮೋದಿ ಸಂತಾಪ
ಕುಲ್ಲುವಿನಲ್ಲಿ ನಡೆದ ಬಸ್ ಅಪಘಾತ ದುರಂತ ತೀವ್ರ ದುಃಖವನ್ನುಂಟುಮಾಡಿದೆ. ಜೀವ ಕಳೆದುಕೊಂಡವರ ಕುಟುಂಬದವರಿಗೆ ಸಂತಾಪಗಳನ್ನು ಸಲ್ಲಿಸುತ್ತೇನೆ. ಗಾಯಾಳುಗಳು ಶೀಘ್ರದಲ್ಲಿಯೇ ಚೇತರಿಸಿಕೊಳ್ಳುತ್ತಾರೆ ಎಂದು ಭರವಸೆ ಹೊಂದಿದ್ದೇನೆ. ಅಗತ್ಯವಿರುವ ಎಲ್ಲ ಸಾಧ್ಯ ನೆರವುಗಳನ್ನು ಹಿಮಾಚಲ ಪ್ರದೇಶ ಸರ್ಕಾರ ಒದಗಿಸುತ್ತಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಸಂತಾಪ ವ್ಯಕ್ತಪಡಿಸಿದ ನಡ್ಡಾ
ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಬಂಜಾರ್ ಸಮೀಪ ನಡೆದ ದುರದೃಷ್ಟಕರ ಬಸ್ ಅಪಘಾತದ ಬಗ್ಗೆ ತಿಳಿದು ಅತೀವ ನೋವಾಗಿದೆ. ಸಂತ್ರಸ್ತರ ಕುಟುಂಬದವರಿಗೆ ನನ್ನ ಸಂತಾಪಗಳು. ಅವರಿಗೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.

ರಾಷ್ಟ್ರಪತಿ ಕೋವಿಂದ್ ಸಂತಾಪ
ಅಪಘಾತದ ಬಗ್ಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಆಘಾತ ವ್ಯಕ್ತಪಡಿಸಿದ್ದಾರೆ. ಹಿಮಾಚಲ ಪ್ರದೇಶದ ಕುಲ್ಲುವಿನಲ್ಲಿ ನಡೆದ ಬಸ್ ಅಪಘಾತ ದುರಂತದ ಬಗ್ಗೆ ತಿಳಿದು ಅತೀವ ದುಃಖವಾಯಿತು. ಸಂತ್ರಸ್ತರ ಕುಟುಂಬದವರು ಹಾಗೂ ಗಾಯಾಳುಗಳಿಗೆ ಪ್ರಾರ್ಥಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.












Click it and Unblock the Notifications