Himachal Pradesh CM : ಮುಖ್ಯಮಂತ್ರಿಯನ್ನು ನಿರ್ಧರಿಸಲು ಇಂದು ಹಿಮಾಚಲ ಕಾಂಗ್ರೆಸ್ ಶಾಸಕರ ಸಭೆ
ಶಿಮ್ಲಾ ಡಿಸೆಂಬರ್ 9: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶ ಬಿಡುಗಡೆಯಾಗಿದ್ದು ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಬಿಜೆಪಿಗೆ ತೀವ್ರ ಪೈಪೋಟಿ ನೀಡುವ ಮೂಲಕ ಹಿಮಾಚಲದಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಮುಂದಾದ ಕಾಂಗ್ರೆಸ್ ಇಂದು ಶಾಸಕರ ಸಭೆ ಕರೆದಿದೆ. ಜೊತೆಗೆ ಇದೇ ಸಭೆಯಲ್ಲಿ ಮುಖ್ಯಮಂತ್ರಿಯನ್ನು ನಿರ್ಧರಿಸಲಾಗುವುದು ಎಂದು ಹೇಳಲಾಗುತ್ತಿದೆ.
ಇವರೇ.. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವಿನ ರೂವಾರಿ
ಈ ಹಿಂದೆ ಪಕ್ಷವು ತನ್ನ ಎಲ್ಲಾ ಶಾಸಕರನ್ನು ಚಂಡೀಗಢಕ್ಕೆ ಕರೆದಿತ್ತು. ಆದರೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದ ನಂತರ ತನ್ನ ಯೋಜನೆಯನ್ನು ಬದಲಾಯಿಸಿತು. "ಹೊಸದಾಗಿ ಚುನಾಯಿತರಾದ ಕಾಂಗ್ರೆಸ್ ಶಾಸಕರು ಶುಕ್ರವಾರದಂದು ಶಿಮ್ಲಾದಲ್ಲಿ ಸಭೆ ನಡೆಸಿ ಹೊಸ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಬಗ್ಗೆ ನಿರ್ಧರಿಸಲಿದ್ದಾರೆ" ಎಂದು ಹಿಮಾಚಲ ಪ್ರದೇಶದ ಉಸ್ತುವಾರಿ ರಾಜೀವ್ ಶುಕ್ಲಾ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಹಿಮಾಚಲ ಮುಖ್ಯಮಂತ್ರಿ ನಿರ್ಧಾರ
"ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಹಿರಿಯ ನಾಯಕ ಭೂಪಿಂದರ್ ಹೂಡಾ ಅವರು ಚುನಾವಣೆಯಲ್ಲಿ ಗೆಲ್ಲಲು ಸಹಕಾರಿಯಾಗಿದ್ದಾರೆ. ನಾವು ಇಂದು ಶಿಮ್ಲಾಗೆ ಪ್ರಯಾಣಿಸಲಿದ್ದೇವೆ, ಅಲ್ಲಿ ಪಕ್ಷದ ಎಲ್ಲಾ ಶಾಸಕರನ್ನು ಕರೆಯಲಾಗಿದೆ" ಎಂದು ಶುಕ್ಲಾ ಹೇಳಿದರು.
ಇನ್ನೂ ಸುಖ್ವಿಂದರ್ ಸಿಂಗ್ ಸುಖು, ಮುಕೇಶ್ ಅಗ್ನಿಹೋತ್ರಿ ಮತ್ತು ಪ್ರತಿಭಾ ಸಿಂಗ್ ಅವರು ಮುಖ್ಯಮಂತ್ರಿ ಹುದ್ದೆಯ ರೇಸ್ನಲ್ಲಿದ್ದಾರೆ. ಸಿಂಗ್ಹಾಲಿ ಸಂಸದರಾಗಿದ್ದರೆ, ಸುಖು ಮತ್ತು ಅಗ್ನಿಹೋತ್ರಿ ಹಾಲಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇವರೊಂದಿಗೆ ಆಶಾ ಕುಮಾರಿ ಮತ್ತು ಕೌಲ್ ಸಿಂಗ್ ಠಾಕೂರ್ ಅವರೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ.
68 ಸ್ಥಾನಗಳ ಪೈಕಿ 'ಕೈ' ಸೇರಿದ 40 ಸ್ಥಾನ
ರಾಜ್ಯದ 68 ಸ್ಥಾನಗಳ ಪೈಕಿ 40 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಬಿಜೆಪಿಯು ಗುಜರಾತ್ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರೂ, ಉತ್ತರ ರಾಜ್ಯ ಹಿಮಾಚಲದಲ್ಲಿ 25 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮುಖ್ಯಮಂತ್ರಿ ಜೈರಾಮ್ ಠಾಕೂರ್ ಈಗಾಗಲೇ ಸೋಲನ್ನು ಒಪ್ಪಿಕೊಂಡಿದ್ದಾರೆ. ರಾಜೀನಾಮೆಯನ್ನೂ ಸಲ್ಲಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ತವರು ರಾಜ್ಯ ಹಿಮಾಚಲದಲ್ಲಿ 68 ಕ್ಷೇತ್ರಗಳ ಪೈಕಿ ಕನಿಷ್ಠ 21 ಕ್ಷೇತ್ರಗಳಲ್ಲಿ ಬಿಜೆಪಿ ಬಂಡಾಯವೆದ್ದಿತ್ತು. ಅವರಲ್ಲಿ ಇಬ್ಬರು ಮಾತ್ರ ಗೆದ್ದರು, ಆದರೆ ಇತರರು ಗಮನಾರ್ಹ ಮತಗಳನ್ನು ಪಡೆದರು, ಅದು ಆದರ್ಶಪ್ರಾಯವಾಗಿ ಬಿಜೆಪಿಗೆ ಗೆಲುವು ತಂದುಕೊಟ್ಟಿದೆ.
ಇವರೇ ಹಿಮಾಚಲದಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣರು
ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಉತ್ತಮ ಪ್ರದರ್ಶನಕ್ಕಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ. ವಾದ್ರಾ ಅವರ ನೇತೃತ್ವದಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪ್ರಚಾರವನ್ನು ಮಾಡಿದ್ದಾರೆ. ಪ್ರಿಯಾಂಕಾ ಗಾಂಧಿ ಹಿಮಾಚಲ ಪ್ರದೇಶದಲ್ಲಿ ಪಕ್ಷದ ಉಸ್ತುವಾರಿಯನ್ನು ಹಲವು ರ್ಯಾಲಿಗಳೊಂದಿಗೆ ಮುನ್ನಡೆಸಿದರು. ಚುನಾವಣೆಯ ಕಾರ್ಯತಂತ್ರದ ಯೋಜನೆಯಲ್ಲಿ ನಿಕಟವಾಗಿ ತೊಡಗಿಸಿಕೊಂಡಿದ್ದರು. ಪ್ರಚಾರದ ಹೊಣೆ ಹೊತ್ತಿರುವ ಪ್ರಿಯಾಂಕಾ ಗಾಂಧಿಯವರ ಮೊದಲ ಚುನಾವಣಾ ಯಶಸ್ಸು ಇದಾಗಿದೆ. ಈ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅವರು ಪ್ರಚಾರವನ್ನು ಮುನ್ನಡೆಸಿದಾಗ ಪಕ್ಷವು ಸೋತಿತ್ತು.
ಗುಜರಾತ್ನಲ್ಲಿ ಮತ್ತೆ ಅರಳಿದ ಕಮಲ
ಬಿಜೆಪಿ ಈ ಬಾರಿಯ ಹಿಮಾಚಲ ಪ್ರದೇಶ ಚುನಾವಣೆಯನ್ನು ಸಂಪ್ರದಾಯ ಬದಲಾಗುತ್ತಿದೆ (ರಿವಾಜು ಬದಲಾವಣೆಯಾಗುತ್ತಿದೆ) ಎಂಬ ಘೋಷ ವಾಕ್ಯದಲ್ಲಿ ಎದುರಿಸಿತ್ತು. ಆದರೆ ಅದು ಘೋಷ ವಾಕ್ಯಕ್ಕೆ ಅಷ್ಟೇ ಸೀಮಿತವಾಗಿ ಕಾಂಗ್ರೆಸ್ 5 ವರ್ಷಗಳ ನಂತರ ಅಧಿಕಾರಕ್ಕೇರುತ್ತಿದೆ. ಇತ್ತ ಗುಜರಾತ್ನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಪಟೇಲರ ಬಲವನ್ನು ಹೊಂದಿದ ಬಿಜೆಪಿ ಈ ಬಾರಿಯೂ ಸುಲಭವಾಗಿ ಬಹುಮತದೊಂದಿಗೆ ಜಯ ಸಾಧಿಸಿದೆ. ಬಿಜೆಪಿ ಭದ್ರಕೋಟೆ ಎಂದೇ ಕರೆಯಲ್ಪಡುವ ಗುಜರಾತ್ನಲ್ಲಿ ಕಮಲ ಮತ್ತೆ ಅರಳಿದೆ.