ಹಿಮಾಚಲ ಸಚಿವ ಸಂಪುಟ ರಚನೆ ವಿಳಂಬ: ಕಾಂಗ್ರೆಸ್ನಲ್ಲಿ ಸಚಿವಾಂಕಾಕ್ಷಿಗಳು ಬಂಡಾಯವೇಳುವ ಭೀತಿ
ಗುಜರಾತ್ನಲ್ಲಿನ ಹೀನಾಯ ಸೋಲಿನ ನಡುವೆಯೂ ಹಿಮಾಚಲದಲ್ಲಿ ಬಹುಮತ ಪಡೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಆದರಿನ್ನೂ ಕಾಂಗ್ರೆಸ್ಗೆ ಸಚಿವ ಸಂಪುಟ ರಚನೆ ಮಾಡಲು ಸಾಧ್ಯವಾಗಲಿಲ್ಲ. ಹಿಮಾಚಲ ಪ್ರದೇಶದಲ್ಲಿ ಮುಖ್ಯಮಂತ್ರಿ ವಿಚಾರದಲ್ಲಿ ಪ್ರತಿಭಾ ಸಿಂಗ್, ಸುಖ್ವಿಂದರ್ ಸುಖು ಮತ್ತು ಮುಖೇಶ್ ಅಗ್ನಿಹೋತ್ರಿ ನಡುವೆ ಜಟಾಪಟಿ ನಡೆದಿದೆ. ಕಾಂಗ್ರೆಸ್ ಹೈಕಮಾಂಡ್ ಸುಖ್ವಿಂದರ್ ಸುಖು ಅವರನ್ನು ಮುಖ್ಯಮಂತ್ರಿ ಮಾಡಿ ಮುಖೇಶ್ ಅಗ್ನಿಹೋತ್ರಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡುವ ಮೂಲಕ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಿದೆ. ಇತ್ತ ಪ್ರತಿಭಾ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಅವರಿಗೆ ಸುಖು ಸಂಪುಟದಲ್ಲಿ ಸ್ಥಾನ ನೀಡುವ ಭರವಸೆ ನೀಡಲಾಗಿದೆ.
ಆದರೆ ಮುಖ್ಯಮಂತ್ರಿ ಸುಖ್ವಿಂದರ್ ಸುಖು ಮತ್ತು ಉಪಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ ಅವರು ಪ್ರಮಾಣ ವಚನ ಸ್ವೀಕರಿಸಿ 11 ದಿನಗಳು ಕಳೆದರೂ ಸಂಪುಟ ರಚಿಸಲು ಸಾಧ್ಯವಾಗಿಲ್ಲ. ಪ್ರಮಾಣ ವಚನ ಸ್ವೀಕಾರದ ನಂತರ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಪಕ್ಷದಲ್ಲಿ ಯಾವುದೇ ಜಗಳವಿಲ್ಲ ಮತ್ತು 48 ಗಂಟೆಗಳಲ್ಲಿ ಸಂಪುಟ ರಚನೆಯಾಗಲಿದೆ ಎಂದು ಹೇಳಿದ್ದರು. ಆದರೆ ಸುಖು ಅವರು ಹೇಳಿದಂತೆ ಇನ್ನೂ ಸಚಿವ ಸಂಪುಟವನ್ನು ರಚಿಸಲು ಸಾಧ್ಯವಾಗಿಲ್ಲ.
ಹಿಮಾಚಲ ಸಚಿವ ಸಂಪುಟ
ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಪ್ರಚಾರದಿಂದ ದೂರ ಉಳಿದಿರುವ ರಾಹುಲ್ ಗಾಂಧಿ ಕೂಡ ಸಂಪುಟ ರಚನೆಯಲ್ಲಿ ಯಾವುದೇ ಪಾತ್ರ ವಹಿಸುತ್ತಿಲ್ಲ. ಟಿಕೆಟ್ ಹಂಚಿಕೆಯಿಂದ ಹಿಡಿದು ಪ್ರಚಾರದವರೆಗೂ ಹಿಡಿತ ಸಾಧಿಸಿರುವ ಪ್ರಿಯಾಂಕಾ ಗಾಂಧಿ ಈಗಲೂ ಹಿಮಾಚಲ ಪ್ರದೇಶವನ್ನು ನಿಭಾಯಿಸುತ್ತಿದ್ದಾರೆ. ಹಿಮಾಚಲ ಪ್ರದೇಶದ ಉಸ್ತುವಾರಿ ರಾಜೀವ್ ಶುಕ್ಲಾ ಅವರು ಸಚಿವ ಸಂಪುಟ ರಚನೆಗೆ ಸಂಬಂಧಿಸಿದಂತೆ ಎರಡು ಬಾರಿ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಮತ್ತು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ ಪ್ರತಿಭಾ ಸಿಂಗ್ ಕೂಡ ದೆಹಲಿಯಲ್ಲಿ ಪ್ರಿಯಾಂಕಾ ಗಾಂಧಿಯನ್ನು ಭೇಟಿಯಾಗಿ ತಮ್ಮ ಪಟ್ಟಿಯನ್ನು ನೀಡಿದ್ದಾರೆ. ಶಾಸಕರು ಕೂಡ ತಮ್ಮ ಸಂಪರ್ಕವನ್ನು ಬಳಸಿಕೊಂಡು ದೆಹಲಿಯಲ್ಲಿ ಬೀಡುಬಿಟ್ಟು ಸಚಿವರಾಗಲು ಪ್ರಯತ್ನಿಸುತ್ತಿದ್ದಾರೆ. ಆದರೆ ಎಲ್ಲಾ ಮುಖಂಡರ ಶಿಫಾರಸುಗಳ ನಡುವೆ, ಹೈಕಮಾಂಡ್ ಇದುವರೆಗೆ ಸಚಿವ ಸಂಪುಟವನ್ನು ಅಂತಿಮಗೊಳಿಸುವಲ್ಲಿ ವಿಫಲವಾಗಿದೆ.
ಇದರ ನಡುವೆ ಮುಖ್ಯಮಂತ್ರಿ ಸುಖ್ವಿಂದರ್ ಸುಖು ಅವರು ಕೊರೊನಾ ಪಾಸಿಟಿವ್ ಆದ ನಂತರ ಎಲ್ಲಾ ಸಭೆಗಳು ಮತ್ತು ಕ್ಯಾಬಿನೆಟ್ ರಚನೆಯ ಓಟದಿಂದ ದೂರವಿದ್ದಾರೆ. ಮುಖ್ಯಮಂತ್ರಿ ಕೊರೊನಾ ಪಾಸಿಟಿವ್ ಆಗಿರುವ ಕಾರಣ ಸಚಿವ ಸಂಪುಟ ವಿಸ್ತರಣೆಯನ್ನು ಈ ವರ್ಷಾಂತ್ಯಕ್ಕೆ ಮುಂದೂಡುವ ಸಾಧ್ಯತೆ ಇದೆ.
ಸಚಿವ ಸಂಪುಟ ವಿಸ್ತರಣೆಯಲ್ಲಿ ದೊಡ್ಡ ಸಮಸ್ಯೆ
ಕಾಂಗ್ರೆಸ್ನಿಂದ ಚುನಾಯಿತ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿರುವುದು ಮತ್ತು ರಾಜ್ಯದ ದೊಡ್ಡ ನಾಯಕರ ನಡುವೆ ನಡೆಯುತ್ತಿರುವ ಜಟಾಪಟಿ ಸಚಿವ ಸಂಪುಟ ರಚನೆಯ ಕೆಲಸವನ್ನು ಇನ್ನಷ್ಟು ಕಷ್ಟಕರವಾಗಿಸಿದೆ. ಉಪಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿದ ಧನಿರಾಮ್ ಶಾಂಡಿಲ್ಯರಂತಹ ನಾಯಕರು ಯಾವುದೇ ಬೆಲೆ ತೆತ್ತಾದರೂ ಸರ್ಕಾರಕ್ಕೆ ಸೇರಲು ಬಯಸಿದ್ದಾರೆ. ಎಲ್ಲದರ ನಡುವೆ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕತ್ವದ ಸಮಸ್ಯೆ ಅಂದರೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹೊರತಾಗಿ ರಾಜ್ಯದಲ್ಲಿ ಗರಿಷ್ಠ 10 ಮಂತ್ರಿಗಳು ಇರಬಹುದು. ಇಂತಹ ಪರಿಸ್ಥಿತಿಯಲ್ಲಿ ಯಾರನ್ನು ಸಚಿವರನ್ನಾಗಿ ಮಾಡಬೇಕು, ಯಾರನ್ನು ಕೈಬಿಡಬೇಕು ಎಂಬುದನ್ನು ಎಲ್ಲಾ ಸ್ಪರ್ಧಿಗಳ ನಡುವೆ ನಿರ್ಧರಿಸಲು ಕಾಂಗ್ರೆಸ್ನ ಕೇಂದ್ರ ನಾಯಕತ್ವಕ್ಕೆ ಸಾಧ್ಯವಾಗುತ್ತಿಲ್ಲ. ಇದಲ್ಲದೇ ಜಾತಿ, ಪ್ರಾದೇಶಿಕ, ಪಂಗಡಗಳನ್ನು ಸರಿದೂಗಿಸುವ ಕಠಿಣ ಸವಾಲು ಕಾಂಗ್ರೆಸ್ನ ಕೇಂದ್ರ ನಾಯಕತ್ವ ಮತ್ತು ಮುಖ್ಯಮಂತ್ರಿಗೆ ಇದೆ.
ಸಚಿವ ಸಂಪುಟ ವಿಸ್ತರಣೆಯಲ್ಲಿ ದೊಡ್ಡ ಸಮಸ್ಯೆ ಎದುರಾಗಿದ್ದು ಶಿಮ್ಲಾ ಜಿಲ್ಲೆ. ಸುಖ್ವಿಂದರ್ ಸುಖು, ಹಾಲಿಲಾಡ್ಜ್ನ ಮೋಹನ್ ಲಾಲ್ ಬ್ರಾಕ್ತ ಮತ್ತು ಸೋನಿಯಾ ಗಾಂಧಿಯವರ ಖಾಸ್ ಥಿಯೋಗ್ ಶಾಸಕ ಮತ್ತು ಮಾಜಿ ರಾಜ್ಯಾಧ್ಯಕ್ಷ ಕುಲದೀಪ್ ಸಿಂಗ್ ರಾಥೋಡ್, ವಿಕ್ರಮಾದಿತ್ಯ ಸಿಂಗ್ ಹೆಸರು ಸಚಿವ ಸ್ಥಾನಕ್ಕಾಗಿ ಬಹುತೇಕ ಫಿಕ್ಸ್ ಆಗಿದೆ ಎನ್ನಲಾಗುತ್ತಿದೆಯಾದರೂ ಇದು ಎಷ್ಟರ ಮಟ್ಟಿಗೆ ನಿಜ ಎನ್ನುವುದು ಇನ್ನೂ ನಿಖರತೆ ಇಲ್ಲ.
ಶಿಮ್ಲಾದಿಂದ 2 ಸಚಿವರಾಗುವುದು ಖಚಿತ. ಇಲ್ವಾದರೆ ಗರಿಷ್ಠ 3 ಜನ ಮಂತ್ರಿಗಳನ್ನಾಗಿ ಮಾಡಬಹುದು. ಆದರೆ ಇಲ್ಲಿನ ಸ್ಪರ್ಧಿಗಳ ಸಂಖ್ಯೆ 5 ಇದೆ ಎಂದು ಹೇಳಲಾಗುತ್ತಿದೆ. ಸುಖ್ವಿಂದರ್ ಸುಖು ಅವರಿಗೆ ಆಪ್ತರಾಗಿರುವ ಇಬ್ಬರು ಶಾಸಕರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ.
ಯಾರಿಗೆ ಒಲಿಯಲಿದೆ ಸಚಿವ ಸ್ಥಾನ?
ಕಾಂಗ್ರಾದಿಂದ ಗರಿಷ್ಠ 3 ಸಚಿವರನ್ನು ನಿಗದಿಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಚಂದ್ರಕುಮಾರ್ ಹಾಗೂ ಸುಧೀರ್ ಶರ್ಮಾ ಸಂಪುಟ ಸೇರುವ ಸಾಧ್ಯತೆ ದಟ್ಟವಾಗಿದೆ. ಮೂರನೇ ಸಚಿವರಾಗಿ ಸಂಜಯ್ ರತ್ನ, ಕೇವಲ್ ಸಿಂಗ್ ಪಠಾನಿಯಾ, ಆಶಿಶ್ ಬುಟೈಲ್ ಯಾರಿಗಾದರೂ ಸಚಿವ ಸ್ಥಾನ ಸಿಗಬಹುದು. ಮುಖ್ಯಮಂತ್ರಿಯಾಗಲು ಸಾಧ್ಯವಾಗದ ಮಂಡಿ ಸಂಸದ ಹಾಗೂ ರಾಜ್ಯಾಧ್ಯಕ್ಷೆ ಪ್ರತಿಭಾ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಚಿವರಾಗಲು ಸಜ್ಜಾಗಿದ್ದಾರೆ. ವಿಕ್ರಮಾದಿತ್ಯ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿಗಳು ಸಾರ್ವಜನಿಕವಾಗಿ ಘೋಷಿಸಿದ್ದಾರೆ. ಸಚಿವ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಶಾಸಕರಲ್ಲಿ ಚಂಬಾ ಜಿಲ್ಲೆಯಿಂದ ಕುಲದೀಪ್ ಪಠಾನಿಯಾ, ಧನಿರಾಮ್ ಶಾಂದಿಲ್ ಅಥವಾ ಸಂಜಯ್ ಅವಸ್ಥಿ ಮತ್ತು ಸೋಲನ್ನಿಂದ ರಾಮ್ ಕುಮಾರ್, ಕಿನ್ನೌರ್ನಿಂದ ಜಗತ್ ಸಿಂಗ್ ನೇಗಿ, ಲಾಹೌಲ್ ಸ್ಪಿತಿಯಿಂದ ರವಿ ಠಾಕೂರ್, ಸಿರ್ಮೌರ್ನಿಂದ ಹರ್ಷವರ್ಧನ್ ಚೌಹಾಣ್, ಘುಮರ್ವಿನ್ ಹೆಸರುಗಳಿವೆ. ಹಮೀರ್ಪುರದಿಂದ ರಾಜೇಶ್ ಧರ್ಮನಿ, ರಾಜೇಂದ್ರ ರಾಣಾ, ಕುಲುವಿನಿಂದ ಸುಂದರ್ ಸಿಂಗ್ ಠಾಕೂರ್ ಅವರುಗಳೂ ಪ್ರಮುಖರಾಗಿದ್ದಾರೆ.
ಹೀಗಿರುವಾಗ ಹಿಮಾಚಲದಲ್ಲಿ ಸುಖು ಅವರ ಸಂಪುಟದಲ್ಲಿ ಯಾರಿಗೆ ಸ್ಥಾನ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಆದರೆ ಸುಖು ಅವರ ಸರ್ಕಾರದಲ್ಲಿ ಒಬ್ಬ ಮಹಿಳಾ ಮಂತ್ರಿಯೂ ಇಲ್ಲ ಎಂಬುದು ಖಚಿತವಾಗಿದೆ. ಬಹುಶಃ ರಾಜ್ಯದ ಇತಿಹಾಸದಲ್ಲಿ ಮಹಿಳಾ ಸಚಿವೆ ಇಲ್ಲದಿರುವುದು ಇದೇ ಮೊದಲು. ಕಾಂಗ್ರೆಸ್ನಿಂದ ಒಬ್ಬ ಮಹಿಳಾ ಅಭ್ಯರ್ಥಿಯೂ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗದ ಕಾರಣ ಇದು ಸಂಭವಿಸಬಹುದು ಎಂದು ಹೇಳಲಾಗುತ್ತಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ದಲ್ಹೋಜಿಯಿಂದ ಆಶಾ ಕುಮಾರಿ, ಪಚ್ಚಾಡ್ನಿಂದ ದಯಾಳ್ ಪ್ಯಾರಿ ಮತ್ತು ಮಂಡಿಯಿಂದ ಚಂಪಾ ಠಾಕೂರ್ಗೆ ಕಾಂಗ್ರೆಸ್ ಟಿಕೆಟ್ ನೀಡಿ ಮೂರೂ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಿತ್ತು. ರಾಜ್ಯದ 68 ವಿಧಾನಸಭಾ ಕ್ಷೇತ್ರಗಳ ಪೈಕಿ ಒಬ್ಬ ಮಹಿಳೆ ಮಾತ್ರ ಬಿಜೆಪಿಯ ರೀನಾ ಕಶ್ಯಪ್ ಪಚ್ಚಾಡ್ನಿಂದ ಗೆದ್ದಿದ್ದಾರೆ.
ಪಕ್ಷದ ವಿರುದ್ಧ ಬಂಡಾಯವೇಳ್ತಾರಾ ಸಚಿವಾಕಾಂಕ್ಷಿಗಳು
ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ಕಾಂಗ್ರೆಸ್ನಲ್ಲಿ ಸಚಿವ ಸಂಪುಟ ರಚನೆಯ ಜಗಳಕ್ಕೆ ತಿರುಗೇಟು ನೀಡಿದ್ದು, 'ಗುಜರಾತ್ನಲ್ಲಿ ಸರ್ಕಾರ ರಚನೆಯಾದ 72 ಗಂಟೆಗಳಲ್ಲಿ ಸಚಿವರಿಗೆ ಖಾತೆಗಳನ್ನು ಸಹ ಹಂಚಿಕೆ ಮಾಡಲಾಗಿದೆ. ಆದರೆ ಹಿಮಾಚಲದಂತಹ ಚಿಕ್ಕ ರಾಜ್ಯದಲ್ಲಿ ಕಾಂಗ್ರೆಸ್ ನ ಗುಂಪುಗಾರಿಕೆಯಿಂದಾಗಿ ರಾಜ್ಯಕ್ಕೆ ಸಂಕಷ್ಟ ಎದುರಾಗಿದೆ' ಎಂದಿದ್ದಾರೆ.
ಸುಖು ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿದ್ದರೆ ಶಾಸಕರು ಪಕ್ಷ ಬದಲಿಸುವುದನ್ನು ತಡೆಯುವ ಸವಾಲು ಕೂಡ ಕಾಂಗ್ರೆಸ್ ಮುಂದಿದೆ. ಸಚಿವರಾಗಿರುವ ಶಾಸಕರನ್ನು ತಮ್ಮ ಪರವಾಗಿ ಸೆಳೆದುಕೊಂಡು ಪಕ್ಷದ ವಿರುದ್ಧ ಬಂಡಾಯವೇರಲು ಬಿಜೆಪಿ ಎಲ್ಲ ತಂತ್ರಗಳನ್ನು ಹೆಣೆಯುವುದು ನಿಶ್ಚಿತ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ಗೆ ತನ್ನ ಶಾಸಕರನ್ನು ಜೊತೆಯಲ್ಲಿ ಇಟ್ಟುಕೊಳ್ಳುವುದು ಸುಲಭವಲ್ಲ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ಮುಖ್ಯಮಂತ್ರಿಗಳು ಕೂಡ ಎಲ್ಲ ಶಾಸಕರಿಗೆ ಒಂದಲ್ಲ ಒಂದು ಜವಾಬ್ದಾರಿ ನೀಡಿ ಅವರನ್ನು ತೃಪ್ತಿ ಪಡಿಸಿ ರಾಜ್ಯದಲ್ಲಿ ಬಂಡಾಯ ಎಬ್ಬಿಸುವ ಪ್ರಯತ್ನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಹಿಮಾಚಲ ರಾಜಕೀಯದಲ್ಲಿ ಏನೆಲ್ಲಾ ಬದಲಾವಣೆಗಳಾಗಲಿವೆ ಎನ್ನುವ ಬಗ್ಗೆ ಕಾದು ನೋಡಬೇಕಿದೆ.